ಬಿಜೆಪಿ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಯಾಕಿಂತಹ ಎಡವಟ್ಟು!
ಬೆಂಗಳೂರು, ಏಪ್ರಿಲ್ 12: ಬಿಜೆಪಿಯನ್ನು ಟೀಕಿಸುವ ಬರದಲ್ಲಿ ವಿರೋಧ ಪಕ್ಷವನ್ನು ಮತ್ತು ಪಕ್ಷದ ನಾಯಕರನ್ನೇ ಎಳೆದು ತರುವುದು ಸಿದ್ದರಾಮಯ್ಯನವರಿಗೆ ಹೊಸದೇನಲ್ಲ. ಬಾಯಿತಪ್ಪಿನಿಂದ ಇಂತಹ ಎಡವಟ್ಟನ್ನು ವಿರೋಧ ಪಕ್ಷದ ನಾಯಕರು ಆವಾಗಾವಾಗ ಮಾಡುತ್ತಿರುತ್ತಾರೆ.
ಇಂತಹ ಮತ್ತೊಂದು ತಪ್ಪನ್ನು ಸಿದ್ದರಾಮಯ್ಯನವರು ಬೆಲೆ ಏರಿಕೆ ಸಂಬಂಧದ ಪ್ರತಿಭಟನಾ ಸಭೆಯಲ್ಲಿ ಮಾಡಿದ್ದಾರೆ. ಬಿಜೆಪಿಯನ್ನು ಕಿತ್ತೊಗೆಯಬೇಕು ಎನ್ನುವುದರ ಬದಲು ಕಾಂಗ್ರೆಸ್ ಅನ್ನು ಎಂದು ಹೇಳಿದ್ದಾರೆ, ಕಾರ್ಯಕರ್ತರು ಎಚ್ಚರಿಸಿದ ನಂತರ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಜನಜಾಗೃತಿ ಸಭೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯ ಬದಲು, ಕಿತ್ತೂರು ರಾಣಿ ಜಯಮ್ಮನ ಜಯಂತಿ ಎಂದು ಹಿಂದೊಮ್ಮೆ ಭಾಷಣದಲ್ಲಿ ಸಿದ್ದರಾಮಯ್ಯ ಎಡವಟ್ಟನ್ನು ಮಾಡಿಕೊಂಡಿದ್ದರು.
ಅದೇ ರೀತಿ ವಿಜಯಪುರದಲ್ಲಿ ಮಾತಾನಾಡುತ್ತಿದ್ದ ಸಿದ್ದರಾಮಯ್ಯ, ಎಂ.ಸಿ.ಮನಗೂಳಿ ನಿಧನರಾದರು ಎನ್ನುವ ಬದಲು ಅಶೋಕ್ ಮನಗೂಳಿ ನಿಧನರಾದರು ಎಂದು ಹೇಳಿದ್ದರು. ಆ ನಂತರ ಪಕ್ಷದ ಮುಖಂಡರು ಕಿವಿ ಬಳಿ ಬಂದು ಹೇಳಿದ ನಂತರ ತಪ್ಪನ್ನು ಸರಿಪಡಿಸಿಕೊಂಡಿದ್ದರು.

ಕೆಪಿಸಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸುಲಿಗೆಗೆ ಇಳಿದಿರುವ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಇಂದು ಗಗನಕ್ಕೇರಿ ಜನಸಾಮಾನ್ಯರ ಬದುಕು ಹೈರಾಣಾಗಿದೆ. ಜನರ ಸಂಕಷ್ಟಗಳೆಡೆಗೆ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನದ ಅಂಗವಾಗಿ ಈ ಹೋರಾಟ ನಡೆಸುತ್ತಿದೆ. ಕಳೆದ ಒಂದು ವಾರದಲ್ಲಿ ತೈಲಬೆಲೆ ಎಷ್ಟು ಏರಿಕೆ ಕಂಡಿದೆ ಎನ್ನುವುದು ನಿಮಗೆಲ್ಲಾ ತಿಳಿದಿದೆ"ಎಂದು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದರು.

