Karnataka Elections 2023 : ಮೈಸೂರು ಜಿಲ್ಲೆಯಲ್ಲಿ ಪಕ್ಷಗಳ ಬಲಾಬಲ, ಇಲ್ಲಿದೆ ಇನ್ಸೈಡ್ ರಿಪೋರ್ಟ್
ಮೈಸೂರು, ಏಪ್ರಿಲ್ 4: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ, ಪ್ರಚಾರ ಭರಾಟೆ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಹೆಚ್ಚಾಗಿದೆ. ಈಗ ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರ ವರುಣಾದಲ್ಲಿ ಕಣಕ್ಕೆ ಇಳಿಯುತ್ತಿರುವುದರಿಂದ ಜಿಲ್ಲೆಯ ಚಿತ್ರಣ ಬ್ಯಾಟಲ್ ಗ್ರೌಂಡ್ ಆಗಿ ಬದಲಾಗಿದೆ.
ಮೈಸೂರಿನಲ್ಲಿ ವರುಣಾ, ನಂಜನಗೂಡು, ಟಿ ನರಸೀಪುರ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಹುಣಸೂರು, ಕೆಆರ್ ನಗರ, ನರಸಿಂಹರಾಜ, ಎಚ್ಡಿ ಕೋಟೆ, ಕೃಷ್ಣರಾಜ, ಚಾಮರಾಜ ವಿಧಾನಸಭಾ ಕ್ಷೇತ್ರಗಳಿವೆ.

ವರುಣಾ ವಿಧಾನಸಭಾ ಕ್ಷೇತ್ರ
ಕರ್ನಾಟಕ ವಿಧಾನಸಭಾ ಚುನಾವಣೆಗೆ ವರುಣಾದಿಂದ ಸಿದ್ದರಾಮಯ್ಯ ಅವರು ನಿಲ್ಲುತ್ತಾರೆ ಎಂದು ಟಿಕೆಟ್ ಘೋಷಣೆಯಾದಗಿನಿಂದ ವರುಣಾ ಮಾತ್ರವಲ್ಲದೆ ಇಡೀ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಚೈತನ್ಯ ಹೆಚ್ಚಾಗಿದೆ. 2008ರಲ್ಲಿ ಕ್ಷೇತ್ರ ರಚನೆಯಾದಗಿನಿಂದಲೂ ಇದು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಸಿದ್ದರಾಮಯ್ಯ ಅವರ ದೊಡ್ಡ ಬೆಂಬಲಿಗ, ಸಂಬಂಧಿಕರ ಬಳಗವೇ ಇಲ್ಲಿದೆ. ಹಾಗಾಗಿ ಇಲ್ಲಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಇಳಿಯದಿದ್ದರೂ ಗೆಲ್ಲುತ್ತಾರೆ ಎಂಬ ಮಾತಿದೆ. ಕಾರಣ ಸಿದ್ದರಾಮಯ್ಯ ಅವರ ಮೇಲೆ ಇಲ್ಲಿ ಜನರು ಇಟ್ಟಿರುವ ವಿಶ್ವಾಸ ದೊಡ್ಡದಾಗಿದೆ.
ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದಗಿನಿಂದಲೇ ಸಿದ್ದರಾಮಯ್ಯ ಅವರ ಪುತ್ರ ಹಾಲಿ ಶಾಸಕ ಯತೀಂದ್ರ ಅವರು ತಂದೆಯ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಹೀಗಾಗಿ ಅವರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಇನ್ನೂ ಇಂದು ಮುಂದು ನೋಡುತ್ತಿದ್ದಾರೆ. ಆಡಳಿತರೂಢ ಪಕ್ಷ ಬಿಜೆಪಿ ಸಿದ್ದರಾಮಯ್ಯ ವಿರುದ್ದ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಮುಂದಾಗಿ ಕೊನೆ ಅವರು ವರುಣಾದಿಂದ ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದರು. ಈಗ ಸಿದ್ದರಾಮಯ್ಯ ಅವರಿಗೆ ಎದುರಾಳಿಯೇ ಇಲ್ಲದಂತಾಗಿದೆ.

