Government employee; ಕ್ರಿಮಿನಲ್ ಪ್ರಕರಣ ಬಾಕಿ ಕಾರಣ ಬಡ್ತಿ ನಿರಾಕರಿಸುವಂತಿಲ್ಲ
ಬೆಂಗಳೂರು, ಅಕ್ಟೋಬರ್ 18; ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದ್ದು, ಆರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಅದು ನೌಕರರಿಗೆ ಬಡ್ತಿ ನಿರಾಕರಣೆಗೆ ಕಾರಣವಾಗದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಧಾರವಾಡದ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜಯಶ್ರೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಆರ್. ಕೃಷ್ಣ ಕುಮಾರ್ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ತಮಗೆ ಬಡ್ತಿ ನೀಡುವಂತೆ ಕೋರಿ ಜಯಶ್ರೀ ಅವರು 2022ರ ಜು.5ರಂದು ಸಲ್ಲಿಸಿದ್ದ ಮನವಿ ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿ ನೀಡಿದ್ದ ಹಿಂಬರಹ ಮತ್ತು ಜಿಲ್ಲಾಧಿಕಾರಿಯ ಹಿಂಬರವನ್ನು ಎತ್ತಿಹಿಡಿದ ಕೆಎಟಿ ಆದೇಶವನ್ನು ಹೈಕೋರ್ಟ್ ಇದೇ ವೇಳೆ ರದ್ದುಪಡಿಸಿದೆ. ಜತೆಗೆ, ಮುಂದಿನ ಮೂರು ತಿಂಗಳ ಒಳಗೆ ಎಲ್ಲಾ ಸರ್ಕಾರಿ ಸೌಲಭ್ಯಗಳೊಂದಿಗೆ ಅರ್ಜಿದಾರರನ್ನು ಒಟ್ಟಿಗೆ ಪ್ರಥಮ ದರ್ಜೆ ಸಹಾಯಕರು ಹಾಗೂ ಕಂದಾಯ ಇನ್ಸ್ಪೆಕ್ಟ್ ಹುದ್ದೆಗೆ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಹೈಕೋರ್ಟ್ ಆದೇಶವೇನು?; ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ಡಿಪಿಸಿ ಸಭೆ ನಡೆಯುವ ದಿನಾಂಕದಂದು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ಮತ್ತು ದೋಷಾರೋಪಗಳ ಕಲಂ ಹೊರಡಿಸಿದ್ದರೆ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಆರೋಪಿ ಸರ್ಕಾರಿ ಅಧಿಕಾರಿಗೆ ಬಡ್ತಿ ನಿರಾಕರಿಸುವ ಅಥವಾ ಮುಚ್ಚಿದ ಲಕೋಟೆ ಪ್ರಕ್ರಿಯೆ ಅನುಸರಿಸಬೇಕು. ಈ ವಿಚಾರವನ್ನು ಸ್ಪಷ್ಟಪಡಿಸಿ 1993ರ ಜು.14ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದೆ. ಸರ್ಕಾರಿ ವಕೀಲರು, ಕೆಎಟಿ ಆದೇಶವನ್ನು ಸಮರ್ಥಿಸಿಕೊಂಡಿದ್ದರು ಹಾಗೂ ಅರ್ಜಿಯಲ್ಲಿ ಯಾವುದೇ ಮೆರಿಟ್ ಇರದ ಕಾರಣ ವಜಾಗೊಳಿಸಬೇಕು ಎಂದು ಕೋರಿದ್ದರು.
ಅಲ್ಲದೆ, ಈ ಪ್ರಕರಣದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ 2021ರ ಡಿ.20ರಂದು ಡಿಪಿಸಿ ಸಭೆ ನಡೆದಿದೆ. ಅಂದಿಗೆ ಅರ್ಜಿದಾರೆಯ ವಿರುದ್ಧ ಯಾವುದೇ ದೋಷಾರೋಪ ಪಟ್ಟಿ ಅಥವಾ ದೋಷಾರೋಪಣೆ ಕಲಂಗಳನ್ನು ನೀಡಿರಲಿಲ್ಲ. 2022ರ ಫೆ.1ರಂದು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಗಾಗಿ, 2021ರ ಡಿ.20ರಂದು ನಡೆದ ಡಿಪಿಸಿ ಸಭೆಯಲ್ಲಿ ಅರ್ಜಿದಾರರಿಗೆ ಬಡ್ತಿ ನಿರಾಕರಿಸುವ ಅಥವಾ ಮುಚ್ಚಿದ ಲಕೋಟ ಪ್ರಕ್ರಿಯೆ ಅನುಸರಿಸುವ ಅವಶ್ಯಕತೆಯೇ ಉದ್ಭವಿಸಿರುವುದಿಲ್ಲ. ಹಾಗಾಗಿ, ಕೆಎಟಿ ಆದೇಶವನ್ನು ರದ್ದುಪಡಿಸಲು ಅರ್ಹ ಎಂದು ಹೇಳಿದೆ.
ಅರ್ಜಿದಾರರ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಬಾಕಿಯಿರುವುದು ಸರ್ಕಾರಿ ನೌಕರನಿಗೆ ಬಡ್ತಿ ನೀಡದಿರುವುದಕ್ಕೆ ಆಧಾರವಾಗುವುದಿಲ್ಲ. 1993ರ ಮಾ.14ರಂದು ಖುದ್ದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿ, ಡಿಪಿಸಿ ಸಭೆ ನಡೆಯುವ ದಿನದಂದು ಸರ್ಕಾರಿ ನೌಕರನ ವಿರುದ್ಧದ ಬಾಕಿಯಿರುವ ಕ್ರಿಮಿನಲ್ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಅಥವಾ ದೋಷಾರೋಪಗಳ ಕಲಂ (ಆರ್ಟಿಕಲ್ಸ್ ಆಫ್ ಚಾರ್ಜೆಸ್) ನೀಡದಿದ್ದ ಪಕ್ಷದಲ್ಲಿ ಕೇವಲ ಕ್ರಿಮಿನಲ್ ಪ್ರಕರಣ ಬಾಕಿಯಿದೆ ಎಂಬ ಮಾತ್ರಕ್ಕೆ ಬಡ್ತಿ ನಿರಾಕರಿಸಬಾರದು ಎಂದು ಆಕ್ಷೇಪಿಸಿದ್ದರು.
ಪ್ರಕರಣದ ಹಿನ್ನೆಲೆ: ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಜಯಶ್ರೀ ಅವರು 2005ರ ಮಾ.16ರಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ 2017ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅರ್ಜಿದಾರೆ ಸೇರಿದಂತೆ ಇತರರಿಗೆ ಬಡ್ತಿ ನೀಡುವ ವಿಚಾರವಾಗಿ 2021ರ ಡಿ.20ರಂದು ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆ ನಡೆದಿತ್ತು. ಅರ್ಜಿದಾರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಆಕೆಗೆ ಬಡ್ತಿ ನೀಡಲು ನಿರಾಕರಿಸಲಾಗಿತ್ತು.
ಇದರಿಂದ ಜಯಶ್ರೀ 2022ರ ಮೇ 13ರಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ತಮಗೆ ಬಡ್ತಿ ನೀಡಲು ಕೋರಿದ್ದರು. ಅದನ್ನು ಆ ಮನವಿಯನ್ನು ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿ 2022ರ ಜು.5ರಂದು ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಜಯಶ್ರೀ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ ಕೆಎಟಿ, 2023ರ ಮಾ.30ರಂದು ಆದೇಶಿಸಿತ್ತು. ಇದರಿಂದ ಆಕೆ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications