ರೇವಣ್ಣನ ಕನಸಿಗೆ ಗೌಡರ ಎಳ್ಳುನೀರು, ಗೌಡ್ರ ಮನೆಯಲ್ಲಿ ಗದ್ದಲ?
ಕುಟುಂಬ ರಾಜಕಾರಣ ಎನ್ನುವುದು ದೇಶದ ಯಾವುದೇ ರಾಜಕೀಯ ಕುಟುಂಬಕ್ಕೂ ಸೀಮಿತವಾಗಿಲ್ಲದಿದ್ದರೂ, ಜೆಡಿಎಸ್ ಪಕ್ಷವನ್ನು ಮಾತ್ರ ' ಅಪ್ಪಮಕ್ಕಳ' ಪಕ್ಷ ಎಂದು ಕರೆಯುತ್ತಿರುವುದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ನುಂಗಲಾರದ ತುತ್ತಾದಂತಿದೆ.
ಅದಕ್ಕೋ ಏನೋ, ಇತ್ತೀಚೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತಾರೆಂದು ಹೋದಲೆಲ್ಲಾ, ಕಾರ್ಯಕರ್ತರು ಕೇಳದಿದ್ದರೂ, ಮಾಧ್ಯಮದವರು ಪ್ರಶ್ನಿಸದಿದ್ದರೂ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ.
ರಾಜಕೀಯದಲ್ಲಿ ರೇವಣ್ಣ ಮತ್ತು ಕುಮಾರ ಇಬ್ಬರು ಮಾತ್ರ ಮುಂದುವರಿಯಲಿದ್ದಾರೆ ಎನ್ನುವ ತನ್ನ ನಿರ್ಧಾರದಿಂದ, ಕುಟುಂಬದಲ್ಲಿ ನಡೆಯುತ್ತಿರುವ ಶೀತಲ ಸಮರ ಗೌಡ್ರ ತಲೆಬಿಸಿ ಮಾಡಿದೆ ಎನ್ನುವ ಸುದ್ದಿಯಿದೆ.
ಒಂದು ಕಡೆ ಹಿರಿಯ ಸೊಸೆ ಭವಾನಿ ರೇವಣ್ಣ ರಾಜಕೀಯದಲ್ಲಿ ಸಕ್ರಿಯವಾಗಿರಬೇಕೆಂದು ಬಯಸುತ್ತಿದ್ದರೆ, ಕಿರಿಯ ಸೊಸೆ ಅನಿತಾ ಕುಮಾರಸ್ವಾಮಿ ಮನಸ್ಸಿಲ್ಲದಿದ್ದರೂ, ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಇನ್ನು ಒಂದುವರೆ ವರ್ಷದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಈಗಿಂದಲೇ ಪೂರ್ವತಯಾರಿ ನಡೆಸಲು ಭವಾನಿ ರೇವಣ್ಣ ಸಿದ್ದತೆ ನಡೆಸುತ್ತಿರುವಾಗಲೇ, ನನ್ನ ಕುಟುಂಬದಿಂದ ರೇವಣ್ಣ ಮತ್ತು ಕುಮಾರಸ್ವಾಮಿ ಬಿಟ್ಟರೆ ಇನ್ನಾರೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ ಗೌಡ್ರು ಸ್ಪಷ್ಟ ಪಡಿಸಿದ್ದಾರೆ.
ಹಾಸನ ಭಾಗದಲ್ಲಿ ಕುಮಾರಸ್ವಾಮಿಗಿಂತಲೂ ಪ್ರಭಾವಿ ಮುಖಂಡ ಎಂದರೆ ಅದು ರೇವಣ್ಣ. ಇದರ ಲಾಭವನ್ನು ಪಡೆದು ಪತ್ನಿ ಭವಾನಿ ಮತ್ತು ಪುತ್ರ ಪ್ರಜ್ವಲ್ ನನ್ನು ಮುಂದಿನ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡುವ ರೇವಣ್ಣ ಕನಸಿಗೆ ತಂದೆ ದೇವೇಗೌಡ್ರು ಪೂರಕವಾಗಿ ಸ್ಪಂಧಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮುಂದೆ ಓದಿ..

ಭವಾನಿ ರೇವಣ್ಣಗೆ ತಪ್ಪಿಹೋಗಿದ್ದ ಅಧ್ಯಕ್ಷೆ ಹುದ್ದೆ
ಹಾಸನ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಹಳೇಕೋಟೆ ಪಂಚಾಯತಿ ಕ್ಷೇತ್ರದಿಂದ ಸ್ಪರ್ಧಿಸಿ ಭವಾನಿ ರೇವಣ್ಣ ಭರ್ಜರಿ ಜಯ ಸಾಧಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಇನ್ನೇನು ಭವಾನಿ ಆಯ್ಕೆಯಾದರು ಎನ್ನುವಷ್ಟರಲ್ಲಿ ಅರಕಲಗೂಡು ಮಂಜು ಉರುಳಿಸಿದ ರಾಜಕೀಯ ದಾಳ ಭವಾನಿಯವರನ್ನು ಅಧ್ಯಕ್ಷೆ ಹುದ್ದೆ ಏರದಂತೇ ಮಾಡಿತ್ತು.

ರೇವಣ್ಣ ಪುತ್ರ ಪ್ರಜ್ವಲ್ ರಾಜಕೀಯ ಎಂಟ್ರಿ
ಇದಾದ ನಂತರ ಪ್ರಜ್ವಲ್ ರೇವಣ್ಣ, ತಾತ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಸ್ವೀಕರಿಸಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಮೊಮ್ಮಕ್ಕಳು ರಾಜಕೀಯಕ್ಕೆ ಬರಲು ಸ್ವತಂತ್ರರು. ಹಾಸನದಲ್ಲಿ ಪ್ರಜ್ವಲ್ ಜನರ ಸಮಸ್ಯೆಗಳಿಗೆ ಧ್ವನಿಯಾಗಲಿದ್ದಾನೆ. ಜನನಾಯಕನಾಗಿ ಬೆಳೆದು ಕಾರ್ಯಕರ್ತರು ಬಯಸಿದರೆ ಮುಂದಿನ ಚುನಾವಣೆಗೆ ಟಿಕೆಟ್ ನೀಡುವುದರ ಬಗ್ಗೆ ಚಿಂತಿಸುತ್ತೇನೆಂದು ಗೌಡ್ರು ಹೇಳಿದ್ದರು.

ಅನಿತಾ, ನಿಖಿಲ್ ಗೆ ರಾಜಕೀಯದಲ್ಲಿ ಮನಸ್ಸಿಲ್ಲ
ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಗೌಡ ಇಬ್ಬರಿಗೂ ರಾಜಕೀಯದಲ್ಲಿ ಆಸಕ್ತಿ ಅಷ್ಟಕಷ್ಟೇ ಆಗಿರುವುದರಿಂದ, ತನ್ನ ಕುಟುಂಬದವರನ್ನು ರಾಜಕೀಯಕ್ಕೆ ತರಬೇಕು ಎನ್ನುವುದು ರೇವಣ್ಣ ಅವರ ಅಭಿಲಾಷೆ. ಜೊತೆಗೆ, ಹಾಸನದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಹೊಂದಿರುವುದರಿಂದ ಜಿಲ್ಲೆಯ ಎಂಟು ಅಸೆಂಬ್ಲಿ (ಸಕಲೇಶಪುರ ಮೀಸಲು ಕ್ಷೇತ್ರ ಹೊರತು ಪಡಿಸಿ ಕಡೂರು, ಅರಸೀಕೆರೆ, ಹೊಳೇನರಸೀಪುರ, ಬೇಲೂರು, ಶ್ರವಣಬೆಳಗೊಳ, ಹಾಸನ,ಅರಕಲಗೂಡು) ಕ್ಷೇತ್ರದಲ್ಲಿ ಮೂರರಲ್ಲಿ (ತಾನು, ಪತ್ನಿ, ಪುತ್ರ) ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುವ ಆಸಕ್ತಿಯನ್ನು ರೇವಣ್ಣ ಹೊಂದಿದ್ದರು.

ಕುಟುಂಬದಿಂದ ಇಬ್ಬರು ಮಾತ್ರ
ಆದರೆ, ದೇವೇಗೌಡ ಮತ್ತು ಕುಮಾರಸ್ವಾಮಿ, ಕುಟುಂಬದ ಇತರ ಯಾವ ಸದಸ್ಯರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎನ್ನುವ ಧೃಡನಿರ್ಧಾರ ಹೊಂದಿರುವುದು, ರೇವಣ್ಣ ಕುಟುಂಬದಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗುತ್ತಿದೆ ಎನ್ನುವ ಮಾಹಿತಿಯಿದೆ.

ಅಪ್ಪಮಕ್ಕಳ ಪಕ್ಷ ಎನ್ನುವುದಕ್ಕೆ ಗೌಡ್ರ ಆಕ್ಷೇಪ
ಇತ್ತೀಚೆಗೆ ಉಡುಪಿ ಮತ್ತು ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಗೆ ರಾಜನಾಥ್ ಸಿಂಗ್ ಪುತ್ರನಿಗೆ ಮತ್ತು ಮುಲಾಯಂ ಸಿಂಗ್ ಅವರ ಇನ್ನೊಂದು ಪುತ್ರನಿಗೆ ಟಿಕೆಟ್ ನೀಡಲಿಲ್ಲವೇ, ನಮ್ಮ ಪಕ್ಷವನ್ನು ಮಾತ್ರ ಅಪ್ಪ ಮಕ್ಕಳ ಪಕ್ಷ ಎನ್ನುವುದಕ್ಕೆ ಗೌಡ್ರು ಆಕ್ಷೇಪ ವ್ಯಕ್ತ ಪಡಿಸಿದ್ದರು.

ಬಿಫಾರಂ ನೀಡುವುದು ನಾನೇ, ಗೌಡ್ರು
ಮುಂದಿನ ಚುನಾವಣೆಯಲ್ಲಿ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಸ್ಪರ್ಧಿಸಲಿದ್ದಾರೆ. ಪಕ್ಷದ ಪರವಾಗಿ ಬಿಫಾರಂ ನೀಡುವುದು ನಾನೇ, ಬೇರೆ ಯಾರಿಗೂ ನನ್ನ ಕುಟುಂಬದಿಂದ ಟಿಕೆಟ್ ನೀಡುವುದಿಲ್ಲ, ಇದು ನಿಶ್ಚಿತ ಎಂದು ದೇವೇಗೌಡ್ರು ಹೇಳಿದ್ದಾರೆ. ಹೀಗಾಗಿ, ರೇವಣ್ಣ ಕುಟುಂಬಕ್ಕೆ ನಿರಾಸೆಯೆ ಸರಣಿ ಮುಂದುವರಿಲಿದೆ ಎನ್ನುವುದು ಜೆಡಿಎಸ್ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.












Click it and Unblock the Notifications