ನಂಜನಗೂಡು ವಿಧಾನಸಭಾ ಕ್ಷೇತ್ರ
ನಂಜನಗೂಡಿನಲ್ಲಿ ಅನುಕಂಪದ ಅಲೆ ಹೆಚ್ಚಾಗಿದ್ದು ಕಾಂಗ್ರೆಸ್ನಿಂದ ಟಿಕೆಟ್ ಪಡೆದಿರುವ ದರ್ಶನ್ ಧ್ರುವನಾರಾಯಣ್ ಅವರು ಗೆಲುವು ಸಾಧ್ಯತೆ ಇದೆ. ಕೆಪಿಸಿಸಿ ಕಾಯಾಧ್ಯಕ್ಷರಾಗಿದ್ದ ಮಾಜಿ ಸಂಸದ ಧ್ರುವನಾರಾಯಣ್ ಅವರ ಅಕಾಲಿಕ ಮರಣದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಪಾರ ನೋವು ಈಗ ಅನುಕಂಪದ ಮೂಲಕ ದರ್ಶನ್ ಗೆಲುವಿಗೆ ಕಾರಣವಾಗಿದೆ. ಧ್ರುವನಾರಾಯಣ್ ಅವರು ಬದುಕಿದ್ದಾಗ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದರು. ಆದರೆ ಅಕಾಲಿಕವಾಗಿ ಮರಣ ಹೊಂದಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆಯಂತೆ ಅವರ ಮಗ ದರ್ಶನ್ಗೆ ಟಿಕೆಟ್ ನೀಡಲಾಗಿದೆ.
ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಹರ್ಷವರ್ಧನ್ ಅವರು ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಅವರು ಮೊದಲಿದ್ದ ಹೆಸರನ್ನು ಕಳೆದುಕೊಂಡಿದ್ದಾರೆ. ಸೋಮವಾರ ಪ್ರಚಾರಕ್ಕೆ ಹೋಗಿದ್ದಾಗ ಹಳ್ಳಿಯೊಂದರಲ್ಲಿ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. ಹೀಗಾಗಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಣುತ್ತಿದೆ. ಹರ್ಷವರ್ಧನ್ ಅವರು ಹಾಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ. ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಇಟ್ಟುಕೊಂಡವರು. ಆದರೆ ದರ್ಶನ್ ಮೇಲೆ ಜನರಿಗಿರುವ ಅನುಕಂಪದ ಮುಂದೆ ಇದು ಕೆಲಸ ಮಾಡುತ್ತದೆಯೇ ನೋಡಬೇಕಾಗಿದೆ.
ಟಿ ನರಸೀಪುರ ವಿಧಾನಸಭಾ ಕ್ಷೇತ್ರ
ಟಿ ನರಸೀಪುರ ಸಾಮಾನ್ಯ ಕ್ಷೇತ್ರವಾದರೂ ಇಲ್ಲಿ ಮಾಜಿ ಸಚಿವ ಎಚ್ಸಿ ಮಹಾದೇವಪ್ಪ ಅವರ ವರ್ಚಸ್ಸು ಇದೆ. ಅದರೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಅಶ್ವಿನ್ ಕುಮಾರ್ ಅವರ ವಿರುದ್ಧ ಸೋಲು ಕಂಡಿದ್ದರು. ಇದು ಜಿಲ್ಲಾ ಕಾಂಗ್ರೆಸ್ಸಿಗರಿಗೆ ಅಚ್ಚರಿಯ ಫಲಿತಾಂಶವಾಗಿತ್ತು. ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಅನಿವಾರ್ಯವಾಗಿ ಮತ್ತೆ ಟಿ ನರಸೀಪುರದಿಂದ ಸ್ಪರ್ಧೆ ಮಾಡಬೇಕಾಯಿತು. ಈ ಬಾರಿ ಅವರು ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಕಳೆದ ಬಾರಿ ಮಾಡಿದ ತಪ್ಪುನ್ನು ತಿದ್ದಿಕೊಂಡು ಅತಿಯಾದ ಆತ್ಮವಿಶ್ವಾಸವನ್ನು ಹೊಂದದೆ ಸ್ಥಳೀಯವಾಗಿ ಜನರೊಂದಿಗೆ ಸಂಪರ್ಕಕ್ಕೆ ಬಂದು ಮತಯಾಚನೆ ಮಾಡುತ್ತಿದ್ದಾರೆ.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ
ಪಿರಿಯಾಪಟ್ಟಣದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರಾ ಹಣಾಹಣಿಯಿದ್ದು, ಈ ಬಾರಿ ಬಿಜೆಪಿ ಕೂಡ ಕ್ಷೇತ್ರದಲ್ಲಿ ತನ್ನ ಖಾತೆ ತೆರೆಯಬೇಕು ಎನ್ನುವ ಪ್ರಯತ್ನದಲ್ಲಿದೆ. ಈಗ ಇಲ್ಲಿ ಜೆಡಿಎಸ್ನ ಕೆ ಮಹದೇವ್ ಅವರು ಶಾಸಕರಾಗಿದ್ದಾರೆ. ಈ ಬಾರಿಯೂ ಅವರು ಗೆಲ್ಲುವ ಉತ್ಸಾಹದಲ್ಲಿದ್ದು, ಅವರ ವಿರುದ್ಧ ಕಾಂಗ್ರೆಸ್ನಿಂದ ವಿ ವೆಂಕಟೇಶ್ ಅವರು ಟಿಕೆಟ್ ಪಡೆದು ತೊಡೆತಟ್ಟಿದ್ದಾರೆ.
