Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ 222 ಪೆಟ್ರೋಲ್ ಬಂಕ್‌ಗಳ ಅಳತೆಯಲ್ಲಿ ದೋಖಾ ಬಯಲಿಗೆ ಎಳೆದ ಶ್ರೀರೂಪಾ

ಬೆಂಗಳೂರು, ಆ. 12: ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ 105 ರೂ. ಅಗಿದೆ. ಇಷ್ಟು ದುಬಾರಿ ಬೆಲೆ ಕೊಟ್ಟರೂ ಅದರಲ್ಲಿ ML ಲೆಕ್ಕದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ ಮಾಡುವ ದಂಧೆಗೆ ಕಡಿವಾಣ ಬಿದ್ದಿರಲಿಲ್ಲ. ಇದೀಗ ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ ಮಾಡುವ ದಂಧೆಯ ವಿರುದ್ಧ ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ನಿಯಂತ್ರಕ ಹುದ್ದೆಯನ್ನು ನೂತನವಾಗಿ ಅಲಂಕರಿಸಿದ ಶ್ರೀರೂಪಾ ನೇರ ಸಮರ ಸಾರಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್ - ಡೀಸೆಲ್ ಬಂಕ್‌ಗಳ ಮೇಲೆ ದಾಳಿ ನಡೆಸಿ 1089 ಕಡೆ ತಪಾಸಣೆ ನಡೆಸಿ ದಂಧೆಕೋರ ಬಂಕ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ತಪಾಸಣೆ ವೇಳೆ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದ ರಾಜ್ಯದ 222 ಪೆಟ್ರೋಲ್ ಬಂಕ್‌ಗಳ ವಿರುದ್ಧ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದಾರೆ!

ಬೆಂಗಳೂರಿನಲ್ಲಿ ಸುಮಾರು ಒಂದು ಸಾವಿರ ಪೆಟ್ರೋಲ್ ಹಾಗೂ ಡೀಸಲ್ ಬಂಕ್‌ಗಳಿದ್ದು, 200 ಕ್ಕೂ ಹೆಚ್ಚು ಕಡೆ ತಪಾಸಣೆ ನಡೆಸಿದ್ದು, ಪೆಟ್ರೋಲ್ ಹಾಗೂ ಡೀಸಲ್ ವಿತರಣೆ ಮಾಡುವುತ್ತಿರುವುದರಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ 20 ಬಂಕ್‌ಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಅದರಲ್ಲಿ ಹತ್ತಕ್ಕೂ ಹೆಚ್ಚು ಪ್ರತಿಷ್ಠಿತ ಪೆಟ್ರೋಲ್ ಬಂಕ್‌ಗಳು ಇಂಧನ ವಿತರಣೆಯಲ್ಲಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದು ಪ್ರಕರಣ ದಾಖಲಿಸಲಾಗಿದೆ. ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ದಾಖಲಿಸಿದ ಪ್ರಕರಣಗಳನ್ನು ಇಲಾಖೆಯ ನಿಯಂತ್ರಕರು ವಿಚಾರಣೆ ನಡೆಸಿ ಆದೇಶ ಹೊರಡಿಸಲಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಇತಿಹಾಸದಲ್ಲಿ ಏಕ ಕಾಲಕ್ಕೆ 1089 ಕಡೆ ದಾಳಿ ನಡೆಸಿರುವುದು ಇದೇ ಮೊದಲು. ಮಾತ್ರವಲ್ಲ ಒಂದೇ ದಿನ ರಾಜ್ಯದಲ್ಲಿ 222 ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಕೆಲವು ಪೆಟ್ರೋಲ್ ಬಂಕ್ ಮಾಲೀಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗಿದೆ.

