ಪೇಸಿಎಂ ಅಸ್ತ್ರಕ್ಕೆ ಬೊಮ್ಮಾಯಿ ಕಂಗಾಲು: ಹೈಕಮಾಂಡ್ ಫುಲ್ ಕ್ಲಾಸ್
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿರುವ ಪೇಸಿಂ ಪೋಸ್ಟರ್ ನಿಂದಾಗಿ ಆಡಳಿತಾರೂಢ ಬೊಮ್ಮಾಯಿ ಸರಕಾರ ತೀವ್ರ ಮುಜುಗರಕ್ಕೀಡಾಗಿದೆ. ಈ ಸಂಬಂಧ ಪೊಲೀಸ್ ಕಾರ್ಯಾಚರಣೆ ನಡೆದರೂ ಪೋಸ್ಟರ್ ರಾಜ್ಯದೆಲ್ಲಡೆ ಮನೆಮಾತಾಗಿದೆ.
ಕಾಂಗ್ರೆಸ್ ಹೂಡಿದ ಈ ದಾಳದ ಸುಳಿವು ಸಿಗದೇ ಬೊಮ್ಮಾಯಿ ಸರಕಾರ ಜನಸಾಮಾನ್ಯರ ಎದುರಿಗೆ ಪೇಚಿಗೆ ಸಿಲುಕಿದ್ದು ಒಂದು ಕಡೆಯಾದರೆ, ಹೈಕಮಾಂಡ್ ಕೂಡಾ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಗರನ್ನು ಬೆಚ್ಚಿ ಬೀಳಿಸಿದ 'ಪೇಸಿಎಂ' ಅಭಿಯಾನದ ಮಾಸ್ಟರ್ ಮೈಂಡ್ ಯಾರು ಗೊತ್ತಾ?
ಚುನಾವಣಾ ವರ್ಷವಾಗಿರುವುದರಿಂದ ಯಾವುದೇ ಸಂಭಾವ್ಯ ಆರೋಪದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಸೂಚನೆಯ ನಡುವೆಯೂ ಬಿಜೆಪಿಗೆ ಪೇಸಿಎಂ ಪೋಸ್ಟ್ ನಿಂದ ಹಿನ್ನಡೆಯುಂಟಾಗಿದೆ.
ಪೇಸಿಎಂ ಪೋಸ್ಟರ್ ಪಕ್ಷದ ಅಧಿಕೃತ ಕಾರ್ಯಕ್ರಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೊಂದು ಕಡೆ, ಇದೊಂದು ಆರೋಗ್ಯಕರ ರಾಜಕೀಯ, ಇದರಲ್ಲಿ ತಪ್ಪೇನಿಲ್ಲ. ಈ ಪೋಸ್ಟರ್ ಅನ್ನು ನಾವೇ ಮುಂದೆ ನಿಂತು ಹಾಕುತ್ತೇವೆ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಎಲ್ಲಾ ಶಾಸಕರು ಸೇರಿ 'ಪೇಸಿಎಂ' ಪೋಸ್ಟರ್ ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ: ಡಿ.ಕೆ. ಶಿವಕುಮಾರ್
ರಾಜ್ಯ ಬಿಜೆಪಿ ಘಟಕದ ವಿರುದ್ದ ಹೈಕಮಾಂಡ್ ಕೆಂಡಾಮಂಡಲ
ರಾಜ್ಯ ಸರಕಾರ ಮತ್ತು ರಾಜ್ಯ ಬಿಜೆಪಿ ಘಟಕದ ವಿರುದ್ದ ಹೈಕಮಾಂಡ್ ಕೆಂಡಾಮಂಡಲವಾಗಿದೆ ಎಂದು ವರದಿಯಾಗಿದೆ. ಗುಪ್ತಚರ ಇಲಾಖೆ ತಮ್ಮ ಸುಪರ್ದಿಯಲ್ಲಿ ಇದ್ದರೂ, ಯಾಕೆ ಈ ಕಾಂಗ್ರೆಸ್ಸಿನ ದಾಳದ ಸೂಚನೆ ಸಿಗಲಿಲ್ಲ. ಪೂರ್ವತಯಾರಿ ಇಲ್ಲದೇ ಕಾಂಗ್ರೆಸ್ ಇಂತಹ ದೊಡ್ಡ ಶಿಸ್ತುಬದ್ದವಾದ ಕ್ಯಾಂಪೇನ್ ಅನ್ನು ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಗುಪ್ತಚರ ವೈಫಲ್ಯ ಕಂಡಿದ್ದು ಯಾಕೆ ಅಥವಾ ಇಲಾಖೆ ವರದಿಯನ್ನು ನೀಡಿದ್ದರೂ ಸರಕಾರ ಕಡೆಗಣಿಸಿತೇ ಎನ್ನುವ ವರದಿಯನ್ನು ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿಗಳು ಅಧಿಕಾರಿಗಳು ಮತ್ತು ಪೊಲೀಸರ ವಿರುದ್ದ ಗರಂ
ಪೇಸಿಎಂ ಪೋಸ್ಟರ್ ಬೆನ್ನಲ್ಲೇ ಮುಖ್ಯಮಂತ್ರಿಗಳು ಅಧಿಕಾರಿಗಳು ಮತ್ತು ಪೊಲೀಸರ ವಿರುದ್ದ ಗರಂ ಆಗಿದ್ದರು. ಇದಾದ ನಂತರ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿ.ಆರ್.ನಾಯ್ಡು ಅವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು. ಠಾಣೆಗೆ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಹೋಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಈ ಪೋಸ್ಟರ್ ದೊಡ್ಡ ಸದ್ದನ್ನು ಮಾಡಿಯಾಗಿತ್ತು. ಸಾರ್ವಜನಿಕರು ಅಲ್ಲಲ್ಲಿ ಪೇಸಿಎಂ ಪೋಸ್ಟರ್ ಅನ್ನು ಸ್ಕ್ಯಾನ್ ಮಾಡಿ ನೋಡುತ್ತಿದ್ದರು. ಬೊಮ್ಮಾಯಿಯವರ ಭಾವಚಿತ್ರ ಇದರಲ್ಲಿ ಇರುವುದರಿಂದ ಸಿಎಂ ತೀವ್ರ ಮುಜುಗರ ಪಡುವಂತಾಗಿದೆ.
ಪೇಸಿಎಂ ನಿಂದ ಆದ ಮುಜುಗರಕ್ಕೆ ಕೂಡಲೇ ತಿರುಗೇಟು
ಪೇಸಿಎಂ ನಿಂದ ಆದ ಮುಜುಗರಕ್ಕೆ ತಿರುಗೇಟು ನೀಡಲು ಈ ಕೂಡಲೇ ಪ್ಲ್ಯಾನ್ ಮಾಡಿಕೊಳ್ಳಿ ಎನ್ನುವ ಸೂಚನೆ ಹೈಕಮಾಂಡ್ ಕಡೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಈವೆಂಟ್ ಮಾನೇಜ್ಮೆಂಟ್ ಎಂದು ಮೈಮರೆತ ಸಿಎಂ ಬೊಮ್ಮಾಯಿಗೆ ವರಿಷ್ಠರು ಪಕ್ಷಕ್ಕೆ ಮುಜುಗರವನ್ನು ದೂಡಬೇಡಿ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ರೀತಿಯ ಕ್ಯಾಂಪೇನ್ ವಿರುದ್ದ ಜಾಗರೂಕರಾಗಿರಬೇಕು, ಕಾಂಗ್ರೆಸ್ಸಿನ ದಾಳಕ್ಕೆ ತಡ ಮಾಡದೇ ಪ್ರತಿದಾಳ ಹೂಡಬೇಕು ಎನ್ನುವ ಸೂಚನೆ ದೆಹಲಿಯಿಂದ ಬಂದಿದೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತ್ ಜೋಡೋ ಯಾತ್ರೆ ಸಂಬಂಧ ಕ್ಯೂಆರ್ ಕೋಡ್ ಹಾಕಿ ಭಿತ್ತಿಪತ್ರ
ಕಾಂಗ್ರೆಸ್ಸಿನೊಳಗೆ ಈ ಕ್ಯಾಂಪೇನಿಗೆ ಸಿದ್ದತೆ ನಡೆಯುವುದರಿಂದ ಇದರ ಬಗ್ಗೆ ಗುಪ್ತಚರ ಅಥವಾ ಪೊಲೀಸರಿಗೆ ತಿಳಿಯಬೇಕೆಂದೇನೂ ಇಲ್ಲ. ಆದರೆ, ರಸ್ತೆಯಲ್ಲಿ ಪೋಸ್ಟರ್ ಅಂಟಿಸುವಾಗಲೂ ಇದರ ಬಗ್ಗೆ ತಿಳಿಯದಿರುವುದು ಸಿಎಂ ಬೊಮ್ಮಾಯಿಯವರ ಸಿಟ್ಟಿಗೆ ಕಾರಣವಾಗಿದೆ. ಪೇಸಿಎಂ ಪೋಸ್ಟರಿಗೆ ಕೌಂಟರ್ ನೀಡಲು ಸ್ಕ್ಯಾಂ ಸಿದ್ದರಾಮಯ್ಯ, ಇವರಿಂದ ದೂರವಿರಿ, ಭಾರತ್ ಜೋಡೋ ಯಾತ್ರೆ ಸಂಬಂಧ ಕ್ಯೂಆರ್ ಕೋಡ್ ಹಾಕಿ ಭಿತ್ತಿಪತ್ರವನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ. ಒಟ್ಟಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರ, ಚುನಾವಣೆ ಹತ್ತಿರ ಬರುತ್ತಿದ್ದಂತೇ ಇನ್ನಷ್ಟು ಜೋರಾಗಬಹುದು ಎನ್ನುವ ಮುನ್ಸೂಚನೆಯನ್ನಂತೂ ನೀಡಿದೆ.