ಈ ಇರ್ವರು 2008ರ ಪೂರ್ವದಲ್ಲಿ ಈ ಇಬ್ಬರೂ ಒಂದೇ ಪಕ್ಷದಲ್ಲಿ ಗುರು- ಶಿಷ್ಯರಂತೆ ಇದ್ದವರು. ಈಗ ಮುಖಾಮುಖಿಯಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಳಗದಲ್ಲಿ ಕಾಣಿಸಿಕೊಂಡಿರುವ ವೆಂಕಟೇಶ್ ಅವರು ಈಗ ಶಾಸಕರಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಹಾಗೇ ನೋಡಿದರೇ ವೆಂಕಟೇಶ್ಗೆ ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಅದು ಅಷ್ಟು ಸುಲಭವಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಬಾರಿ ಅಂತರದಲ್ಲೇನು ಹಾಲಿ ಶಾಸಕ ಮಹದೇವ್ ಗೆದ್ದಿರಲಿಲ್ಲ. ಹಾಗಾಗಿ ಗೆಲುವು ಯಾರದ್ದಾಗಲಿದೆ ನೋಡಬೇಕಿದೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
ಚಾಮುಂಡೇಶ್ವರಿ ಕ್ಷೇತ್ರ ಮೈಸೂರು ಜಿಲ್ಲೆಯ ಅತ್ಯಂತ ಹಣಾಹಣಿ ಏರ್ಪಡುವ ಕ್ಷೇತ್ರ. ಇಲ್ಲಿ ಜಿಟಿ ದೇವೇಗೌಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿ ಶಾಸಕರಾಗಿದ್ದಾರೆ. ಇಲ್ಲಿ ಜಾತಿವಾರು ಲೆಕ್ಕಾಚಾರ ಅಧಿಕವಾದ್ದರಿಂದ ಜಿಟಿಡಿ ಅವರಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ. ಹಾಗೇ ನೋಡಿದರೆ 5 ಬಾರಿ ಸಿದ್ದರಾಮಯ್ಯ ಇಲ್ಲಿ ಗೆದ್ದಿದ್ದಾರೆ, 2 ಬಾರಿಯಿಂದ ಜಟಿಡಿ ಗೆಲ್ಲುತ್ತಾ ಬಂದಿದ್ದಾರೆ.
ಹುಣಸೂರು - ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ನ ಭದ್ರಕೋಟೆಯಂತಿದೆ, ಇಲ್ಲಿ ಹಾಲಿ ಶಾಸಕರಾಗಿ ಎಸ್ಟಿ ಸೋಮಶೇಖರ್ ಇದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಕ್ಕಿದೆ. ಈವರೆಗೂ 2 ಬಾರಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ದೇವರಾಜ ಅರಸು ಕಾಲದಿಂದಲೂ ಹುಣಸೂರು ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ಕೆಆರ್ನಗರ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು ಕ್ಷೇತ್ರ ಮರುವಿಂಗಡಣೆ ಬಳಿಕ ಇಲ್ಲಿ ಜೆಡಿಎಸ್ ಪಾರಮ್ಯವಿದೆ. ಕ್ಷೇತ್ರದಲ್ಲಿ ಜನರು ಸಾರಾ ಮಹೇಶ್ ಅವರ ವರ್ಚಸ್ಸು ಇದೆ. ಹೀಗಾಗಿ ಅವರಿಗೇ ಈ ಬಾರಿ ಗೆಲುವು ಎನ್ನುತ್ತವೆ ಸಮೀಕ್ಷೆಗಳು. ಕಾಂಗ್ರೆಸ್ನಿಂದ ಇಲ್ಲಿ ಡಿ ರವಿಶಂಕರ್ ಅವರಿಗೆ ಟಿಕೆಟ್ ನೀಡಲಾಗಿದೆ.