ಕಾನೂನು ಮಾಪನ ಶಾಸ್ತ್ರಕ್ಕೆ ಚುರುಕು

ಕಾನೂನು ಮಾಪನ ಶಾಸ್ತ್ರಕ್ಕೆ ಚುರುಕು

ಕಳೆದ ಒಂದು ತಿಂಗಳ ಹಿಂದೆ ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರಾಗಿ ಶ್ರೀರೂಪಾ ಅವರು ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಇಲಾಖೆಯ ಸಹಾಯಕ ನಿಯಂತ್ರಕಿಯ ಪೆಟ್ರೋಲ್ ಬಂಕ್ ನಲ್ಲಿ ಏಜೆಂಟ್ ಮೂಲಕ ಮಾಮೂಲಿ ಸಂಗ್ರಹಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ವಿಡಿಯೋ ಆಧರಿಸಿ ಒನ್ಇಂಡಿಯಾ ಕನ್ನಡ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಸಾರದ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿ ಸೀಮಾ ಕೆ. ಮಾಗಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಈ ಪ್ರಕರಣದಿಂದಲೇ ಇಡೀ ಪೆಟ್ರೋಲ್ ಬಂಕ್‌ಗಳಲ್ಲಿ ಆಗುತ್ತಿರುವ ಅಕ್ರಮವನ್ನು ಮುಚ್ಚಿ ಹಾಕಲು ಇಲಾಖೆಯ ಅಧಿಕಾರಿಗಳೇ ಶಾಮೀಲಾಗರುವ ಸಂಶಯ ಹುಟ್ಟು ಹಾಕಿತ್ತು. ಇದಾದ ಎರಡೇ ದಿನಕ್ಕೆ ಪೆಟ್ರೋಲ್ ಮತ್ತು ಡೀಸಲ್ ಬಂಕ್‌ಗಳಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಬಯಲಿಗೆ ಎಳೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿರುವ 10 ಸಾವಿರ ಪೆಟ್ರೋಲ್ ಹಾಗೂ ಡೀಸಲ್ ಬಂಕ್ ಗಳನ್ನು ಹಂತ ಹಂತವಾಗಿ ತಪಾಸಣೆ ನಡಸಿ ತಪ್ಪಿತಸ್ಥ ಬಂಕ್‌ಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ.

ಜಂಟಿ ರೇಡ್ ಮಾಡಿಸಿದಾಗ ಅಕ್ರಮ ಬಯಲಿಗೆ

ಜಂಟಿ ರೇಡ್ ಮಾಡಿಸಿದಾಗ ಅಕ್ರಮ ಬಯಲಿಗೆ

ರಾಜ್ಯದ ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಅಧಿಕಾರ ಹಂಚಿಕೆ ಗೊಂದಲಕ್ಕೆ ಏರ್ಪಟ್ಟಿತ್ತು. ತಾಂತ್ರಿಕವಾಗಿ ನಿಪುಣರಾಗಿರುವ ನಿರೀಕ್ಷಕರಿಗೆ ಪೆಟ್ರೋಲ್ ಬಂಕ್ ತಪಾಸಣೆ ನಡೆಸುವ ಅಧಿಕಾರವಿಲ್ಲ. ಇನ್ನು ಕರ್ನಾಟಕ ಆಡಳಿತ ಸೇವೆ ಮೂಲಕ ಬಂದಿರುವ ಸಹಾಯಕ ನಿಯಂತ್ರಕರಿಗೆ ತಾಂತ್ರಿಕ ಕೌಶಲ್ಯ ಇಲ್ಲದಿದ್ದರೂ ಅವರು ಪೆಟ್ರೋಲ್ ಬಂಕ್ ತಪಾಸಣೆ ಮಾಡುವ ಅಧಿಕಾರ ನೀಡಲಾಗಿದೆ. ಹೀಗಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕರು ಪೆಟ್ರೋಲ್ ಬಂಕ್‌ಗಳ ವಿರುದ್ಧ ಕೇಸು ದಾಖಲಿಸಿದರೂ ಅದನ್ನು ಕಾನೂನು ಬಾಹಿರ, ಅದಕ್ಕೆ ಮಾನ್ಯತೆಯೇ ಇಲ್ಲ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಪೆಟ್ರೋಲ್ ಬಂಕ್‌ಗಳ ವಿರುದ್ಧ ದಾಳಿ ಮಾಡಿದ ನಿರೀಕ್ಷಕರೇ ಇಕ್ಕಟ್ಟಿಗೆ ಸಿಲುಕುತ್ತಿದ್ದರು. ಹೀಗಾಗಿ ರಾಜ್ಯದಲ್ಲಿ ಪಾರದರ್ಶಕವಾಗಿ ಯಾವ ಪೆಟ್ರೋಲ್ ಬಂಕ್‌ಗಳಲ್ಲೂ ತಪಾಸಣೆ ನಡೆಸುವುದನ್ನೇ ಕೈ ಬಿಡಲಾಗಿತ್ತು. ಇಲಾಖೆಗೆ ನೂತನವಾಗಿ ಬಂದಿರುವ ಶ್ರೀರೂಪಾ ಅವರು ಸಹಾಯಕರ ನಿಯಂತ್ರಕರ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಲು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರೀಕ್ಷಕರು ಒಳಗೊಂಡ ವಿಶೇಷ ತಂಡಗಳು ರಾಜ್ಯದೆಲ್ಲೆಡೆ ಒಂದೇ ದಿನ 1089 ಕಡೆ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ ಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ.

