ಕಾವೇರಿಗೂ 'ಕಾಲಾ' ಸಿನಿಮಾಕ್ಕೂ ಏನು ಸಂಬಂಧ?: ಪ್ರಕಾಶ್ ರೈ
Recommended Video
ಬೆಂಗಳೂರು, ಜೂನ್ 4: ಸುದ್ದಿ ವಾಹಿನಿಯೊಂದರ ಸಂದರ್ಶನ ವೇಳೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡಿದ್ದ ನಟ ಪ್ರಕಾಶ್ ರೈ, ಈಗ ಕಾವೇರಿ ವಿಚಾರವನ್ನು ಮುಂದಿಟ್ಟುಕೊಂಡು 'ಕಾಲಾ' ಸಿನಿಮಾ ಬಿಡುಗಡೆಗೆ ವಿಧಿಸಿರುವ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಜನಿಕಾಂತ್ ನಟನೆಯ 'ಕಾಲಾ' ಸಿನಿಮಾಕ್ಕೂ ಕಾವೇರಿ ವಿವಾದಕ್ಕೂ ಏನು ಸಂಬಂಧ ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿರುದ್ಧ ಹೇಳಿಕೆ ನೀಡಿರುವ ರಜನಿಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಿತ್ರರಂಗ, ಜೂನ್ 7ರಂದು ಬಿಡುಗಡೆಯಾಗಲಿರುವ 'ಕಾಲಾ' ಸಿನಿಮಾವನ್ನು ರಾಜ್ಯದಲ್ಲಿ ಪ್ರದರ್ಶನ ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ.
ಕಾಲಾ ಸಿನಿಮಾ ಪ್ರದರ್ಶನದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ
ಚಿತ್ರರಂಗದ ನಿರ್ಧಾರವನ್ನು ಪ್ರಶ್ನಿಸಿರುವ ಪ್ರಕಾಶ್ ರೈ, ಸಿನಿಮಾ ಕಲಾವಿದರನ್ನು ಏಕೆ ಯಾವಾಗಲೂ ಗುರಿ ಮಾಡಲಾಗುತ್ತಿದೆ ಎಂದು ಕೇಳಿದ್ದಾರೆ.
What’s film #kaala got to do with Kaveri issue..?why is film fraternity targeted always..? Will Jds/congress government let fringe elements take law into their hands ...like bjp did with #Padmavat ..or ..will you step in to assure common man ..his right for choice.#justasking.. pic.twitter.com/GaHYTMkCTg
— Prakash Raj (@prakashraaj) 3 June 2018
ಈ ಸಂಬಂಧ ತಮ್ಮ ಟ್ವಿಟ್ಟರ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ನದಿ ಮತ್ತು ಮನುಷ್ಯನ ನಡುವೆ ಇರುವ ಸಂಬಂಧ ಹಾಗೂ ಕಾಲಾ ಚಿತ್ರದ ಕುರಿತು ಸುದೀರ್ಘವಾದ ಬರಹ ಪ್ರಕಟಿಸಿದ್ದಾರೆ.
ನದಿಗೂ ಮನುಷ್ಯನಿಗೂ ಇರುವ ಸಂಬಂಧ ತುಂಬಾ ಆಪ್ತವಾದದ್ದು, ಜೀವನ್ಮುಖಿಯಾದದ್ದು. ಕಾವೇರಿಯೊಂದಿಗೆ ನಮಗೆಲ್ಲ ಅಂತಹ ಭಾವನಾತ್ಮಕ ಸಂಬಂಧವಿದೆ.
ಇದು ಎರಡೂ ರಾಜ್ಯಗಳ ಮನಸ್ಸುಗಳ ಸತ್ಯವೂ ಹೌದು. ಹೀಗಾಗಿ ಈ ಜೀವನದಿಯನ್ನು ಹಂಚಿಕೊಳ್ಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಾಗ ತುಂಬಾ ಭಾವುಕರಾಗುತ್ತೇವೆ. ಆದರೆ ಯಾವುದೇ ಸಮಸ್ಯೆಗೆ ಪರಿಹಾರ ಭಾವುಕತೆಯಿಂದ ಮಾತ್ರ ಬರುವುದಿಲ್ಲ ಎಂದಿ ಪ್ರಕಾಶ್ ರೈ ಹೇಳಿದ್ದಾರೆ.
