ಲಕ್ಷ್ಮೀ ಹೆಬ್ಬಾಳ್ಕರ್ -ಜಾರಕಿಹೊಳಿ ಭಿನ್ನಮತ: ಬೂದಿಮುಚ್ಚಿದ ಕೆಂಡ, ಮತ್ತೆ ಸ್ಪೋಟಿಸುವುದೇ?
Recommended Video

ಸಮ್ಮಿಶ್ರ ಸರಕಾರ ಇನ್ನೇನು ಬಿದ್ದು ಹೋಯಿತು ಎನ್ನುವಷ್ಟರ ಮಟ್ಟಿಗೆ ತಾರಕಕ್ಕೇರಿದ್ದ ಕಾಂಗ್ರೆಸ್ ರಾಜಕೀಯವನ್ನು, ಸದ್ಯದ ಮಟ್ಟಿಗೆ ತಣ್ಣಗಾಗಿಸುವವಲ್ಲಿ ಯಶಸ್ವಿಯಾಗಿದ್ದದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯೇ ಹೊರತು, ಕಾಂಗ್ರೆಸ್ ಮುಖಂಡರಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಮೇಲ್ನೋಟಕ್ಕೆ ಪಿಎಲ್ಡಿ ಬ್ಯಾಂಕ್ ಚುನಾವಣೆಯ ಮೇಲೆ ಹಿಡಿತ ಸಾಧಿಸಲು ಬೆಳಗಾವಿಯ ಎರಡು ಪ್ರಬಲ ಕುಟುಂಬವಾದ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ನಡುವಣ ರಾಜಕೀಯ ಮೇಲಾಟ ನಡೆಯಿತಾದರೂ, ನಿಜವಾದ ಅಸಲಿಯತ್ತು ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಹಸ್ತಕ್ಷೇಪ ಎನ್ನುವುದು ಗೌಪ್ಯವಾಗಿ ಉಳಿದಿರಲಿಲ್ಲ.
ಈ ನಡುವೆ, ಆಪರೇಶನ್ ಕಮಲದ ಬಿಸಿ ನನಗೂ ತಟ್ಟಿತ್ತು, ಮೂವತ್ತು ಕೋಟಿ ಆಫರ್ ಮತ್ತು ಸಚಿವ ಸ್ಥಾನದ ಆಮಿಷ ನನಗೂ ಒಡ್ಡಲಾಗಿತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್, ವಾರದ ಹಿಂದೆ ಸಮ್ಮಿಶ್ರ ಸರಕಾರದ ಬುಡ ಅಲ್ಲಾಡುತ್ತಿದ್ದಾಗ ಹೇಳದೇ, ಎರಡು ದಿನದ ಹಿಂದೆ ಹೇಳಿರುವ ಹಿಂದಿನ ರಾಜಕೀಯ ಏನು ಎನ್ನುವುದು ಈಗ ಪ್ರಶ್ನೆಯಾಗಿ ಉಳಿದಿದೆ.
ಇದಕ್ಕೆ ಪೂರಕ ಎನ್ನುವಂತೆ, ರಾಜ್ಯ ನಾಯಕರಲ್ಲಿ ಮನಸ್ತಾಪ ಮೂಡಲು ಮೂಲ ಕಾರಣ ಲಕ್ಷ್ಮೀ ಹೆಬ್ಬಾಳ್ಕರ್, ಅವರನ್ನು ಮೊದಲು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೆಲವು ಮಹಿಳಾ ಮುಖಂಡರು, ಕೆಪಿಸಿಸಿಗೆ ದೂರು ನೀಡಲು ಮುಂದಾಗಿರುವುದು.
ದಾವಣಗೆರೆಯಲ್ಲಿ ಭಾನುವಾರ (ಸೆ 30) ಮಾತನಾಡುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಯಾರನ್ನೂ ಕೆಣಕಲು ಹೋಗಿಲ್ಲ, ಹೋಗುವುದೂ ಇಲ್ಲ. ಆದರೆ, ನನ್ನನ್ನು ಕೆಣಕುವ ಕೆಲಸ ನಡೆಯುತ್ತಲೇ ಇದೆ, ನನ್ನನ್ನು ಕೆಣಕಿದರೆ ನಾನು ಸುಮ್ಮನಿರುವವಳಲ್ಲ ಎಂದು ಮತ್ತೆ ಪರೋಕ್ಷವಾಗಿ, ಜಾರಕಿಹೊಳಿ ಸಹೋದರರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಸರಕಾರದ ಅಳಿವು ಉಳಿವಿನ ಬಗ್ಗೆ ಸಾಕಷ್ಟು ಗೊಂದಲ
ಕುಮಾರಸ್ವಾಮಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಸರಕಾರದ ಅಳಿವು ಉಳಿವಿನ ಬಗ್ಗೆ ಸಾಕಷ್ಟು ಗೊಂದಲಗಳಿದ್ದರೂ, ತೀರಾ ಅತಿರೇಕಕ್ಕೆ ಹೋಗಿದ್ದು ಕಳೆದ ವಾರ. ರಮೇಶ್ ಜಾರಕಿಹೊಳಿ ಸುತ್ತಮುತ್ತ ಇಡೀ ರಾಜ್ಯ ರಾಜಕೀಯವೇ ಸುತ್ತುತ್ತಿದ್ದಾಗ. ಖಾಸಗಿ ಹೋಟೆಲ್ ನಲ್ಲಿ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ನಡುವೆ ಅದೇನು ಮಾತುಕತೆ ಆಯಿತೋ, ನಮ್ಮ ನಡುವೆ ಏನೂ ಮನಸ್ತಾಪವಿಲ್ಲ, ಅದೆಲ್ಲಾ ಮಾಧ್ಯಮಗಳ ಸೃಷ್ಟಿಯೆಂದು ಮಿಡಿಯಾಗಳ ಮೇಲೆ ಗೂಬೆ ಕೂರಿಸಿ ರಮೇಶ್ ಜಾರಕಿಹೊಳಿ ಹೊರಟು ಹೋದರು.

