ಪಿಎಂ ಕಿಸಾನ್ ಯೋಜನೆ: ಕರ್ನಾಟಕವೊಂದರಲ್ಲೇ ಅನರ್ಹರಿಗೆ ಹೋದ ದುಡ್ಡು 442 ಕೋಟಿ?

ಬೆಂಗಳೂರು, ಸೆ. 28: ಸರಕಾರದ ಯೋಜನೆಗಳನ್ನು ಅನರ್ಹರು ದುರುಪಯೋಗಿಸಿಕೊಳ್ಳುವುದು ಮೊದಲಿಂದಲೂ ನಡೆದುಕೊಂಡು ಬಂದಿರುವ ಕೆಟ್ಟ ಸಂಪ್ರದಾಯ. ಆಧಾರ್ ವ್ಯವಸ್ಥೆಯಿಂದ ಇಂಥ ಸೋರಿಕೆ ಬಹಳ ಮಟ್ಟಿಗೆ ತಗ್ಗಿರುವುದು ಹೌದು. ಆದರೂ ಕೂಡ ಕೆಲ ಯೋಜನೆಗಳಲ್ಲಿ ದುರುಪಯೋಗ ಮುಂದುವರಿದಿದೆ. ಸಣ್ಣ ರೈತರ ನೆರವಿಗೆಂದು ಕೇಂದ್ರ ಸರಕಾರ ನಡೆಸುತ್ತಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲೂ ಇಂತಹ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಬಹಳಷ್ಟು ಅನರ್ಹ ರೈತರು ನೊಂದಾವಣಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ ಹೆಚ್ಚು ಕಡಿಮೆ 4 ಲಕ್ಷದಷ್ಟು ಅನರ್ಹ ಫಲಾನುಭವಿಗಳಿದ್ದಾರೆ. 2019ರಿಂದ ಆರಂಭವಾದ ಈ ಯೋಜನೆಯ ಅಡಿಯಲ್ಲಿ ಕರ್ನಾಟಕದಲ್ಲಿ ಅನರ್ಹ ಫಲಾನುಭವಿಗಳಿಗೆ ನೀಡಲಾಗಿರುವ ಹಣ ಬರೋಬ್ಬರಿ 442 ಕೋಟಿ ರೂ ಎಂದು ಅಧಿಕಾರಿಗಳು ಅಂದಾಜಿಸಿರುವುದು ತಿಳಿದುಬಂದಿದೆ.

ಡೆಕನ್ ಹೆರಾಲ್ಡ್ ವರದಿ ಪ್ರಕಾರ, ಅಧಿಕಾರಿಗಳು ಈಗ ಅನರ್ಹ ಫಲಾನುಭವಿಗಳಿಂದ ಈ ಹಣವನ್ನು ವಾಪಸ್ ವಸೂಲಿ ಮಾಡುವ ನಿಟ್ಟಿನಲ್ಲಿ ಯೋಜಿಸುತ್ತಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡಿ ಹಣ ಪಡೆದಿರುವ ಅನರ್ಹ ರೈತರಿಂದ ಹಣ ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ಕೃಷಿ ಆಯುಕ್ತ ಬಿ ಶರತ್ ಬ್ಯಾಂಕುಗಳಿಗೆ ಸೂಚಿಸಿದ್ದಾರೆನ್ನಲಾಗಿದೆ. ಎಲ್ಲಾ ಉಪ ಆಯುಕ್ತರು ಈ ಕಾರ್ಯದಲ್ಲಿ ಬ್ಯಾಂಕುಗಳಿಗೆ ನೆರವಾಗಲಿದ್ದಾರೆ.

PM Kisan Scheme: Rs 442 Crore Wasted For Ineligible Farmers

"ಯೋಜನೆ ಆರಂಭವಾದಾಗ ರೈತರು ಸ್ವಯಂ ನೊಂದಣಿ ಮಾಡಿಕೊಳ್ಳುವ ಆಯ್ಕೆ ಇತ್ತು. ಆಗ ಬಹಳ ಮಂದಿ ಇದನ್ನು ದುರುಪಯೋಗಿಸಿಕೊಂಡಿದ್ದಾರೆ" ಎಂದು ಕೃಷಿ ಆಯುಕ್ತರು ಹೇಳಿದ್ದಾರೆ.

ಈವರೆಗೂ ಅಧಿಕಾರಿಗಳು ಅನರ್ಹ ಫಲಾಭವಿಗಳಿಂದ 7.26 ಕೋಟಿ ರೂ ವಸೂಲಿ ಮಾಡಿದ್ದಾರೆ.

