'ಮಾತಿಗೆ ತಪ್ಪದ ಮಗ' ಬಿಎಸ್ವೈ ಅವರನ್ನು ಈಗ 'ನಾಲಿಗೆ ಇಲ್ಲದ ನಾಯಕ' ಅನ್ನುತ್ತಿದ್ದಾರೆ!
ಬೆಂಗಳೂರು, ಜ 25: ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕಸರತ್ತು ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಯಡಿಯೂರಪ್ಪನವರಿಗೆ ಎದುರಾಗುತ್ತಿದೆ. ಮೂರು ಬಾರಿ ಖಾತೆಯನ್ನು ಸಿಎಂ ಅದಲು ಬದಲು ಮಾಡಿದ್ದಾರೆ.
ಇಷ್ಟಾದರೂ ಸಚಿವರಿಗೆ ತಮ್ಮ ಸಿಕ್ಕಿರುವ ಖಾತೆಯ ಬಗ್ಗೆ ಅಸಮಾಧಾನ ಮುಂದುವರಿದಿದೆ. ಈ ನಡುವೆ, ಜೆ.ಸಿ.ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ನಡುವೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಎಸ್ವೈ ಸರಕಾರ ಮತ್ತು ಕೇಂದ್ರ ಸರಕಾರದ ವಿರುದ್ದ ಸಾಲುಸಾಲು ಟ್ವೀಟ್ ಅನ್ನು ಮಾಡಿ, "ಆರಂಭದಲ್ಲಿ ಯಡಿಯೂರಪ್ಪನವರನ್ನು ಮಾತಿಗೆ ತಪ್ಪದ ಮಗ ಎನ್ನುತ್ತಿದ್ದವರು, ಈಗ ನಾಲಿಗೆ ಇಲ್ಲದ ನಾಯಕ" ಎಂದು ಕರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಹಲವು ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಮಾದಿಗ ಸಮುದಾಯದ ನಾಯಕರೊಬ್ಬರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಬೇಡಿಕೆ ನ್ಯಾಯಬದ್ಧವಾಗಿದೆ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ"ಎಂದು ಹೇಳಿದ್ದಾರೆ. ಆರಂಭದಲ್ಲಿ ಮೋದಿಯವರು ಧರ್ಮರಾಯನಂತೆ ಇದ್ದರು..

ಬಿಜೆಪಿಗೆ ವಲಸೆ ಹೋದವರಿಗೆ ಈಗ ಅತೃಪ್ತಿ ಕಾಡುತ್ತಿದೆ
"ಬಿಜೆಪಿಗೆ ವಲಸೆ ಹೋದವರಿಗೆ ಈಗ ಅತೃಪ್ತಿ ಕಾಡುತ್ತಿದೆ. ವಲಸೆ ಹೋದವರು ಆರಂಭದಲ್ಲಿ @BSYBJP ಅವರನ್ನು ಮಾತಿಗೆ ತಪ್ಪದ ಮಗ ಎಂದು ಹಾಡಿ ಹೊಗಳುತ್ತಿದ್ದರು, ಈಗ ನಾಲಿಗೆ ಇಲ್ಲದ ನಾಯಕ ಎನ್ನುತ್ತಿದ್ದಾರೆ. ಬಡ ಕಾರ್ಮಿಕರ ಸಾವಿಗೆ ಕಾರಣವಾದ ಶಿವಮೊಗ್ಗದ ದುರ್ಘಟನೆಯ ಹೊಣೆಯನ್ನು ಅಕ್ರಮ ನಡೆಯುವಾಗ ಕಣ್ಣುಮುಚ್ಚಿಕೊಂಡಿರಿ ಎಂದು ಹೇಳಿದ ಈಶ್ವರಪ್ಪ ಹೊರುತ್ತಾರೆಯೇ? ಅಥವಾ ಅವರ ಮಾತುಕೇಳಿದ ಅಧಿಕಾರಿಗಳು ಹೊರುತ್ತಾರೋ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು
"ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು. ಈಗ ದುರ್ಯೋಧನನ ಸರ್ಕಾರವಾಗಿದೆ ಎಂದು ಹಂಪನಾ ಅವರು ಹೇಳಿದ್ದಾರೆ. ಇದರಲ್ಲಿ ಮಾನಹಾನಿಯಾಗುವ ಅಂಶ ಏನಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ" - ಸಿದ್ದರಾಮಯ್ಯ ಟ್ವೀಟ್.

ಹಂ.ಪ ನಾಗರಾಜಯ್ಯ
"ಹಂ.ಪ ನಾಗರಾಜಯ್ಯ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಯಾರೋ ದೂರುಕೊಟ್ಟರು ಎಂಬ ಕಾರಣಕ್ಕೆ ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸುವುದು ಪ್ರಜಾಸತ್ತೆಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ @BSYBJP ಗೆ ಗೌರವ ಇದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಿ" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
Recommended Video

ಸಿದ್ದರಾಮಯ್ಯ ಸಾಲುಸಾಲು ಟ್ವೀಟ್
"ಹುಣಸೋಡಿನಲ್ಲಿ ಸಂಭವಿಸಿದ ಅವಘಡ ಅತ್ಯಂತ ಗಂಭೀರವಾದ ವಿಷಯ. ಅಕ್ರಮ ಗಣಿಗಾರಿಕೆಗೆ ಕುರಿತ ಆಯನೂರು ಮಂಜುನಾಥ್ ಮತ್ತು ಈಶ್ವರಪ್ಪ ಅವರ ಭಿನ್ನ ಹೇಳಿಕೆಗಳಲ್ಲಿ ಸತ್ಯ ಯಾವುದೆಂದು ಗೊತ್ತಾಗಬೇಕು. ಘಟನೆ ಸಂಬಂಧ ಸರ್ಕಾರ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು"ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.












Click it and Unblock the Notifications