ಸ್ವಾಗತಿಸಲು ಬಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕಡೆ ತಿರುಗಿಯೂ ನೋಡದ ಡಿಕೆಶಿ
ಇದಾದ ನಂತರ, ಬೆಳಗಾವಿ ರಾಜಕೀಯದ ಬಗ್ಗೆ ತಲೆಹಾಕಬಾರದು ಎನ್ನುವ ಸೂಚನೆ ಡಿ ಕೆ ಶಿವಕುಮಾರ್ ಅವರಿಗೆ ಹೋಗಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. ಕಳಸಾ-ಬಂಡೂರಿ ನಾಲಾ ಪ್ರದೇಶ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ಡಿಕೆಶಿ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ, ತಮ್ಮನ್ನು ಸ್ವಾಗತಿಸಲು ಬಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕಡೆ ತಿರುಗಿಯೂ ನೋಡದೇ ಡಿಕೆಶಿ ಹೋಗಿದ್ದರು.

ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
ಇದಾದ ನಂತರ, ಬೆಳಗಾವಿಗೆ ಡಿಕೆಶಿ ಬಂದಿದ್ದರೂ ಜಾರಕಿಹೊಳಿ ಸಹೋದರರು ಅವರನ್ನು ಭೇಟಿ ಮಾಡಲಿಲ್ಲ. ಸರಕಾರೀ ಕಾರ್ಯಕ್ರಮಕ್ಕೆ ಡಿಕೆಶಿ ಬಂದಿದ್ದರು, ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರೆ ಅವರನ್ನು ಭೇಟಿಯಾಗುತ್ತಿದ್ದೆವು ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು. ಇಬ್ಬರ ನಡುವೆ ಮನಸ್ತಾಪ ಹಾಗೇ ಇದೆ ಎನ್ನುವುದಕ್ಕೆ ಇದು ಸಾಕ್ಷಿ ಎನ್ನುವಂತಿತ್ತು. ಇವೆಲ್ಲದರ ನಡುವೆ, ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ನೀಡಿದ ಹೇಳಿಕೆ, ತಮ್ಮ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ ಎಂದು ಸಾರುವಂತಿತ್ತು.

ಡಾ.ಮಹಾಂತ ಸ್ವಾಮಿಗಳ ಜಯಂತೋತ್ಸವ ಕಾರ್ಯಕ್ರಮ
ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಪಂಚಮಸಾಲಿ ಗುರುಪೀಠದಲ್ಲಿ ಡಾ.ಮಹಾಂತ ಸ್ವಾಮಿಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ , ನಾನು ಯಾರನ್ನು ಕೆಣಕಲು ಹೋಗುವುದಿಲ್ಲ, ಆದರೆ ಅವರಾಗಿಯೇ ನನ್ನನ್ನು ಕೆಣಕಲು ಯತ್ನಿಸುತ್ತಿದ್ದಾರೆ. ಜೀವನದುದ್ದಕ್ಕೂ ಸಂಘರ್ಷದ ಹಾದಿಯಲ್ಲೇ ಬೆಳೆದು ಬಂದಿದ್ದೇನೆ. ನಾನು ಪಂಚಮಶಾಲಿ ಹೆಣ್ಣುಮಗಳು, ರಾಜಕೀಯ ಕ್ಷೇತ್ರದಲ್ಲೂ ದಿಟ್ಟತನದಿಂದ ನಡೆಯುತ್ತೇನೆ. ನನ್ನ ತಂಟೆಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ಮೇಲೆ ಬೇಸರ ಹೊರಹಾಕಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಯಾಗುವ ಸಾಧ್ಯತೆಯಿದೆ
ಅಕ್ಟೋಬರ್ ಮೊದಲ ವಾರದಲ್ಲಿ ಅಂದರ ಪಿತೃಪಕ್ಷ ಮುಗಿಯುವ ಮುನ್ನವೇ, ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಯಾಗುವ ಸಾಧ್ಯತೆಯಿದೆ. ಕೆಲವೊಂದು ಮೂಲಗಳು ಅಕ್ಟೋಬರ್ ಹತ್ತು ಅನ್ನುತ್ತಿವೆ. ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ನಮಗೆ ಚಾನ್ಸ್ ಸಿಗುತ್ತೆ ಎನ್ನುವ ಕಾತುರತೆಯಲ್ಲಿದ್ದಾರೆ. ಈ ವೇಳೆ, ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ಜಾರಕಿಹೊಳಿ ಸಹೋದರರ ಜೊತೆಗಿನ ಭಿನ್ನಮತ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯಿದೆ.












Click it and Unblock the Notifications