ಗುತ್ತಿಗೆದಾರರಿಗೆ ತೊಂದರೆ ಕೊಡುವ ಉದ್ದೇಶ ರಾಜಕಾರಣಿಗಳಿಗಿಲ್ಲ; ಕೆಲಸ ಮಾಡಿದ್ರೆ ಬಿಲ್ ಪಾವತಿ: ದಿನೇಶ್ ಗುಂಡೂರಾವ್
ಬೆಂಗಳೂರು, ಆಗಸ್ಟ್ 12: ಗುತ್ತಿಗೆದಾರರ ಬಿಲ್ ಪಾವತಿ ವಿಚಾರದಲ್ಲಿ ತನಿಖಾ ಸಮಿತಿ ರಚೆನೆ ಮಾಡಲಾಗಿದ್ದು, ಎಲ್ಲವನ್ನ ಪರಿಶೀಲಿಸಿಯೇ ಬಿಲ್ ಪಾವತಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಗುತ್ತಿದಾರರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಾಗಲಿ, ರಾಜಕಾರಣಿಗಳಿಗಾಗಲಿ ಇಲ್ಲ.ಯಾರು ಕೆಲಸ ಮಾಡಿದ್ದಾರೆ ಅವರಿಗೆ ತೊಂದರೆಯಾಗಲ್ಲ. ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಡಿಸಿಎಂ ಅವರು ನಮ್ಮ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ತನಿಖಾ ಸಮಿತಿಯನ್ನು ಕೂಡಾ ರಚಿಸಲಾಗಿದೆ.

ಎಲ್ಲ ಕಡೆಯೂ ಆಡಳಿತ ವ್ಯವಸ್ಥೆಯನ್ನ ಬಿಗಿಗೊಳಿಸಿರುವುದಕ್ಕೆ ಇವರಿಗೆ ಟೆನ್ಶನ್ ಆಗಿದೆ. ಬಿಬಿಎಂಪಿ ವ್ಯವಸ್ಥೆ ಮೊದಲು ಸರಿಪಡಿಬೇಕು. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಬಿಲ್ ಆಗಬೇಕು. ಆದರೆ ಕೆಲಸವನ್ನೇ ಮಾಡದವರಿಗೆ ಯಾಕೆ ಬಿಲ್ ಕೊಡಬೇಕು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಕೆಲಸದ ಮುಗಿಯುವ ತನಕ ಬಿಲ್ ಆಗಲ್ಲ ಎನ್ನೋದು ಗುತ್ತಿಗೆದಾರರಿಗೆ ಗೊತ್ತಿರುವ ಸಂಗತಿ. ದುಡ್ಡು ಇದ್ದರೆ ಮಾತ್ರ ಕೆಲಸ ಮಾಡಬೇಕು. ದುಡ್ಡು ಇಲ್ಲದಿದ್ದರೂ ಏಕೆ ಕೆಲಸ ಮಾಡುವುದಕ್ಕೆ ಮುಂದಾಗ್ತಾರೆ.? ಯಾವ ಕಾಂಟ್ರಾಕ್ಟರ್ ಏನು ಕೆಲಸ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಬಿಬಿಎಂಪಿ ಯಲ್ಲಿ ಇರಬೇಕಾಗುತ್ತೆ. ಅದಕ್ಕೋಸ್ಕರವೇ ತನಿಖಾ ಸಮಿತಿ ರಚಿಸಲಾಗಿದೆ. ಗುತ್ತಿಗೆದಾರರು ಇಷ್ಡು ದಿನವೇ ಕಾದಿದ್ದಾರೆ, ಇನ್ನು ಹದಿನೈದು ದಿನ ಕಾಯುವುದರಲ್ಲಿ ತಪ್ಪೇನಿಲ್ಲ. ಕ್ಷೇತ್ರಗಳಲ್ಲಿ ಕೆಲಸಗಳು ನಕಲಿ ಆಗಿದ್ದರೆ, ಅದೂ ಕೂಡ ತನಿಖೆಗೆ ಒಳಪಡಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ತನಿಖೆಯಲ್ಲಿ ಏನು ಬರುತ್ತದೆ ನೋಡೋಣ. ಹಿಂದೆಯೂ ಅಧಿಕಾರಿಗಳ ವಿರುದ್ದ ಕ್ರಮ ಆಗಿದೆ. ಇಲ್ಲಿ ಗುತ್ತಿಗೆದಾರರು Vs ರಾಜಕಾರಣಿಗಳ ವಿಷಯ ಅಲ್ಲ. ಹಾಗೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಅಷ್ಟೇ. ಬೆಂಗಳೂರನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಧರ್ಮಸ್ಥಳ ಸೌಜನ್ಯ ಕೇಸ್ ಮರು ತನಿಖೆಗೆ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಕೇಸ್ ಯಾಕೆ ಸಿಬಿಐ ಕ್ಲೋಸ್ ಮಾಡಿದೆ ಎಂಬದರ ಬಗ್ಗೆ ಸರ್ಕಾರ ಮಾಹಿತಿ ತರಿಸಿಕೊಂಡಿದೆ. ಮರು ತನಿಖೆಗೆ ಹೆಚ್ಚಿನ ಮಾಹಿತಿ ಇದೆಯೇ? ಹೊಸ ಎವಿಡೆನ್ಸ್ ಏನಾದ್ರೂ ಇದೆಯಾ ಎಂಬುದನ್ನ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಸಿಎಂ ಹಾಗೂ ಗೃಹ ಇಲಾಖೆ ಮಾಹಿತಿ ತರಿಸಿಕೊಳ್ಳುತ್ತದೆ. ನಾನೂ ಕೂಡ ಸಿಎಂ ಹಾಗೂ ಗೃಹ ಸಚಿವರ ಜೊತೆಗೆ ಮಾತನಾಡ್ತೇನೆ ಎಂದು ಹೇಳಿದರು.
ಚೆಲುವರಾಯಸ್ವಾಮಿ ವಿರುದ್ದ ಪೇಸಿಎಸ್ ಕ್ಯಾಂಪೇನ್ ವಿಚಾರವಾಗಿ ಮಾತನಾಡಿ, ಯಾರೋ ಲೆಟರ್ ಬರೆದರು ಅಂತ ರಾಜ್ಯಪಾಲರು ಮಾಹಿತಿ ಕೇಳಿದಾಕ್ಷಣ ಅದನ್ನೇ ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ. ಇದರ ಹಿಂದೆ ಯಾರಿದ್ದಾರೆ ಎನ್ನೋದು ಗೊತ್ತಾಗಬೇಕಾಗುತ್ತದೆ. ಲೆಟರ್ ಕೊಟ್ಟವರು ಯಾರು. ಅವರ ಹಿನ್ನೆಲೆ ಏನು ಗೊತ್ತಾಗಬೇಕು ಎಂದರು.
ಈ ಹಿಂದೆ ಎಚ್.ಡಿ ಕುಮಾರಸ್ವಾಮಿ ಅವರು, ಚೆಲುವರಾಯಸ್ವಾಮಿ ಮೇಲೆ ಸುಳ್ಳು ಆರೋಪ ಮಾಡಿದ್ದರು. ಇದು ಎರಡನೇ ಸುಳ್ಳು ಆರೋಪ. ಮಂಡ್ಯದ ರಾಜಕಾರಣವನ್ನು ಕುಮಾರಸ್ವಾಮಿ ಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಮಂಡ್ಯದಲ್ಲಿ ಜೆಡಿಎಸ್ ಧೂಳಿಪಟ ಆಗಿದೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲು ಆಗದೇ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಸಹನೆ ಕಳೆದುಕೊಂಡವರ ರೀತಿ ಏನೇನೋ ಮಾಡ್ತಿದ್ದಾರೆ. ಈ ರಾಜಕಾರಣ ಮುಂದೆ ಜೆಡಿಎಸ್ ನಾಯಕರಿಗೇ ತಿರುಗುಬಾಣ ಆಗಲಿದೆ ಎಂದು ಹೇಳಿದರು.












Click it and Unblock the Notifications