ಇಂಧನ ಕದಿಯವ ಜಾಲ ಬೆಳಕಿಗೆ

ಇಂಧನ ಕದಿಯವ ಜಾಲ ಬೆಳಕಿಗೆ

ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಪೆಟ್ರೋಲ್ ಹಾಗೂ ಡೀಸಲ್ ಬಂಕ್‌ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ನಿಗಧಿತ ಅಳತೆಗಿಂತಲೂ ಕಡಿಮೆ ಇಂಧನ ಪೂರೈಕೆ ಮಾಡಿರುವುದು ಅನೇಕ ಬಂಕ್‌ಗಳಲ್ಲಿ ಪತ್ತೆಯಾಗಿದೆ. 1089 ಪೆಟ್ರೋಲ್ - ಡೀಸಲ್ ಬಂಕ್ ಗಳಲ್ಲಿ ತಪಾಸಣೆ ನಡೆಸಿದಾಗ 222 ಬಂಕ್‌ಗಳಲ್ಲಿ ಅಕ್ರಮ ಕಂಡು ಬಂದಿದೆ. ಅದರಲ್ಲಿ ಅನೇಕ ಪೆಟ್ರೋಲ್ ಬಂಕ್ ಮಾಲೀಕರು ದಂಡ ಪಾವತಿಸಿದ್ದು, 155 ಪೆಟ್ರೋಲ್ ಹಾಗೂ ಡೀಸೆಲ್ ಬಂಕ್‌ಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಈ 155 ಪ್ರಕರಣದಲ್ಲಿ ಶೇ. 50 ರಷ್ಟು ಬಂಕ್ ಗಳಲ್ಲಿ ಇಂಧನ ಕದ್ದಿರುವ ಪ್ರಕರಣಗಳಾಗಿವೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಆದೇಶದ ಪ್ರಕಾರ ಯಾವುದೇ ಪೆಟ್ರೋಲ್ ಬಂಕ್ ವಿರುದ್ಧ ಅಕ್ರಮ ಕೇಳಿ ಬಂದರೂ ಅವರ ವಿರುದ್ಧ ದಾಖಲಿಸುವ ಪ್ರಕರಣವನ್ನ ನಿಯಂತ್ರಕರ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯಬೇಕು. ದಂಡ ವಿಧಿಸಿದ ಬಳಿಕ ಪೆಟ್ರೋಲ್ ಬಂಕ್ ವಿವರ ನೀಡಬಹುದು. ಅಲ್ಲಿಯ ವರೆಗೂ ಅಧಿಕಾರಿಗಳು ಈ ಬಗ್ಗೆ ಮಾತನಾಡುವಂತಿಲ್ಲ. ಯವ್ಯಾವ ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ ಆಗುತ್ತಿದೆ ಎಂಬ ವಿವರ ಪಡೆಯಬೇಕಾದರೆ ನೀವು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿಯೇ ಅರ್ಜಿ ಸಲ್ಲಿಸಿ ತೆಗೆದುಕೊಳ್ಳಿ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ರಾಜಧಾನಿ ಬಂಕ್ ಗಳಲ್ಲಿ ಮೋಸ