'ಕಾಲಾ' ಚಿತ್ರದ ಪ್ರದರ್ಶನವನ್ನು ತಡೆಯುವುದರಿಂದ ನಾವು ಸಾಧಿಸುವುದು ಏನನ್ನು ಎಂಬುದನ್ನು ಯೋಚಿಸಬೇಕು. ರಜನಿಕಾಂತ್ ಹೇಳಿಕೆಯಿಂದ ನಮಗೆ ಬೇಸರ ಆಗಿರುವುದು ನಿಜ.
ತಮ್ಮ ಬೇಸರವನ್ನೂ, ವಿರೋಧವನ್ನೂ ವ್ಯಕ್ತಪಡಿಸಲು ಕರ್ನಾಟಕದಲ್ಲಿ ಅವರ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಕೆಲವರು ನಿರ್ಧರಿಸಿದ್ದಾರೆ. ಇದು ಸಮಸ್ತ ಕನ್ನಡಿಗರ ಆಶಯವೇ? ಎಂದು ರೈ ಪ್ರಶ್ನಿಸಿದ್ದಾರೆ.
ಕೆಲವರು ಮಾತ್ರ ಕನ್ನಡಿಗರಿಗೆ ಏನು ಬೇಕು, ಏನು ಬೇಡ ಎಂದು ನಿರ್ಧರಿಸುವುದು ಯಾವ ನ್ಯಾಯ? ನಟನೊಬ್ಬನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ನಿರ್ಮಾಪಕನ ಬಂಡವಾಳದ ಗತಿ ಏನಾಗಬೇಕು? ನೂರಾರು ತಂತ್ರಜ್ಞರ, ಸಹಕಲಾವಿದರ, ಸಾವಿರಾರು ಕಾರ್ಮಿಕರ ದುಡಿಮೆಯ, ಪ್ರತಿಭೆಯ ಫಲವೇನು ಎಂದು ಸಿನಿಮಾವನ್ನು ನೆಚ್ಚಿಕೊಂಡಿರುವ ಕಾರ್ಮಿಕರ ದುಡಿಮೆಯ ಕುರಿತು ಪ್ರಕಾಶ್ ರೈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಬಿಜೆಪಿಯು 'ಪದ್ಮಾವತ್' ಸಿನಿಮಾದಲ್ಲಿ ಮಾಡಿದಂತೆ ಜೆಡಿಎಸ್-ಕಾಂಗ್ರೆಸ್ ಸರ್ಕಾರವು ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವವರನ್ನು ಸುಮ್ಮನೆ ಬಿಡಲಿದೆಯೇ ಅಥವಾ ಸಾಮಾನ್ಯ ಜನರು ತಮ್ಮ ಆಯ್ಕೆಯ ಹಕ್ಕನ್ನು ಪಡೆದುಕೊಳ್ಳಬಹುದು ಎಂಬ ಭರವಸೆಯನ್ನು ನೀಡಲಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇವು ನನ್ನ ಅಂತಃಕರಣದ ಪ್ರಶ್ನೆಗಳು. ಈ ಪ್ರಶ್ನೆಗಳಿಗಾಗಿ ನನ್ನನ್ನು ಕೆಲವರು ಕನ್ನಡ ದ್ರೋಹಿ ಎಂದು ಪಟ್ಟಕಟ್ಟಿದರೂ ಆಶ್ಚರ್ಯ ಪಡಬೇಕಿಲ್ಲ. ಇತ್ತೀಚೆಗೆ ನಾನು ಪ್ರಶ್ನಿಸಿದ್ದಕ್ಕೆ ಹಿಂದೂ ದ್ರೋಹಿ, ದೇಶ ದ್ರೋಹಿ ಎಂದು ಪಟ್ಟಕಟ್ಟಿದ್ದವರನ್ನು ಕಂಡಿದ್ದೇವೆ.
ಆದರೂ ಹೇಳಲೇಬೇಕಾದ್ದನ್ನು ಹೇಳಿಯೇ ತೀರಬೇಕು. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ರೈ ಹೇಳಿದ್ದಾರೆ.