ರಾಮಮಂದಿರ ಆಮಂತ್ರಣ ತಿರಸ್ಕರಿಸಿದವರನ್ನು ದೇಶದ ಜನರೇ ತಿಸ್ಕರಿಸಿದ್ದಾರೆ: ಸಿಎಂಗೆ ಜೋಶಿ ಕೊಟ್ಟ ಸಲಹೆ ಏನು?
ಬೆಂಗಳೂರು, ಜನವರಿ 11: ದೇಶಾದ್ಯಂತ ಶ್ರೀರಾಮನ ಜಪ ಶುರುವಾಗಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿ ರಾಜಕೀಯ ಬಳಸಿಕೊಳ್ಳುತ್ತಿದೆ ಎಂದಿರುವ ಕಾಂಗ್ರೆಸ್ ನಾಯಕರು ಜ.22ರಂದು ಉದ್ಘಾಟನೆಗೆ ಬರದೇ ಇರಲು ನಿರ್ಧರಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಏನಂದ್ರು? ಎಂಬ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ ನವರು ಶ್ರೀರಾಮ ಮಂದಿರ ಉದ್ಘಾಟನೆ ಆಮಂತ್ರಣ ತಿರಸ್ಕರಿಸುವ ಮೊದಲೇ ದೇಶದ ಜನರು ಹಾಗೂ ರಾಮ ಭಕ್ತರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ಗೆ ತಿರುಗೇಟು ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಸಚಿವ ಜೋಶಿ ಅವರು, ಅಯೋಧ್ಯೆಯಲ್ಲಿ ರಾಜಕೀಯ ಮಾಡಲು, ಅಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹೊರತು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ್ಯಾಲಿ ಅಲ್ಲ ಎಂದು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಕ್ತಿ, ಶ್ರದ್ಧೆ ಇದ್ದವರು ರಾಜಕೀಯ ಮಾಡದೇ ಬರಲಿ
ಶ್ರೀರಾಮನ ಮೇಲೆ ನಂಬಿಕೆ, ಭಕ್ತಿ, ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ ರಾಜಕೀಯ ಮಾಡದೆ ಮಂದಿರಕ್ಕೆ ಭೇಟಿ ನೀಡುತ್ತಾರೆ ಎಂದು ಅವರು ಕುಟುಕಿದ್ದಾರೆ. ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಇಂತಹ ವಿಚಾರ ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದ್ದೀರಿ. ಇಂಥ ರಾಜಕೀಯವನ್ನು ತಾವು ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.
ರಾಮನಿಗೆ ಅಳಿಲು ಸೇವೆ ನಿಮ್ಮಿಂದಾಗಿಲ್ಲ
ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದ ಜನತೆಗೆ ಅರ್ಥವಾಗಿದೆ ಕರ್ನಾಟಕದಲ್ಲಿ ನಿಮ್ಮ "ಸುಳ್ಳಿನ ಸರಕಾರ ಎತ್ತ ಸಾಗುತ್ತಿದೆ" ಎಂದು. ರಾಮ ಈ ದೇಶದ ಸಂಸ್ಕೃತಿ. ರಾಮನಿಗಾಗಿ ಅಳಿಲು ಸೇವೆಯೂ ಕಾಂಗ್ರೆಸ್ ನವರಿಂದ ಆಗಿಲ್ಲ. ಹೀಗಿರುವಾಗ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನವರು ಯಾವ ಮುಖ ಇಟ್ಟುಕೊಂಡು ಬರುತ್ತಾರೆ? ಅದಕ್ಕಾಗಿ ಈ ರೀತಿ ಆಮಂತ್ರಣ ತಿರಸ್ಕರದ ಪ್ರಹಸನ ಮಾಡುತ್ತಿದ್ದಾರೆ.
ಇವರಿಗಿಂತ ಮೊದಲು ರಾಮ ಭಕ್ತರು ಇವರನ್ನ ತಿರಸ್ಕರಿಸಿ ಆಗಿದೆ. ಧಾರ್ಮಿಕವಾಗಿ ಅಲ್ಲದಿದ್ದರೂ, ರಾಮನನ್ನ ನಮ್ಮ ಸಾಂಸ್ಕೃತಿಕ ದೃಷ್ಠಿಯಿಂದ ನೋಡುವ ಮುಸ್ಲಿಂ, ಕ್ರಿಶ್ಚಿಯನ್ ಅನ್ಯ ಧರ್ಮದವರು ಕಾಂಗ್ರೆಸ್ ಅನ್ನ ತಿರಸ್ಕರಿಸುವ ಕಾಲ ಸನ್ನಿ ಹಿತದಲ್ಲಿದೆ ಎಂದು ಸಚಿವ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಶ್ರೀರಾಮ ಮಂದಿ ಹಾಜರಾತಿ ಬಗ್ಗೆ ಸಿಎಂ ಹೇಳಿದ್ದೇನು?
ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತೆರಳದೆ ಇರಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದನ್ನು ಸಿಎಂ ಸಿದ್ದರಾಮಯ್ಯ ಬೆಂಬಲಿಸಿದ್ದಾರೆ. ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌದರಿ ಅವರ ತೀರ್ಮಾನ ಸರಿಯಾಗಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಶ್ರದ್ಧಾ ಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹವಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಹ್ಲಾದ್ ಜೋಶಿಯವರು ತಿರುಗೇಟು ನೀಡಿದ್ದಾರೆ.












Click it and Unblock the Notifications