ಜನರನ್ನು ಉಳಿಸುವುದಕ್ಕೋಸ್ಕರ ಈ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು
"ಈ ರಾಜ್ಯವನ್ನು, ಸಂವಿಧಾನವನ್ನು ಮತ್ತು ಜನರನ್ನು ಉಳಿಸುವುದಕ್ಕೋಸ್ಕರ ಈ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು, ಇದು ನಮ್ಮೆಲ್ಲರ ಆಶಯ"ಎಂದು ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದಾರೆ. ಆಗ, ಸರ್ ಅದು ಕಾಂಗ್ರೆಸ್ ಅಲ್ಲ, ಬಿಜೆಪಿ ಎಂದಾಗ, "ಐ ಮೀನ್ ಬಿಜೆಪಿ ಸರಕಾರನ್ನು ಕಿತ್ತೊಗೆಯಬೇಕು. ಅಪ್ಪಿತಪ್ಪಿ ಬಾಯ್ತಪ್ಪಿನಿಂದ ಹೇಳಿದರೆ, ಯಾಕ್ರೀ ಹಂಗೆಲ್ಲಾ ಮಾಡುತ್ತಿದ್ದೀರಾ" ಎಂದು ಸಿದ್ದರಾಮಯ್ಯ ತಮ್ಮ ತಪ್ಪನ್ನು ಸರಿಪಡಿಸಿಕೊಂಡು, ಕಾರ್ಯಕರ್ತರನ್ನು ಪ್ರಶ್ನಿಸಿದರು.

ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದಲ್ಲಿ ಸಿದ್ದು ಎಡವಟ್ಟು
"ಈ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಆಗಿದ್ದರೆ, ಪಡಿತರ ವಸ್ತು ಸರಿಯಾಗಿ ಬರುತ್ತಿದ್ದರೆ, ರಸ್ತೆ ಅಭಿವೃದ್ದಿ ಆಗಿದ್ದರೆ, ಕ್ಷೇತ್ರ ಕಲ್ಯಾಣವಾಗಿದ್ದರೆ, ಅದು ನಮ್ಮ ಮತ್ತು ನರೇಂದ್ರ ಮೋದಿ ಸರಕಾರದ ಕೊಡುಗೆ. ನರೇಂದ್ರ ಮೋದಿಗೆ ನೀಡಿದ ಪ್ರತಿ ಓಟು ನನಗೆ ನೀಡಿದಂತೆ"ಎಂದು ಹಿಂದೆ, ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಭಾಷಣ ಮಾಡಿದ್ದರು.

ರಾಮದುರ್ಗ ತಾಲೂಕಿನ ಕಾಂಗ್ರೆಸ್ ಪ್ರಚಾರದ ವೇಳೆ ಸಿದ್ದರಾಮಯ್ಯ
ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಮಾತನಾಡುತ್ತಾ ಸಿದ್ದರಾಮಯ್ಯ, " ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಹೆದರಿಕೊಂಡು ಬಿಜೆಪಿ ಸರ್ಕಾರ ಇದನ್ನು ಮುಂದಕ್ಕೆ ಹಾಕಿದೆ. ಬಿಜೆಪಿಯವರು ಒಬ್ಬರನ್ನ ನಿಲ್ಲಿಸುವ ಬದಲು, ಇಬ್ಬರನ್ನ ನಿಲ್ಲಿಸಿದ್ದಾರೆ. ಬಿಜೆಪಿಯವರಿಗೆ ಇಬ್ಬಗೆ ರಾಜಕಾರಣ ಮಾಡಿ ಗೊತ್ತು. 2023ರಲ್ಲಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ. ಅದನ್ನ ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ರಾಜ್ಯದ ಜನ ಈ ಸರ್ಕಾರ ಯಾವಾಗ ತೊಲಗುತ್ತೆ ಅಂತಾ ಶಾಪ ಹಾಕುತ್ತಿದ್ದಾರೆ. ಈ ದೇಶದ ಸಾಲಮನ್ನಾ ಮಾಡಿದ್ದು ನರೇಂದ್ರ ಮೋದಿ"ಎಂದು ಸಿದ್ದರಾಮಯ್ಯನವರು ಮನಮೋಹನ್ ಸಿಂಗ್ ಎನ್ನುವ ಬದಲು ಮೋದಿ ಅಂದಿದ್ದರು.












Click it and Unblock the Notifications