ಸದನದ ಒಳಗಾಗಲಿ, ಹೊರಗಾಗಲಿ, ಸಿದ್ದರಾಮಯ್ಯನವರ 'ಸಿಂಹ ಘರ್ಜನೆ' ನೋಡೋಕೇ ಒಂದು ಖುಷಿ!
ರಾಜ್ಯ ರಾಜಕಾರಣದ ಮಾಸ್ ಲೀಡರ್ ಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ ಒಬ್ಬರು. ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಇವರ ಮಾತಿನ ಓಘವನ್ನು ನೋಡುವುದೇ ಒಂದು ಖುಷಿ.
ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡ ನಂತರದಿಂದ ಇಂದಿನವರೆಗೂ ಪಕ್ಷದಲ್ಲಿ ಮತ್ತು ಸದನದಲ್ಲಿ ತಮ್ಮ ಅದೇ ಗತ್ತನ್ನು ಸಿದ್ದರಾಮಯ್ಯ ಮುಂದುವರಿಸಿಕೊಂಡು ಬಂದಿದ್ದಾರೆ. ಯಾವುದೇ ವಿಚಾರವಾಗಲಿ, ವಿಷಯದ ಮೇಲೆ ಬಲವಾದ ಹಿಡಿತ ಇಟ್ಟುಕೊಂಡು ಸಿದ್ದರಾಮಯ್ಯನವರು ಮಾತನಾಡುತ್ತಿರುವಾಗ, ಅವರನ್ನು ಕೆಣಕುವ ಕೆಲಸಕ್ಕೆ ಸಾಮಾನ್ಯವಾಗಿ ಯಾರೂ ಮುಂದಾಗುವುದಿಲ್ಲ.
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲ!
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡವರನ್ನು ತುಸು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿರುವ ಸಿದ್ದರಾಮಯ್ಯನವರು, ಅವರವರ ಇಲಾಖೆಯ ಹುಳುಕನ್ನು ಎತ್ತು ತೋರುವ ಶೈಲಿ ವಿರೋಧಿಗಳೂ ಮೆಚ್ಚುವಂತದ್ದು.
ಸಿಎಂ ಯಡಿಯೂರಪ್ಪ-ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಜಟಾಪಟಿ!
ಯಾವುದೇ ಪಕ್ಷದವರಿರಲಿ, ವಯಸ್ಸಿಗಿಂತ ಕಿರಿಯರನ್ನು ವ್ಯಂಗ್ಯವಾಗಿ, ಕೆಲವೊಮ್ಮೆ ಏಕವಚನದಲ್ಲೂ ಸಂಭೋದಿಸುತ್ತಾ ಮಾತನಾಡುವ ಸಿದ್ದರಾಮಯ್ಯ, ಸದನದ ಒಳಗಾಗಲಿ, ಹೊರಗಾಗಲಿ ಅಸಂವಿಧಾನಿಕ ಅಥವಾ ಕಡತದಿಂದ ಹೊರಹಾಕಬೇಕಾದ ಪದ ಬಳಸುವುದು ಕಮ್ಮಿ.
ಸಿದ್ದರಾಮಯ್ಯನವರ ಬಗ್ಗೆ ಸಿ.ಟಿ.ರವಿಯವರ ಬಳಿ ಕೇಳಿದಾಗ
ರಾಜಕೀಯ ವಿಚಾರ ಮತ್ತು ತಮ್ಮ ವಿರೋಧಿಗಳ ಜೊತೆಗಿನ ವೈಯಕ್ತಿಕ ಸಂಬಂಧ ಬೇರೆ ಬೇರೆ ಎಂದು ಬಲವಾಗಿ ಪ್ರತಿಪಾದಿಸುವ ಸಿದ್ದರಾಮಯ್ಯನವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಬಳಿ ಒಮ್ಮೆ ಕೇಳಿದಾಗ, 'ಯಾವುದೇ ವಿಚಾರದ ಮೇಲೆ ಅವರಿಗಿರುವ ಹಿಡಿತ ಮತ್ತು ತಮ್ಮ ವಾದವನ್ನು ತಾರ್ಕಿಕ ಅಂತ್ಯಗೊಳಿಸುವ ಅವರ ಜಾಣ್ಮೆ, ಮಾತಿನ ಶೈಲಿ ನನಗೆ ಬಹಳ ಇಷ್ಟ'ಎಂದಿದ್ದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ
ಹಾಲೀ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆಯೂ ಸರಕಾರವನ್ನು ಸಿದ್ದರಾಮಯ್ಯ ಜಾಡಿಸಿದ ರೀತಿ ಅಂತಿಂದಲ್ಲ. ಮಾತಿನ ಮಧ್ಯೆ ಬೇರೆ ವಿಚಾರದ ಬಗ್ಗೆಯೂ ಪ್ರಸ್ತಾವಿಸುವ ಸಿದ್ದರಾಮಯ್ಯ, 'ಏ ಯಾವತ್ತಾದ್ರೂ ವಿಸ್ಕಿ ಕುಡಿದಿದ್ದೀಯಾ', 'ನೀನು ನಿನ್ನೆಮೊನ್ನೆಯ ತನಕ ನನ್ನ ಜೊತೆಗಿದ್ದೆ, ಈಗ ಅಲ್ಲಿಗೆ ಹೋಗ್ಬಿಟ್ಟಿದ್ದೀಯಾ' ಎಂದು ಕಾಲೆಳೆಯುತ್ತಾ ಮತ್ತೆ ವಿಚಾರಕ್ಕೆ ಬರುವ ರೀತಿ ಅದ್ಭುತ.
