ಫಲಿತಾಂಶ ನಂತರ : ಸಿದ್ದರಾಮಯ್ಯ ಕುರ್ಚಿ ಸ್ಥಿತಿ ಗತಿ ಏನು?
ಬೆಂಗಳೂರು, ಫೆ. 23: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಎಲ್ಲಾ ಪಕ್ಷಕ್ಕೂ ಮಾಜಿ ಹಾಲಿ ರಾಜಕೀಯ ಮುಖಂಡರಿಗೂ ಸರಿಯಾದ ಪಾಠ ಕಲಿಸಿದೆ. ಗೆದ್ದೆ ಎಂದು ಬೀಗಲು ಆಗುತ್ತಿಲ್ಲ, ಸೋತೆ ಎಂದು ಕಣ್ಣೀರಡು ಆಗುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿ ಇರುವ ಜನನಾಯಕರು ತ್ರಿಶಂಕು ಸ್ವರ್ಗ ನರಕವನ್ನು ಒಟ್ಟಿಗೆ ಅನುಭವಿಸುವಂತಾಗಿದೆ.
ಮುಂದೇನು?: 14 ರಿಂದ 15 ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ಅವರ ಕುರ್ಚಿ ಅಲ್ಲಾಡುತ್ತದೆ ಎಂಬ ಮಾತಿಗೆ ಮತ್ತಷ್ಟು ಬಲ ಸಿಗಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ಸಿದ್ದರಾಮಯ್ಯ ಅವರು ಹೇಳಿದ್ದೇ ಬೇರೆ, ಸಂಪುಟ ವಿಸ್ತರಣೆಯೂ ಇಲ್ಲ, ಪುನರ್ ರಚನೆಯೂ ಇಲ್ಲ ಎಂದು ಪ್ರಶ್ನೆ ಕೇಳಿದ ರಭಸದಲ್ಲೆ ಉತ್ತರಿಸಿಬಿಟ್ಟರು.[ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ]
ನಮ್ಮ ನಿರೀಕ್ಷೆ 15 ರಿಂದ 20 ಇತ್ತು. 1083 ಜಿಲ್ಲಾ ಪಂಚಾಯಿತಿಗಳಲ್ಲಿ ಸುಮಾರು 496 ಜಿಲ್ಲಾ ಪಂಚಾಯಿತಿ ಸಿಕ್ಕಿದೆ.ಶೇ 46ರಷ್ಟು ಸದಸ್ಯತ್ವ ನಮ್ಮ ಪಾಲಿಗೆ ಸಿಕ್ಕಿದೆ. ಮುಂದಿನ 2 ವರ್ಷ ಮೂರು ತಿಂಗಳು ಚುನಾವಣೆ ಇಲ್ಲ. 2018ರ ಅಸೆಂಬ್ಲಿ ಚುನಾವಣೆ ನಮ್ಮ ಗುರಿ. ರಾಜ್ಯದಲ್ಲಿ ಅಭಿವೃದ್ಧಿ ವೇಗ ಗಳಿಸುತ್ತೇವೆ ಎಂದರು. [ಪೂರ್ಣ ಮಾಹಿತಿ ಇಲ್ಲಿ ಓದಿ] ಆಗ ಕಾಂಗ್ರೆಸ್ 07; ಈಗ ಕಾಂಗ್ರೆಸ್ 11 (+4)
[ಚುನಾವಣೆಯಲ್ಲಿ ಗೆದ್ದವರು ಬಿದ್ದವರು, ಎಲ್ಲರೂ ನಮ್ಮವರೇ!] | [ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ]

ಸಿದ್ದರಾಮಯ್ಯ ಅವರ ಕುರ್ಚಿ ಭದ್ರ ಎಂಬ ಮಾಹಿತಿ ಇದೆ
ಜಿ.ಪಂ ನಲ್ಲಿ 14 ರಿಂದ 15 ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ಅವರ ಕುರ್ಚಿ ಅಲ್ಲಾಡುತ್ತದೆ ಎನ್ನಲಾಗಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನ ಬದಲಾವಣೆ, ಸಂಪುಟ ವಿಸ್ತರಣೆ, ಪುನರ್ ರಚನೆ ಬಗ್ಗೆ ಯಾವುದೇ ಸುದ್ದಿ ಸದ್ಯಕ್ಕಿಲ್ಲ. ಪಕ್ಷದಲ್ಲಿರುವ ಭಿನ್ನಮತವನ್ನು ಮೊದಲು ಸರಿಪಡಿಸಿಕೊಳ್ಳಿ ನಂತರ ಮುಂದಿನ ಮಾತು ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ. ಹೀಗಾಗಿ ಉಳಿದಿರುವಷ್ಟು ಕಾಲ ಕುರ್ಚಿ ಉಳಿಸಿಕೊಂಡು ಲಾಭ ಗಳಿಸುವುದು ಕಾಂಗ್ರೆಸ್ಸಿನ ಉದ್ದೇಶವಾಗಿದೆ. ಹೀಗಾಗಿ ಸಿದ್ದರಾಮಯ್ಯ ಸೇಫ್.

ಬಿಜೆಪಿಗೆ ಭಾರಿ ಪೆಟ್ಟು ಬಿದ್ದಿದೆ
ರಾಜ್ಯಾಧ್ಯಕ್ಷರಾಗುವ ಕನಸು ಕಾಣುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಮತ್ತೆ ದೆಹಲಿ ಕರ್ನಾಟಕ ಭವನದಲ್ಲಿ ಇಡ್ಲಿ, ವಡೆ ಸಾಂಬಾರ್ ರುಚಿ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಾರು ಯಾವ ಮುಖ ಹೊತ್ತುಕೊಂಡು ಅಧ್ಯಕ್ಷ ಸ್ಥಾನ ಕೇಳುತ್ತಾರೋ ಕಾದು ನೋಡಬೇಕಿದೆ. ಬಿಜೆಪಿ ಮುಂದಿನ ಚುನಾವಣೆ ಎದುರಿಸಲು ಯಡಿಯೂರಪ್ಪ ನೇತೃತ್ವ ಅಗತ್ಯ ಎಷ್ಟಿದೆ ಎಂಬುದರ ಅರಿವು ಹೈಕಮಾಂಡಿಗೆ ಆಗಿದೆ. ಆಗ ಬಿಜೆಪಿ 12; ಈಗ 07 (-5).

ಸಂಭ್ರಮ ಪಡಲು, ದುಃಖ ಪಡಲು ಆಗದಂಥ ಪರಿಸ್ಥಿತಿ
ರಾಮನಗರವನ್ನು ಕಳೆದುಕೊಂಡ ಶೋಕಾಚರಣೆಯಲ್ಲಿ ಬಹುಕಾಲ ಕಳೆಯುವ ಲಕ್ಷಣಗಳಿವೆ. ರಾಮನಗರ (22) : ಕಾಂಗ್ರೆಸ್ 16; ಬಿಜೆಪಿ 00: ಜೆಡಿಎಸ್ 06: ಮಂಡ್ಯದಲ್ಲಿ ಕಾಂಗ್ರೆಸ್ 14; ಬಿಜೆಪಿ 00: ಜೆಡಿಎಸ್ 25: ಇತರೆ 01 ಬಂದಿದೆ. ಹಾಸನ (40) : ಕಾಂಗ್ರೆಸ್ 18; ಬಿಜೆಪಿ 01: ಜೆಡಿಎಸ್ 20: ಇತರೆ 01 ಬಂದಿದೆ. ಹೀಗಾಗಿ ಸಂಭ್ರಮ ಪಡಲು, ದುಃಖ ಪಡಲು ಆಗದಂಥ ಪರಿಸ್ಥಿತಿ ಜೆಡಿಎಸ್ ನಲ್ಲಿದೆ.

ಭವಾನಿ ರೇವಣ್ಣ ಅವರು ರಾಜಕೀಯಕ್ಕೆ ಎಂಟ್ರಿ
ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಗೆಲುವು ದಾಖಲಿಸಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಜೊತೆಗೆ ಅತಂತ್ರವಾಗಿರುವ ಸುಮಾರು 7 ಜಿ.ಪಂಗಳಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುವ ಲಕ್ಷಣಗಳು ಕಂಡು ಬಂದಿದೆ. ಹೀಗಾಗಿ ಭವಿಷ್ಯದಲ್ಲಿ ಜೆಡಿಎಸ್ ಗೆ ಆಶಾಭಾವನೆ ಕಂಡು ಬಂದರೂ ಬರಬಹುದು.

30 ಜಿಲ್ಲೆಗಳ ಒಟ್ಟು 1083 ಜಿಪಂ ಸ್ಥಾನಗಳ ಫಲಿತಾಂಶ
ಈ ಹಿಂದಿನ ಬಲಾಬಲ : ಕಾಂಗ್ರೆಸ್ 07; ಬಿಜೆಪಿ 12; ಜೆಡಿಎಸ್ 3; ಅತಂತ್ರ 8.
ಈಗಿನ ಬಲಾಬಲ: ಕಾಂಗ್ರೆಸ್ 10 (+3), ಬಿಜೆಪಿ 07 (-5), ಜೆಡಿಎಸ್ 02 (-1), ಇತರೆ 11 (+3)
175 ತಾಲೂಕು ಪಂಚಾಯಿತಿ 3,889 ಸ್ಥಾನಗಳ ಫಲಿತಾಂಶ
* ಕಾಂಗ್ರೆಸ್ 56, ಬಿಜೆಪಿ 56, ಜೆಡಿಎಸ್ 20, ಇತರೆ 43.
(ಒನ್ಇಂಡಿಯಾ ಸುದ್ದಿ)












Click it and Unblock the Notifications