ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರಕಾಶ್ ಕೋಳಿವಾಡ ಹೇಳಿದ್ದೇನು?
ಹಾವೇರಿ, ಅಕ್ಟೋಬರ್ 19 : ಬಿಜೆಪಿ ಸೇರುವ ಕುರಿತಂತೆ ಹಬ್ಬಿರುವ ಸುದ್ದಿಗಳನ್ನು ಪ್ರಕಾಶ್ ಕೋಳಿವಾಡ ತಳ್ಳಿ ಹಾಕಿದರು. ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಪುತ್ರ ಪ್ರಕಾಶ್ ಕೋಳಿವಾಡ ಬಿಜೆಪಿ ಸೇರಲಿದ್ದಾರೆ ಎಂಬ ವರದಿಗಳು ಬಂದಿದ್ದವು.
'ಹುಟ್ಟಿದ್ದು ಕಾಂಗ್ರೆಸ್, ಸಾಯೋದು ಕಾಂಗ್ರೇಸ್ ನಲ್ಲೇ. ಪಟ್ಟಭದ್ರ ಹಿತಾಸಕ್ತಿಗಳು ಎಷ್ಟೇ ತಂತ್ರಗಾರಿಕೆ ಮಾಡಿ ಅಪಪ್ರಚಾರ ಮಾಡಿದರೂ ಮತದಾರ ಪ್ರಭುಗಳು ನಂಬಲ್ಲ. ಜಾತ್ಯತೀತತೆಯಲ್ಲಿನ ನನ್ನ ನಂಬಿಕೆ ಇದರ ತತ್ವ ಸಿದ್ಧಾಂತದ ತಳಹದಿಯಲ್ಲಿ ಬೆಳೆದುಬಂದ ನಾನು ಯಾವತ್ತೂ ಕಾಂಗ್ರೇಸ್ ಪಕ್ಷ ಬಿಡುವುದಿಲ್ಲ. ಇವರ ಇಂಥ ಹೀನ ಪ್ರಚಾರಕ್ಕೆ ದಯವಿಟ್ಟು ಯಾರೂ ಕಿವಿಗೊಡಬಾರದೆಂದು ನಮ್ರ ವಿನಂತಿ' ಎಂದು ಫೇಸ್ಬುಕ್ನಲ್ಲಿ ಪ್ರಕಾಶ್ ಕೋಳಿವಾಡ ಅವರು ಸ್ಪಷ್ಟನೆ ನೀಡಿದ್ದಾರೆ.

ಕೆ.ಬಿ.ಕೋಳಿವಾಡ ಅವರು 2018ರ ಚುನಾವಣೆಗೆ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅದೇ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಲಿದ್ದಾರೆ. ಪ್ರಕಾಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ರಾಣೆಬೆನ್ನೂರು ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹಬ್ಬಿತ್ತು. ಗುರುವಾರ ಪ್ರಕಾಶ್ ಕೋಳಿವಾಡ ಅವರು ಬಿಜೆಪಿ ಸೇರುವ ಸುದ್ದಿ ಹರಿದಾಡುತ್ತಿತ್ತು. ಅವುಗಳಿಗೆ ಸ್ಪಷ್ಟನೆ ನೀಡುವ ಮೂಲಕ ಪ್ರಕಾಶ್ ಕೋಳಿವಾಡ ಅವರು ಗೊಂದಲ ಬಗೆಹರಿಸಿದ್ದಾರೆ.












Click it and Unblock the Notifications