ವಿಜಯಪುರದಲ್ಲಿ ದಲಿತ ಯುವಕನ ಮೇಲೆ ಹಲ್ಲೆ, 15 ಮಂದಿ ಬಂಧನ
ವಿಜಯಪುರ, ನ. 14: ವಿಜಯಪುರ ಜಿಲ್ಲೆಯ ದೋಮನಾಳ ಗ್ರಾಮದಲ್ಲಿ ನಡೆದಿದ್ದ ದಲಿತ ಯುವಕನ ಮೇಲಿನ ಹಲ್ಲೆ ಪ್ರಕರಣದಲ್ಲಿ 15 ಜನರನ್ನು ಬಂಧಿಸಲಾಗಿದೆ.
ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಭಾಗವಹಿಸುವ ಉರುಸ್ ಸಂದರ್ಭದಲ್ಲಿ ನಡೆದ ಗಲಾಟೆಯ ನಂತರ ದಲಿತ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಪ್ರಕರಣದಲ್ಲಿ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ದಲಿತ ವ್ಯಕ್ತಿಯನ್ನು ಸಾಗರ್ (23) ಎಂದು ಗುರುತಿಸಲಾಗಿದ್ದು, ಹಬ್ಬದ ವೇಳೆ ಡ್ಯಾನ್ಸ್ ಮಾಡುತ್ತಿದ್ದಾಗ ಹೊಡೆದಾಟ ನಡೆದಿದೆ. ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಾಗರ್ ಹಾಡು ನಿಲ್ಲಿಸಿದ್ದಕ್ಕೆ ಮೇಲ್ಜಾತಿಯ ವ್ಯಕ್ತಿಗಳನ್ನು ಪ್ರಶ್ನಿಸಿದ್ದು ಹಲ್ಲೆಗೆ ಕಾರಣ ಎನ್ನಲಾಗಿದೆ.

ಸಾಗರ್ ಹಾಡು ನಿಲ್ಲಿಸಿದ ವ್ಯಕ್ತಿಗಳನ್ನು ಪ್ರಶ್ನಿಸುತ್ತಿದ್ದಂತೆ ಮಾತಿನ ಚಕಮಕಿ ನಡೆದಿದೆ. ನಂತರ ಮೇಲ್ಜಾತಿಯ ಜನರು ಸಾಗರ್ನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
''ದೋಮನಾಳ ಎಂಬ ಹಳ್ಳಿಯಲ್ಲಿ ಉರುಸ್ ನಡೆಯುತ್ತಿತ್ತು. ಆ ವೇಳೆ ಕುಡಿತದ ಅಮಲಿನಲ್ಲಿದ್ದ ದಲಿತ ವ್ಯಕ್ತಿ ಮೇಲ್ವರ್ಗದವರ ಜೊತೆ ಸೇರಿ ಕುಣಿಯುತ್ತಿದ್ದ. ಈ ವೇಳೆ ಅವರು ಹಾಡು ನಿಲ್ಲಿಸಿ ಅಲ್ಲಿಂದ ಹೋಗುತ್ತಿದ್ದರು. ಆದರೆ ಕುಡಿದ ನಶೆಯಲ್ಲಿದ್ದ ಸಾಗರ್ ಹಾಡು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಾರೆ. ಇದರಿಂದ, ಅವರ ನಡುವೆ ಜಗಳ ನಡೆಯಿತು. ದಲಿತ ವ್ಯಕ್ತಿ ಮೇಲ್ವರ್ಗದ ಜನರ ಮೇಲೆ ಹಲ್ಲೆ ನಡೆಸಿದಾಗ ಅವರೂ ಪ್ರತಿಯಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಆತನನ್ನು ಎಳೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಕೈಗಳಿಂದ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಯಾವುದೇ ಆಯುಧಗಳನ್ನು ಬಳಸಿಲ್ಲ" ಎಂದು ವಿಜಯಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಚ್ಡಿ ಆನಂದಕುಮಾರ್ ಹೇಳಿದ್ದಾರೆ.
ಇನ್ನು, ಉತ್ಸವದಲ್ಲಿ ಸಂಗೀತ ನಿಲ್ಲಿಸಿದನ್ನು ಪ್ರಶ್ನಿಸಿದ್ದಕ್ಕಾಗಿ ಮೇಲ್ವರ್ಗದ ಜನರು ತನಗೆ ಥಳಿಸಿದ್ದಾರೆ, ತನ್ನ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಸಂತ್ರಸ್ತ ಸಾಗರ್ ಆರೋಪಿಸಿದ್ದಾರೆ.

''ನಾನು ರಾತ್ರಿ ಉರುಸ್ ಮುಗಿಸಿ ಹಿಂತಿರುಗುತ್ತಿದ್ದಾಗ ಅವರು ಡ್ಯಾನ್ಸ್ ಮಾಡುತ್ತಿದ್ದರು. ನಾನೂ ಕುಣಿಯುತ್ತಿದ್ದೆ. ಹಾಡನ್ನು ಏಕೆ ನಿಲ್ಲಿಸಿದ್ದೀರಿ ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ನನ್ನನ್ನು ಥಳಿಸಿದರು. ಅವರು ನನ್ನನ್ನು ಏಕೆ ಹೊಡೆದರು ಎಂದು ನನಗೆ ತಿಳಿದಿಲ್ಲ" ಎಂದು ಸಾಗರ್ ಹೇಳಿದ್ದಾರೆ.
"ನನ್ನನ್ನು ಥಳಿಸಿದ ಬಗ್ಗೆ ಅವರನ್ನು ಪ್ರಶ್ನಿಸಿದ ನನ್ನ ಸಹೋದರನನ್ನು ಹೊಡೆದಿದ್ದಾರೆ. ಅವನ ವಿರುದ್ಧವೂ ಅವಾಚ್ಯ ಪದಗಳನ್ನು ಬಳಸಿದ್ದಾರೆ. ಇದಾದ ನಂತರ ಅವರೆಲ್ಲಾ ನನ್ನ ಮನೆಗೆ ಬಂದು ನನ್ನನ್ನು ಕರೆದೊಯ್ದು ಕಂಬಕ್ಕೆ ಕಟ್ಟಿ ನಂತರ ಥಳಿಸಿದ್ದಾರೆ. ಹಲ್ಲೆ ಮಾಡಿದವರಲ್ಲಿ ಸುಮಾರು 100 ಜನರಿದ್ದರು" ಎಂದು ಸಾಗರ್ ವಿವರಿಸಿದ್ದಾರೆ.
ಘಟನೆಯ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು 15 ಮಂದಿಯನ್ನು ಬಂಧಿಸಿದ್ದಾರೆ. "ಘಟನೆಯನ್ನು ವಿಡಿಯೋ ಮಾಡಲಾಗಿದೆ. ಅದರ ಆಧಾರದ ಮೇಲೆ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಹಲ್ಲೆ ಪ್ರಕರಣ ದಾಖಲಿಸಿ 15 ಮಂದಿಯನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications