ಹೋದ ವರ್ಷ ಕೋಡಿ ಶ್ರೀ, ಗೊರವಪ್ಪ, ನಾಗಪ್ಪಜ್ಜ ನುಡಿದ ಭವಿಷ್ಯದ ಕಥೆ?
Recommended Video

ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಹೂವಿನಹಡಗಲಿಯಲ್ಲಿರುವ ಮೈಲಾರ ಲಿಂಗೇಶ್ವರ ಮತ್ತು ರಾಣೆಬೆನ್ನೂರಿನಲ್ಲಿರುವ ದೇವರಗುಡ್ಡದ ಮಾಲತೇಶ ಸ್ವಾಮಿ ಸನ್ನಿಧಾನದಲ್ಲಿ ಗೊರವಪ್ಪ ಕಳೆದ ವರ್ಷವೂ ಭವಿಷ್ಯ ನುಡಿದಿದ್ದಾರೆ.
ಇದರ ಜೊತೆಗೆ ಕೆಲವು ಜ್ಯೋತಿಷಿಗಳು ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ, ಕೆಲವರು ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಬರುತ್ತೆ, ಗುರುಬಲದಲ್ಲಿ ಪ್ರಧಾನಿ ಮೋದಿ ಇನ್ನಷ್ಟು ಎತ್ತರಕ್ಕೆ ಹೋಗುತ್ತಾರೆ. ಹೀಗೆಲ್ಲಾ 2017ರಲ್ಲಿ ಭವಿಷ್ಯ ನುಡಿಯಲಾಗಿತ್ತು.
ಇದಲ್ಲದೇ ನಾಗಾಸಾಧುಗಳೂ ಭವಿಷ್ಯ ನುಡಿದಿದ್ದಾಗಿದೆ. ಆದರೆ, ಎಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ರಹಗತಿಯ ಬಗ್ಗೆ ಯಾರೂ ಕಳೆದ ವರ್ಷ ಭವಿಷ್ಯ ನುಡಿದ ಬಗ್ಗೆ ವರದಿಯಾಗಿಲ್ಲ.
ಜ್ಯೋತಿಷಿಗಳು ನುಡಿದಂತೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೋ, ಕುಮಾರಸ್ವಾಮಿ ಸಿಎಂ ಆಗ್ತಾರೋ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತೋ ಎನ್ನುವ ಇವರ ಭವಿಷ್ಯದ ಸತ್ಯಾಸತ್ಯತೆ ಅರಿತುಕೊಳ್ಳಲು ಇನ್ನೂ ಸಮಯವಿದೆ.
ತಾಳೇಗರಿಯ ಮೂಲಕ ಕೋಡಿಶ್ರೀಗಳು ಭವಿಷ್ಯ ನುಡಿದರೆ, ಫೆಬ್ರವರಿ ತಿಂಗಳಲ್ಲಿ, ಭಾರತ ಹುಣ್ಣಿಮೆಯ ದಿನದಂದು ಹೂವಿನಹಡಗಲಿಯಲ್ಲಿ ನಡೆಯುವ ಮೈಲಾರ ಲಿಂಗೇಶ್ವರ ಜಾತ್ರೆ, ವಿಜಯದಶಮಿಯ ಪ್ರಯುಕ್ತ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿಯುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
2017ರಲ್ಲಿ ಕೋಡಿ ಶ್ರೀ, ಗೊರವಪ್ಪ, ನಾಗಪಜ್ಜ ನುಡಿದ ಭವಿಷ್ಯದ ಝಲಕ್ ಮುಂದಿದೆ. ಇವರ ಭವಿಷ್ಯ' ನಿಜವಾಗಿದೆಯೋ, ಇಲ್ಲವೋ.. ಅನ್ನುವುದನ್ನು ಅರ್ಥೈಸಿಕೊಳ್ಳುವುದು ಓದುಗರ ವಿವೇಚನೆಗೆ ಬಿಟ್ಟಿದ್ದು..

ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್
ಫೆಬ್ರವರಿ ತಿಂಗಳಲ್ಲಿ ಹೂವಿನಹಡಗಲಿಯ ಡೆಂಕನಮರಡಿಯಲ್ಲಿ ಐತಿಹಾಸಿಕ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ವೇಳೆ ' ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್' ಎಂದು ಗೊರವಪ್ಪ ಭವಿಷ್ಯ ನುಡಿದಿದ್ದರು. ಈ ವರ್ಷ ಮಳೆಬೆಳೆ ಉತ್ತಮವಾಗಿದ್ದರೂ, ಅತಿವೃಷ್ಠಿಯಿಂದ ಬೆಳೆದಿದ್ದೆಲ್ಲಾ ನೀರು ಪಾಲಾಗುವ ಸಾಧ್ಯತೆಯಿದೆ ಎಂದು ಇದನ್ನು ವ್ಯಾಖ್ಯಾನಿಸಲಾಗಿತ್ತು.

ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆಂದರೆ ಅದು ಎಚ್ ಡಿ ಕುಮಾರಸ್ವಾಮಿ
ಜುಲೈ ಒಂದರಂದು ಹಾಸನದಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಹೇಳಿದ್ದರು. ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು. ಪ್ರಮುಖ ಪಕ್ಷದ ರಾಜಕೀಯ ನಾಯಕ ಸಿಎಂ ಆಗುವುದಿಲ್ಲ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆ, ಪ್ರಮುಖ ಪಕ್ಷದ ರಾಜಕೀಯ ನಾಯಕ ಅಂದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಎಂದು ಅರ್ಥೈಸಿಕೊಂಡರೆ, ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆಂದರೆ ಅದು ಎಚ್ ಡಿ ಕುಮಾರಸ್ವಾಮಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕೋಡಿ ಶ್ರೀಗಳ ಭವಿಷ್ಯ ನಿಜವಾಗುತ್ತೋ ಎಂದು ತಿಳಿದುಕೊಳ್ಳಲು ಇನ್ನೂ ಸಮಯವಿದೆ.

ವಿಜಯದಶಮಿಯ ಪ್ರಯುಕ್ತ ದೇವರಗುಡ್ಡದಲ್ಲಿ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದದ್ದು
ವಿಜಯದಶಮಿಯ ಪ್ರಯುಕ್ತ ದೇವರಗುಡ್ಡದಲ್ಲಿ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದರು. 'ನಂದಿ ಗಾಬಾದಿತಲೇ..ಪರಾಕ್' ಎನ್ನುವ ಭವಿಷ್ಯವಾಣಿ ನುಡಿಯಲಾಗಿತ್ತು, ಇದು ವಿಶ್ಲೇಷಣೆಗೊಂಡಿದ್ದು ಹೀಗೆ.. ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಜಾನುವಾರುಗಳಿಗೆ ಸಂಕಷ್ಟ, ರೋಗರುಜಿನದ ಭಯ, ರೈತರಲ್ಲಿ ಗಾಭರಿ ಉಂಟಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ದುರ್ಘಟನೆಯನ್ನು ನೆನಪಿಸುವ ಸಾವು
ಕಳೆದ ಸೆಪ್ಟಂಬರ್ ಅಂತ್ಯದಲ್ಲಿ ಧಾರವಾಡದಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, ದೇಶ ಕಂಡ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ದುರ್ಘಟನೆಯನ್ನು ನೆನಪಿಸುವ ಸಾವೊಂದು ಸಂಭವಿಸಲಿದೆ. ರಾಷ್ಟ್ರಮಟ್ಟದ ನಾಯಕರೊಬ್ಬರ ಸಾವು ಸಂಭವಿಸುವ ಲಕ್ಷಣ ಇದೆ ಎಂದು ಹೇಳಿದ್ದರು.

ಜಗತ್ತಿನ ಎರಡು ಅದ್ಭುತ ಶಕ್ತಿಗಳು ಶೀಘ್ರದಲ್ಲೆ ನಾಶ ಆಗ್ತವೆ
ಅಕ್ಟೋಬರ್ ತಿಂಗಳಲ್ಲಿ ಹಾಸನದಲ್ಲಿ ಮತ್ತೊಂದು ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, 'ಜಗತ್ತಿನ ಎರಡು ಅದ್ಭುತ ಶಕ್ತಿಗಳು ಶೀಘ್ರದಲ್ಲೆ ನಾಶ ಆಗ್ತವೆ. ದೇಶದ ಗಡಿಯಲ್ಲಿ ಮದ್ದು-ಗುಂಡುಗಳು ಮೊಳಗುತ್ತವೆ. ಭೀಕರ ಅನಾಹುತ ಸಂಭವಿಸಲಿದ್ದು, ಸಹಸ್ರಾರು ಜನರು ವಿಷಗಾಳಿ ಸೇವಿಸಿ ಸಾಯುತ್ತಾರೆ' ಎಂದು ನುಡಿದಿದ್ದರು.












Click it and Unblock the Notifications