ರಾಜಧಾನಿ ಬಂಕ್ ಗಳಲ್ಲಿ ಮೋಸ

ಬೆಂಗಳೂರು ನಗರ ಜಿಲ್ಲೆಯಲ್ಲಿ 194 ಪೆಟ್ರೋಲ್ ಹಾಗೂ ಡೀಸೆಲ್ ಬಂಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಸಹಾಯಕ ನಿಯಂತ್ರಕ ತನಿಖಾ ದಳಗಳು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಕೇಸು ದಾಖಲಿಸಿದ್ದು ಅದರಲ್ಲಿ ಹತ್ತು ಪೆಟ್ರೋಲ್ ಬಂಕ್ ಗಳಲ್ಲಿ ಡೀಸಲ್ ಕದಿಯುತ್ತಿದ್ದ ಬಂಕ್ ಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ 139 ಕಡೆ ದಾಳಿ ಮಾಡಿದ್ದು, 48 ಕೇಸು ದಾಖಲಿಸಿದ್ದು, ಹತ್ತಕ್ಕೂ ಹೆಚ್ಚು ಬಂಕ್‌ಗಳಲ್ಲಿ ಇಂಧನ ಕದಿಯುತ್ತಿದ್ದ ಆರೋಪ ಸಂಬಂಧ ಕೇಸು ದಾಖಲಿಸಲಾಗಿದೆ. ಒಟ್ಟಾರೆ, ಬೆಂಗಳೂರು ನಗರದಲ್ಲಿ17.500 ರೂ . ದಂಡವನ್ನು ವಸೂಲಿ ಮಾಡಿದ್ದಾರೆ. ಬೆಂಗಳೂರು ವಿಭಾಗದಲ್ಲಿ 50 ಪ್ರಕರಣ ದಾಖಲಿಸಿ 57 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಆದರೆ, ಪೆಟ್ರೋಲ್ ಬಂಕ್ ಮುಲಾಜಿಗೆ ಒಳಗಾಗಿರುವ ಕಾನೂನು ಮಾಪನ ಶಾಸ್ತ್ರದ ಇಲಾಖೆ ಅಧಿಕಾರಿಗಳು ವಂಚಕ ಪೆಟ್ರೋಲ್ ಬಂಕ್‌ಗಳ ವಿವರ ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಬಂಕ್ ಮಾಲೀಕರ ಜತೆ ಶಾಮೀಲಾಗಿರುವ ಆರೋಪಗಳಿಗೆ ಈ ಬೆಳವಣಿಗೆ ಪುಷ್ಠಿ ನೀಡಿದಂತಿದೆ.