ನರಸಿಂಹರಾಜ ವಿಧಾನಸಭಾ ಕ್ಷೇತ್ರ
ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ನಾಯಕ ಕಾಂಗ್ರೆಸ್ನ ತನ್ವೀರ್ ಸೇಟ್ ಪ್ರಾಬಲ್ಯವಿದೆ. ಸತತವಾಗಿ ಇಲ್ಲಿಂದ ಗೆಲ್ಲುತ್ತಾ ಬಂದಿರುವ ಅವರ ವಿರುದ್ಧ ಎಸ್ಡಿಪಿಐ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇತ್ತೀಚೆಗೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ತನ್ವೀರ್ ಸೇಟ್ ಹೇಳಿದ್ದ ಕಾರ್ಯಕರ್ತರೊಬ್ಬರು ವಿಷ ಕುಡಿಯಲು ಮುಂದಾಗಿದ್ದರು. ಕ್ಷೇತ್ರದಲ್ಲಿ ಅವರು ಜನಸಂಪರ್ಕಕ್ಕೆ ಇಟ್ಟಿರುವ ನಿದರ್ಶನ ಹಾಗೂ ಶಕ್ತಿಪ್ರದರ್ಶನದಂತೆ ಈ ಪ್ರಹಸನ ನಡೆಯಿತು. ಇಲ್ಲಿ ಈಗ ಎಸ್ಡಿಪಿಐಬ ಅಬ್ದುಲ್ ಮಜೀಜ್ ಅವರು ಹೆಚ್ಚು ಮುನ್ನೆಲೆಗೆ ಬಂದು ಕಣಕ್ಕೆ ಇಳಿದಿದ್ದಾರೆ.
ಎಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರ
ಎಚ್ಡಿ ಕೋಟೆ ಮೊದಲು ಜೆಡಿಎಸ್ನ ದಿವಂಗತ ಚಿಕ್ಕಮಾದು ಅವರ ಪ್ರಾಬಲ್ಯವಿರುವ ಕ್ಷೇತ್ರವಾಗಿತ್ತು. ಅವರು ನಿಧನರಾದ ಬಳಿಕ ಅವರ ಮಗ ಅನಿಲ್ ಚಿಕ್ಕಮಾದು ಕಳೆದ 2018ರ ಚುನಾವಣೆಯಿಂದ ಗೆದ್ದು ಬಂದಿದ್ದಾರೆ. ಈಗ ಅನಿಲ್ ಅವರು ಕಾಂಗ್ರೆಸ್ ಸೇರಿದ್ದಾರೆ. ಈಗ ಕಾಂಗ್ರೆಸ್ನಿಂದ ಅವರು ಕಣಕ್ಕಿಳಿದಿದ್ದು ಮತ್ತೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಕ್ಷೇತ್ರದ ಶಾಸಕರಾಗಿರುವ ಎಸ್ಎ ರಾಮದಾಸ್ ವಿರುದ್ಧ ಈಗ ಇಲ್ಲಿ ಆಡಳಿತ ವಿರೋಧಿ ಅಲೆ ಇದೆ. ಅಲ್ಲದೆ ರಾಮದಾಸ್ ಅವರಿಗೆ ಟಿಕೆಟ್ ಕೊಡಬಾರದು ಎಂದು ಬ್ರಾಹ್ಮಣ ಸಂಘದ ಕೆಲವರು ಹೇಳಿದ್ದಾರೆ. ಆದರೆ ನನಗೆ ಟಿಕೆಟ್ ಸಿಗುತ್ತದೆ ಎಂದು ಅವರು ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ನಿಂದ ಇಲ್ಲಿ ಎಂಕೆ ಸೋಮಶೇಖರ್ ಪ್ರಚಾರ ಆರಂಭಿಸಿದರೆ ಜೆಡಿಎಸ್ ಮುಖಂಡ ಕೆವಿ ಮಲ್ಲೇಶ್ ಅವರು ಕೂಡ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಚಾಮರಾಜ ವಿಧಾನಸಭಾ ಕ್ಷೇತ್ರ
ಚಾಮರಾಜ ಕ್ಷೇತ್ರದಲ್ಲಿ ಶಾಸಕರಾಗಿ ಎಲ್ ನಾಗೇಂದ್ರ ಸಕ್ರಿಯರಾಗಿದ್ದಾರೆ. ಇಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಹಿಂದೆ 2013ರಲ್ಲಿ ಕೆವಿ ವಾಸು ಅವರು ಶಾಸಕರಾಗಿದ್ದರು, ಒಕ್ಕಲಿಗ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ವಾಸುವಿಗೆ ಉತ್ತಮ ವರ್ಚಸ್ಸಿದೆ. ಆದರೆ ಅದು ಮತವಾಗಿ ಬದಲಾಗುತ್ತಿಲ್ಲ. ಈ ಬಾರಿ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.












Click it and Unblock the Notifications