ಸರಕಾರವನ್ನು ಲೆಫ್ಟ್ ಎಂಡ್ ರೈಟ್ ತೆಗೆದುಕೊಂಡ ರೀತಿ
ಯಾವುದೇ ಇಲಾಖೆಯ ವಿಚಾರದ ಮೇಲೆ ಮಾತನಾಡುವಾಗ ಅಂಕಿಅಂಶದ ಜೊತೆಗೆ ಮಾತನಾಡುವ ಸಿದ್ದರಾಮಯ್ಯ, ಸದನದಲ್ಲಿ ಇಂದಿನ (ಫೆ 3) ಭಾಷಣದ ವೇಳೆ, ಬಿಜೆಪಿಯವರು ರಾಜ್ಯಪಾಲರಿಂದ ಏನು ಓದಿಸಿದ್ದರೋ, ಅದನ್ನೇ ಹಿಡಿದುಕೊಂಡು ಸರಕಾರವನ್ನು ಲೆಫ್ಟ್ ಎಂಡ್ ರೈಟ್ ತೆಗೆದುಕೊಂಡ ರೀತಿ ಅವರಲ್ಲಿರುವ ರಾಜಕೀಯ ಪ್ರೌಢಮ್ಯತೆಯನ್ನು ತೋರಿಸುತ್ತದೆ.
ಈಶ್ವರಪ್ಪನವರ ಬಗ್ಗೆ ಸಿದ್ದರಾಮಯ್ಯ
ಇನ್ನು ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಡುವ ರೀತಿ, ಅವರ ಬಾಯಿಮುಚ್ಚಿಸುವ ಪರಿ ಕೂಡಾ ಮೆಚ್ಚುವಂತದ್ದು. ಅದಕ್ಕೊಂದು ಉದಾಹರಣೆಯೆಂದರೆ, ಕುರುಬ ಸಮುದಾಯದ ಪಾದಯಾತ್ರೆಯಲ್ಲಿ ತಾವು ಭಾಗವಹಿಸದೇ ಇರುವುದನ್ನು ವಿರೋಧಿಸಿ ಈಶ್ವರಪ್ಪನವರು ಮಾತನಾಡಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯನವರು ಕೊಟ್ಟ ಉತ್ತರ,'ನಮ್ಮ ಸಮುದಾಯದವರು ಏತಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಡಿಮಾಂಡ್ ಅನ್ನು ಈಡೇರಿಸಬೇಕಾದವರು ಯಾರು, ಸರಕಾರವಲ್ಲವೇ. ಈಗ ಇರುವುದು ಯಾರ ಸರಕಾರ, ಈಶ್ವರಪ್ಪನವರು ಸರಕಾರದ ಭಾಗವಲ್ಲವೇ, ಅವರದೇ ಸರಕಾರದ ವಿರುದ್ದ ಅವರು ಪಾದಯಾತ್ರೆ ಮಾಡುತ್ತಿದ್ದಾರಾ' ಎಂದು ಮರು ಪ್ರಶ್ನಿಸಿದರು.
Recommended Video
ಹೀಗೇ ಇರಲಿ ಸಿದ್ದರಾಮಯ್ಯನವರ ರಾಜಕೀಯ ಶೈಲಿ, ಮಾತಿನ ಓಘ
ಇನ್ನು ರಾಹುಲ್ ಗಾಂಧಿಯವರು ರಾಷ್ಟ್ರ ರಾಜಕಾರಣದಲ್ಲಿ ಪ್ರಬಲರಾಗಿ ಕಾಣಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಎಐಸಿಸಿಯ ಜವಾಬ್ದಾರಿಯನ್ನು ಕೊಡಿ ಎನ್ನುವ ಕೂಗು ಕೇಳಿಬರುತ್ತಿತ್ತು. ಅಷ್ಟರಮಟ್ಟಿಗೆ ಸಿದ್ದರಾಮಯ್ಯನವರು ರಾಜಕೀಯದಲ್ಲಿ ಹಿಡಿತವನ್ನು ಸಾಧಿಸಿಕೊಂಡು ಬರುತ್ತಿದ್ದಾರೆ.