ಏನಿದು ಯೋಜನೆ?
5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರ ಅನುಕೂಲಕ್ಕೆಂದು 2019ರಲ್ಲಿ ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆ ಆರಂಭಿಸಿತ್ತು. ಇದರಡಿಯಲ್ಲಿ ಕೇಂದ್ರವು ಫಲಾನುಭವಿಗಳಿಗೆ ವರ್ಷದಲ್ಲಿ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತದೆ. ಕರ್ನಾಟಕ ಸರಕಾರ 4 ಸಾವಿರ ರೂ ಹಣವನ್ನು ಸೇರಿಸಿಕೊಡುತ್ತದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಕರ್ನಾಟಕದ ಫಲಾನುಭವಿಗಳಿಗೆ ವರ್ಷಕ್ಕೆ ಒಟ್ಟು 10 ಸಾವಿರ ರೂ ಸಿಗುತ್ತದೆ.

PM Kisan Scheme: Rs 442 Crore Wasted For Ineligible Farmers

ಆದರೆ, ಈ ಯೋಜನೆಯಲ್ಲಿ ಕೆಲ ಷರತ್ತು, ನಿಬಂಧನೆಗಳಿವೆ. ಅದಾಯ ತೆರಿಗೆ ಪಾವತಿಸುವವರು; ಮಾಸಿಕ 10 ಸಾವಿರ ರೂಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು; ವೈದ್ಯರು, ಎಂಜಿನಿಯರು, ವಕೀಲರು, ಆರ್ಕಿಟೆಕ್ಟ್, ಸಿಎ ವೃತ್ತಿಯಲ್ಲಿರುವವರು, ಸರಕಾರಿ ನೌಕರರು, ಜನಪ್ರತಿನಿಧಿಗಳಾಗಿದ್ದವರು ಇರುವ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯುವಂತಿಲ್ಲ. ಸಾಂಸ್ಥಿಕ ಹಿಡುವಳಿದಾರರು, ದೊಡ್ಡ ರೈತರನ್ನೂ ಈ ಯೋಜನೆಯಿಂದ ಹೊರಗಿಡಲಾಗಿದೆ.

2019ರಲ್ಲಿ ಕೇಂದ್ರ ಸರಕಾರ ಈ ಯೋಜನೆ ಆರಂಭಿಸಿದಾಗ ಸ್ವಯಂ ಆಗಿ ರಿಜಿಸ್ಟರ್ ಮಾಡಲು ರೈತರಿಗೆ ಅವಕಾಶ ಕಲ್ಪಿಸಿತ್ತು. ಆಗ ಅನರ್ಹರಾದವರೂ ಕೂಡ ನೊಂದಣಿ ಮಾಡಿದ್ದಾರೆ. ಚಿತ್ರದುರ್ಗದಲ್ಲಿ 3.83 ಲಕ್ಷ ರೈತರು ಸ್ವಯಂ ನೊಂದಣಿ ಮಾಡಿಕೊಂಡಿದ್ದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಂದೇ ಜಿಲ್ಲೆಯಲ್ಲಿ ಫಲಾನುಭವಿಗಳ ನೊಂದಣಿ ಆಗಿದ್ದು ಅಧಿಕಾರಿಗಳಿಗೆ ಅನುಮಾನ ಮೂಡಿಸಿತ್ತು. ಆಗ ಪರಿಶೀಲಿಸಿದಾಗ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಅನರ್ಹರು ಎಂಬುದು ತಿಳಿದುಬಂತು.

ಇದಾದ ಬಳಿಕ ರಾಜ್ಯಾದ್ಯಂತ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ವೆರಿಫಿಕೇಶನ್ ಕಾರ್ಯ ಮಾಡಲಾಯಿತು. ಒಟ್ಟು 3.95 ಲಕ್ಷ ಫಲಾನುಭವಿಗಳು ಅನರ್ಹರು ಎಂಬುದು ಗೊತ್ತಾಗಿದೆ. ಇವರಲ್ಲಿ 90 ಸಾವಿರಕ್ಕೂ ಹೆಚ್ಚು ಜನರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. 1.99 ಲಕ್ಷ ರೈತರ ಭೂದಾಖಲೆಗಳು ಸಮರ್ಪಕವಾಗಿಲ್ಲ. 3,312 ಫಲಾನುಭವಿಗಳು ಮೃತರಾಗಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 58.42 ಲಕ್ಷ ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈಗ ಈ ಯೋಜನೆಗೆ ಸ್ವಯಂ ನೊಂದಣಿ ಅವಕಾಶ ನಿಲ್ಲಿಸಲಾಗಿದೆ. ಸ್ಥಳೀಯ ಅಧಿಕಾರಿಗಳ ಬಳಿ ರೈತರು ದಾಖಲೆಗಳ ಸಮೇತ ಹೋಗಿ ನೊಂದಣಿ ಮಾಡಬೇಕೆಂಬ ನಿಯಮ ಇದೆ. ಎಲ್ಲಾ ಫಲಾನುಭವಿಗಳಿಂದ ಸರಕಾರ ಮತ್ತೊಮ್ಮೆ ಕೆವೈಸಿ ತುಂಬಿಸಿಕೊಂಡಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+