 ಜಿಲ್ಲೆಯ ವಿವರ ದಾಳಿ ದಾಖಲಿಸಿದ ಪ್ರಕರಣ ಅಭಿಸಂಧಾನ ಪ್ರಕರಣ

ಜಿಲ್ಲೆಯ ವಿವರ ದಾಳಿ ದಾಖಲಿಸಿದ ಪ್ರಕರಣ ಅಭಿಸಂಧಾನ ಪ್ರಕರಣ

ಉಪ ನಿಯಂತ್ರಕರು ಬೆಂಗಳೂರು ಜಿಲ್ಲೆ 194 16 11

ಬೆಂಗಳೂರು ವಿಭಾಗ 139 48 39

ಮೈಸೂರು ವಿಭಾಗ 328 95 74

ಬೆಳಗಾವಿ ವಿಭಾಗ 167 25 14

ಕಲಬುರಗಿ ವಿಭಾಗ 186 31 13

ಸಹಾಯಕ ನಿಯಂತ್ರಕರು ತನಿಖಾ ದಳ 1 04 02 02

ಸಹಾಯಕ ನಿಯಂತ್ರಕ ತನಿಖಾ ದಳ 2 07 02 --

ತನಿಖಾ ದಳ ಬೆಂಗಳೂರು ವಿಭಾಗ 29 03 00

ತನಿಖಾ ದಳ ಮೈಸೂರು (ಸ.ನಿ) 21 06 00

ತನಿಖಾ ದಳ ಬೆಳಗಾವಿ ( ಸ. ನಿ) 14 01 00

ಲೀಟರ್‌ಗೆ ಐದು ಎಂಎಲ್ ಕದಿಯುವ ಲೀಗಲ್ ದಂಧೆ

ಲೀಟರ್‌ಗೆ ಐದು ಎಂಎಲ್ ಕದಿಯುವ ಲೀಗಲ್ ದಂಧೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲೀಟರ್ ಇಂಧನ ಖರೀದಿಸಿದ ಗ್ರಾಹಕನಿಂದ ಐದು ಎಂಎಲ್ ಕದಿಯುವ ಜಾಲಕ್ಕೆ ಅಧಿಕಾರಿಗಳೇ ಅವಕಾಶ ನೀಡಿರುವ ಅರೋಪವಿದೆ. ಮೊದಲಿನಿಂದಲೂ ಲೀಟರ್ ಗೆ ಐದು ಎಂಎಲ್ ಇಂಧನ ಕದಿಯುವ ಬಂಕ್‌ನ ಅಕ್ರಮ ಜಾಲಕ್ಕೆ ಅಧಿಕಾರಿಗಳೇ ಸಾತ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪರ್ಮಿಸಬಲ್ ಲಿಮಿಟ್ ಎನ್ನುವ ಕಾರಣ ನೀಡಿ ಐದು ಲೀಟರ್ ಇಂಧನ ಮಾರಿದಾಗ 25 ಎಂ.ಎಲ್ ಕಡಿಮೆಯಾದರೂ ಕೇಸು ದಾಖಲಿಸದಂತೆ ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳು ಅನಧಿಕೃತ ನಿಯಮ ಪಾಲಿಸುತ್ತಿದ್ದರು. ಇದಕ್ಕಾಗಿ ಪೆಟ್ರೋಲ್ ಬಂಕ್ ಮಾಲೀಕರು ಈ ಅಧಿಕಾರಿಗಳನ್ನು ತಪಾಸಣೆ ಹೆಸರಿನಲ್ಲಿ ಹೋದಾಗ ಕ್ಷೇಮವಾಗಿ ನೋಡಿಕೊಂಡು ವಾಪಸು ಕಳುಹಿಸುತ್ತಿದ್ದರು. ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬಂಕ್ ಗಳ ಅಕ್ರಮಗಳು ಬಯಲಿಗೂ ಬರುತ್ತಿರಲಿಲ್ಲ. ಇತ್ತೀಚೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಡಿಜಿಟಲ್ ಚಿಪ್ ಅಳವಡಿಸಿ ಕದಿಯುವ ದಂಧೆ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು. ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳಿಂದ ತಾಂತ್ರಿಕ ನೆರವು ಬಯಸಿದ್ದು ಗೊತ್ತಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳೇ ಸಿಸಿಬಿ ಪೊಲೀಸರ ಕಾರ್ಯಾಚರಣೆ ವಿಚಾರವನ್ನು ಪೆಟ್ರೋಲ್ ಬಂಕ್ ಮಾಲೀಕರಿಗೆ ಲೀಕ್ ಮಾಡಿದ್ದರು. ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ವಿಫಲ ಮಾಡಿದ್ದರು.

