Gandha Gudi Trailer : ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಸಂದ ಗೌರವ; ಪ್ರಧಾನಿ ಮೋದಿ
ಬೆಂಗಳೂರು, ಅ.09: ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ತಾವೇ ಸ್ವತಃ ಮುತುವರ್ಜಿ ವಹಿಸಿ ಮಾಡಿರುವ ಸಾಕ್ಷ್ಯಾಚಿತ್ರ 'ಗಂಧದ ಗುಡಿ'ಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪಿಆರ್ಕೆ ಸ್ಟುಡಿಯೋ ಗಂಧದ ಗುಡಿ ಟ್ರೈಲರ್ ಬಿಡುಗಡೆ ಮಾಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೈಲರ್ ಬಿಡುಗಡೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ರೈಲರ್ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ತಿಳಿಸಿದ್ದರು.
Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka's natural beauty and environmental conservation. My best wishes for this endeavour. https://t.co/VTimdGmDAM
— Narendra Modi (@narendramodi) October 9, 2022
ಇದಕ್ಕೆ ಪ್ರತಿಕ್ರಿಯಿಸಿ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, "ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ಗಂಧದ ಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. "ಗಂಧದಗುಡಿ ಅಪ್ಪು ಹೃದಯಕ್ಕೆ ಹತ್ತಿರ. ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರ. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ. ಗಂಧದ ಗುಡಿ ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂಬ ಭರವಸೆ ಟ್ರೇಲರ್ನಲ್ಲಿ ಕಾಣುತ್ತದೆ. ಅಶ್ವಿನ್ ಪುನೀತ್ ರಾಜ್ಕುಮಾರ್ ಅವರಿಗೆ ನನ್ನ ಅಭಿನಂದನೆಗಳು" ಎಂದಿದ್ದಾರೆ.
ಜೊತೆಗೆ "ನಮ್ಮ ಹೃದಯದಲ್ಲಿ ಸದಾ ಉಳಿಯುವ ನಮ್ಮ ಅದ್ಭುತ ಮತ್ತು ಅತ್ಯಂತ ಪ್ರೀತಿಯ ನಟರ ಬಗೆಗಿನ ಇಂತಹ ಭಾವುಕ ಮಾತುಗಳಿಗಾಗಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು" ಎಂದಿದ್ದಾರೆ.
ಚಿತ್ರರಂಗದ ಕಲಾವಿದರು ಕೂಡ ಗಂಧದ ಗುಡಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂಸದ ಶಿವಮೊಗ್ಗ ಬಿ. ವೈ. ರಾಘವೇಂದ್ರ, ನಟ ಯಶ್, ಧನಂಜಯ, ಅನುಪ್ ಬಂಢಾರಿ, ಸಂಯುಕ್ತ ಹೊರನಾಡು, ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.
ಪಿಆರ್ಕೆ ಸಂಸ್ಥೆ ಹಣ ಹೂಡಿರುವ, ರಾಷ್ಟ್ರ ಪ್ರಶ್ಸತಿ ವಿಜೇತ ಅಮೋಘವರ್ಷ ನಿರ್ದೇಶನ ಮಾಡಿರುವ ಪಿಆರ್ಕೆ ಯುಟ್ಯೂಬ್ ಚಾನೆಲ್ನಲ್ಲಿ ಅಧಿಕೃತವಾಗಿ ಬಿಡುಗಡೆ ಯಾಗುವ ಮೊದಲು ನರ್ತಕಿ ಚಿತ್ರಮಂದಿರದಲ್ಲಿ ಪ 'ಗಂಧದ ಗುಡಿ' ಟ್ರೈಲರ್ ಪ್ರದರ್ಶನ ಕಾರ್ಯಕ್ರಮವಿತ್ತು.
ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಟ ರಾಘವೇಂದ್ರ ರಾಜ್ಕುಮಾರ್, ಶಿವರಾಜ್ ಕುಮಾರ್, ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಸೇರಿದಂತೆ ಇಡೀ ರಾಜ್ಕುಮಾರ್ ಕುಟುಂಬವೇ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಅಪ್ಪು ಮಾತಿನಿಂದ ಆರಂಭವಾಗುವ 2.39 ಗಳ ಟ್ರೈಲರ್ ನೋಡುಗರನ್ನು ಕಣ್ಣು ಮಿಟುಕಿಸದಂತೆ ಮಾಡುತ್ತದೆ. ಇನ್ನು ಗಂಧದ ಗುಡಿಯನ್ನು ಅಕ್ಟೋಬರ್ 28 ರಂದು ಚಿತ್ರಮಂದಿರಗಳಲ್ಲಿ ಕಣ್ಣು ತುಂಬಿಕೊಳ್ಳಬಹುದು.ಕೇಂದ್ರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೂಡ ಅಪ್ಪು ಅವರ ಗಂಧದ ಗುಡಿ ಸಿನಿಮಾಗೆ ಶುಭ ಕೋರಿದ್ದಾರೆ.
"ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ಅವರ ಗಂಧದ ಗುಡಿ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಇದು ಅಪ್ಪು ಅವರಿಗೆ ಪರಿಸರದ ಬಗ್ಗೆ ಇದ್ದ ವಿಶೇಷ ಕಾಳಜಿ ಹಾಗೂ ಪ್ರೀತಿಯನ್ನು ತೋರಿಸುತ್ತದೆ. ಈ ಚಿತ್ರವು ಯಶಸ್ಸು ಕಾಣುವುದರಲ್ಲಿ ಹಾಗೂ ಚಿತ್ರ ಪ್ರೇಮಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಚಿತ್ರದ ಕುರಿತು ವಿಶೇಷ ಗಮನ ನೀಡಿರುವುದು ವಿಶೇಷ. ಮೋದಿ ಅವರಿಗೆ ಅಪ್ಪು ಅವರ ಮೇಲೆ, ಕನ್ನಡ ಭಾಷೆ, ಇಲ್ಲಿಯ ಸಂಸ್ಕೃತಿ, ಕಲೆ, ಕಲಾವಿದರು ಮತ್ತು ಕರ್ನಾಟಕದ ಮೇಲಿರುವ ಪ್ರೇಮವನ್ನು ತೋರುತ್ತದೆ. ಕರ್ನಾಟಕದ ಯುವರತ್ನ ಅಪ್ಪು ಅವರ ಗಂಧದ ಗುಡಿ ಸಿನಿಮಾಕ್ಕೆ ಶುಭ ಹಾರೈಸಿದ ಮೋದಿ ಅವರಿಗೂ ಧನ್ಯವಾದಗಳು" ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.