ಅಮಿತ್ ಶಾ ಭೇಟಿ ಬಳಿಕ ಕರ್ನಾಟಕ ಬಿಜೆಪಿಯಿಂದ ಮಹತ್ವದ ಘೋಷಣೆ
ಬೆಂಗಳೂರು, ಜನವರಿ 01; ಕೇಂದ್ರ ಗೃಹ ಸಚಿವ, ಬಿಜೆಪಿಯವರ ಪಾಲಿನ ಚುನಾವಣಾ ಚಾಣಾಕ್ಯ ಅಮಿತ್ ಶಾ ಕರ್ನಾಟಕ ಪ್ರವಾಸ ಮುಗಿಸಿ ವಾಪಸ್ ಆಗಿದ್ದಾರೆ. 2023ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಮಹತ್ವದ ಘೋಷಣೆ ಮಾಡಿದೆ.
ಕರ್ನಾಟಕದಿಂದ ಅಮಿತ್ ಶಾ ನಿರ್ಗಮಿಸುತ್ತಿದ್ದಂತೆಯೇ ಬಿಜೆಪಿ 'ಬೂತ್ ವಿಜಯ ಅಭಿಯಾನ' ಘೋಷಣೆ ಮಾಡಿದೆ. ಗುಜರಾತ್ ರಾಜ್ಯದ ಮಾದರಿಯಲ್ಲಿಯೇ ಈ ಅಭಿಯಾನ ರಾಜ್ಯದಲ್ಲಿ ನಡೆಯಲಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈ ಹೊತ್ತಿನಲ್ಲಿ ಗುಜರಾತ್ ಮಾದರಿಯ ಬೂತ್ ವಿಜಯ ಅಭಿಯಾನವನ್ನು ರಾಜ್ಯದಲ್ಲೂ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಸೋಮವಾರದಿಂದ 10 ದಿನಗಳ ಬೂತ್ ವಿಜಯ ಅಭಿಯನದ ವೇಳಾಪಟ್ಟಿಯನ್ನು ಘೋಷಿಸಿದರು. ಈ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು ಕೈ ಜೋಡಿಸಲಿದ್ದಾರೆ ಎಂದರು.
"ಚುನಾವಣಾ ಚಾಣಾಕ್ಯ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ರಾಜ್ಯದಲ್ಲಿ ಬಿಜೆಪಿ ಹಲವು ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಬೂತ್ ವಿಜಯ ಅಭಿಯಾನ ಮಹತ್ವದ್ದಾಗಿದೆ. ಪ್ರತಿಯೊಂದು ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಮತ ತರುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ" ಎಂದು ಪ್ರಹ್ಲಾದ್ ಜೋಶಿ ವಿವರಿಸಿದರು.
ಎಂಥಹ ಬೂತ್ ಆಯ್ಕೆ?; "ಕಳೆದ ಚುನಾವಣೆಯಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಎಲ್ಲಿ ಕಡಿಮೆ ಮತಗಳನ್ನು ಪಡೆದಿದೆಯೋ, ಅದನ್ನು ಪತ್ತೆ ಹಚ್ಚಲಾಗಿದೆ. ಎಲ್ಲಾ ಬೂತ್ ಗಳಲ್ಲಿ ನಮ್ಮ ಪಕ್ಷ ಗೆಲ್ಲಬೇಕೆಂಬುದು ಅಭಿಯಾನದ ಪರಿಕಲ್ಪನೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ನೀಡಿದ ಯೋಜನೆಗಳನ್ನು ಬೂತ್ ವಿಜಯ ಅಭಿಯಾನದಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ" ಎಂದು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

"ಅಭಿಯಾನದ ವೇಳೆ ಪ್ರತಿ ಮತಗಟ್ಟೆಯ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ 25 ಕಾರ್ಯಕರ್ತರಿಂದ ಪಕ್ಷದ ಧ್ವಜಾರೋಹಣ ನೆರವೇರಲಿದೆ. ಒಟ್ಟಾರೆ ರಾಜ್ಯದಲ್ಲಿ 50 ಲಕ್ಷ ಪಕ್ಷದ ಧ್ವಜಗಳನ್ನು ಹಾರಿಸುವ ಗುರಿ ಹೊಂದಲಾಗಿದ್ದು, ರಾಜ್ಯದಲ್ಲಿ 20 ಲಕ್ಷ ಕಾರ್ಯಕರ್ತರು ಈ ಕಾರ್ಯಕ್ಕೆ ಜೋಡಿಸಲಿದ್ದಾರೆ" ಎಂದರು.
ಪಕ್ಷದ ಎಲ್ಲಾ ಹಿರಿಯರು ಬೂತ್ ವಿಜಯ್ ಅಭಿಯಾನದಲ್ಲಿ ಭಾಗಿಯಾಗಲಿದ್ದು, ಜನವರಿ 12 ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆ. ಅಂದು ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ಯುವಕರ ಸಮಾವೇಶ ನಡೆಯಲಿದೆ. 30 ವರ್ಷದೊಳಗಿನ ಯುವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಬಳಿಕ ಧಾರವಾಡದಲ್ಲಿ ಜನವರಿ 12 ರಿಂದ 4 ದಿನಗಳ ಕಾಲ ನಡೆಯುವ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬಿಜೆಪಿ ಏಕಾಂಗಿ ಸ್ಪರ್ಧೆ; ಇನ್ನು ಕರ್ನಾಟಕಕ್ಕೆ ಬಂದಿದ್ದ ಅಮಿತ್ ಶಾ ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. "ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿ, ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ" ಎಂದು ಹೇಳಿದ್ದಾರೆ.
"ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ನಡೆಯಲಿದೆ. ಜೆಡಿಎಸ್ ಪಕ್ಷ ಲೆಕ್ಕಕ್ಕಿಲ್ಲ" ಎಂದು ಅಮಿತ್ ಶಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಮಹಾನಗರದ ಬೂತ್ ವಿಜಯ್ ಸಂಕಲ್ಪ ಸಮಾವೇಶದಲ್ಲಿ ತಿಳಿಸಿದ್ದಾರೆ.
"25 ರಿಂದ 30 ಸ್ಥಾನ ಗೆದ್ದು ಅಧಿಕಾರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವ ಜೆಡಿಎಸ್ ಪಕ್ಷ ಚುನಾವಣೆ ಬಳಿಕ ಕಾಂಗ್ರೆಸ್ ಮಡಿಲಲ್ಲಿ ಬೆಚ್ಚಗೆ ಕೂರುತ್ತದೆ. ಆದ್ದರಿಂದ ಜೆಡಿಎಸ್ಗೆ ಮತ ಹಾಕಿದರೆ ಕಾಂಗ್ರೆಸ್ಗೆ ಮತ ನೀಡಿದಂತೆ" ಎಂದು ಅಮಿತ್ ಶಾ ಟೀಕಿಸಿದ್ದಾರೆ.












Click it and Unblock the Notifications