Recommended Video

    ರಾಮಸೇತು ನಿರ್ಮಾಣದ ರಹಸ್ಯ!! | Oneindia Kannada
     ಸಾರ್ವಜನಿಕರೇ ಬಯಲಿಗೆ ಎಳೆಯಬಹುದು

    ಸಾರ್ವಜನಿಕರೇ ಬಯಲಿಗೆ ಎಳೆಯಬಹುದು

    ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕದಿಯುವ ಬಗ್ಗೆ ಸಾರ್ವಜನಿಕರಿಗೆ ಸಂಶಯ ಮೂಡಿದರೆ ಅಲ್ಲಿಯೇ ತಪಾಸಣೆ ಮಾಡಲು ಸಾರ್ವಜನಿಕರಿಗೂ ಅಧಿಕಾರವಿದೆ. ಯಾವುದೇ ಪಟ್ರೋಲ್ ಬಂಕ್‌ನ ಇಂಧನ ಪೂರೈಕೆ ಬಗ್ಗೆ ಸಂಶಯ ಮೂಡಿದರೆ ಸಾರ್ವಜನಿಕರು ಬಯಸಿದರೆ ಐದು ಲೀಟರ್ ಅಳತೆಯ ಕ್ಯಾನ್‌ಗೆ ಇಂಧನ ತುಂಬಬೇಕು. ಅಲ್ಲಿ ಐದು ಲೀಟರ್‌ಗೆ ಸರಿಯಾಗಿ ಮಾರ್ಕ್ ಮಾಡಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಪ್ರಮಾಣೀಕರಿಸಿರುತ್ತಾರೆ. ಅ ಗುರುತಿಗೆ ಸರಿಯಾಗಿ ಇಂಧನ ತುಂಬಿದರೆ ಸರಿಯಾಗಿದೆ ಎಂದರ್ಥ, ಆದರೆ, ಹೆಚ್ಚು ಬಂದರೂ, ಕಡಿಮೆ ಬಂದರೂ ಪೆಟ್ರೋಲ್ ಬಂಕ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂದೇ ಪರಿಗಣಿಸಬೇಕು. ಕೂಡಲೇ ಕಾನೂನು ಮಾಪನ ಶಾಸ್ತ್ರದ ಅಧಿಕಾರಿ ಗಮನಕ್ಕೆ ತಂದರೆ ಅವರು ಬಂದು ತಪಾಸಣೆ ನಡೆಸಿ ಕೇಸು ದಾಖಲಿಸಬೇಕು. ಆದರೆ ಇವತ್ತಿನ ಬೆಂಗಳೂರು ಒತ್ತಡದ ಬದುಕಿನಲ್ಲಿ ಸಾರ್ವಜನಿಕರು ತಾಳ್ಮೆಯಿಂದ ಇಂಧನ ತಪಾಸಣೆ ನಡಸುವ ಗೋಜಿಗೆ ಹೋಗುವುದಿಲ್ಲ. ಇನ್ನು ಡಿಜಿಟಲ್ ಬೋರ್ಡ್ ನಲ್ಲಿ ತಂತ್ರಜ್ಞಾನ ಅಳವಡಿಸುವ ಮೂಲಕ ಸಹ ಮೋಸ ಮಾಡಲು ಅವಕಾಸವಿದ್ದು, ಯಾರಾದರೂ ತಗಾದೆ ತೆಗೆದ ಕೂಡಲೇ ಕ್ಷಣಾರ್ಧದಲ್ಲಿ ಅದನ್ನು ಸರಿಪಡಿಸುತ್ತಾರೆ. ಇಷ್ಟ ಬಂದವರಿಗೆ ಮೋಸ ಮಾಡುತ್ತಾರೆ. ತಾಂತ್ರಿಕವಾಗಿ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳೇ ಸತ್ಯಾಪಣೆ ಮಾಡಿದಾಗ ಮಾತ್ರ ಅಕ್ರಮಗಳನ್ನು ಬಯಲಿಗೆ ಎಳೆಯಲು ಸಾಧ್ಯ. ಆದರೆ, ರಾಜ್ಯ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಕೆಲ ಭ್ರಷ್ಟಾಚಾರದಿಂದ ಅಡ್ಜೆಸ್ಟ್ ಮೆಂಟ್ ವ್ಯವಹಾರವೇ ಮುಂದುವರೆದುಕೊಂಡು ಸಾಗಿದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬಂದಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+