ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ: ಕೊನೆಗೂ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ಸಾಮಾನ್ಯವಾಗಿ ಚುನಾವಣೆಗೆ ಒಂದೆರಡು ವರ್ಷ ಇರುವಾಗಲೇ ತಮ್ಮ ಸೀಟನ್ನು ಭದ್ರಗೊಳಿಸುವ ಕೆಲಸವನ್ನು ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರು ಮಾಡುತ್ತಾರೆ. ತಾವು ಪ್ರತಿನಿಧಿಸುವ ಕ್ಷೇತ್ರದ ಕಡೆ ಹೆಚ್ಚಿನ ಗಮನ ಹರಿಸುತ್ತಾರೆ.
ಅದರಂತೆಯೇ, ಬಿಜೆಪಿ ಸರಕಾರ ಅವಧಿಗೆ ಮುನ್ನ ಪತನಗೊಳ್ಳದಿದ್ದರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನು ಬರೋಬ್ಬರಿ ಎರಡು ವರ್ಷವಿದೆ. ಆದರೂ, ಬಿಜೆಪಿಯಲ್ಲಿನ ಆಂತರಿಕ ಗೊಂದಲದಿಂದಾಗಿ ಚುನಾವಣೆ ಬೇಗ ಬಂದರೂ ಬರಬಹುದು ಎನ್ನುವುದು ವಿರೋಧ ಪಕ್ಷಗಳ ಲೆಕ್ಕಾಚಾರ.
ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕೊನೇ ಕ್ಷಣದಲ್ಲಿ ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಲ್ಲೂ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಸೋಲಾಗಬಹುದು ಎನ್ನುವ ಅವರ ಲೆಕ್ಕಾಚಾರ ಸರಿಯಾಗಿಯೇ ಇತ್ತು.
ಒಂದು ವೇಳೆ, ಬಾದಾಮಿಯಲ್ಲಿ ಸ್ಪರ್ಧಿಸದೇ ಇದ್ದಿದ್ದರೆ, ಅವರ ರಾಜಕೀಯ ಭವಿಷ್ಯವೇ ಮಂಕಾಗುತ್ತಿತ್ತು. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಅವರು ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರ ಈಗಲೇ ಮುನ್ನಲೆಗೆ ಬಂದು ಕೂತಿದೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ನೀಡಿರುವ ಬಹಿರಂಗ ಆಫರ್
ಸಿದ್ದರಾಮಯ್ಯನವರು ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸಬಹುದು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಓಡಾಡುತ್ತಿದೆ. ಅದಕ್ಕೆ ಒಂದು ಕಾರಣ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ನೀಡಿರುವ ಬಹಿರಂಗ ಆಫರ್. ಈ ಬಗೆಗಿನ ಚರ್ಚೆಗೆ ಮಂಗಳ ಹಾಡುವ ಪಯತ್ನವನ್ನು ಸಿದ್ದರಾಮಯ್ಯನವರು ಎರಡು ದಿನಗಳ ಹಿಂದೆ ಮಾಡಿದ್ದಾರೆ.

ಮಿನಿಮಮ್ ಐವತ್ತು ಸಾವಿರ ಲೀಡ್ ನಿಂದ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ
"ನನ್ನ ಕ್ಷೇತ್ರವನ್ನು ಬಿಟ್ಟು ಕೊಡಲು ಸಿದ್ದನಿದ್ದೇನೆ, ಮಿನಿಮಮ್ ಐವತ್ತು ಸಾವಿರ ಲೀಡ್ ನಿಂದ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ಅವರು ನಾಮಿನೇಶನ್ ಫೈಲ್ ಮಾಡಿ ಹೋಗಲಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ"ಎಂದು ಜಮೀರ್ ಹೇಳಿದ್ದರು. ಜಮೀರ್ ಅವರ ಈ ಹೇಳಿಕೆಗೆ ಕ್ಲಿಯರ್ ಕಟ್ ಆಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿರಲಿಲ್ಲ.

ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸಲಿದ್ದೇನೆ
ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಸಿದ್ದರಾಮಯ್ಯ, "ಜಮೀರ್ ಅಹ್ಮದ್ ಅವರ ಔದಾರ್ಯ, ಚಾಮರಾಜಪೇಟೆಯಿಂದ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ. ಅವರ ಔದಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ನಾನು ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸಲಿದ್ದೇನೆ"ಎಂದು ಸಿದ್ದರಾಮಯ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.
Recommended Video

ಜಿ.ಟಿ.ದೇವೇಗೌಡ್ರು ಮತ್ತು ಸಿದ್ದರಾಮಯ್ಯನವರ ಜೊತೆಗೆ ಮಾತುಕತೆ
ಜೆಡಿಎಸ್ ನಲ್ಲಿದ್ದರೂ ಮಾನಸಿಕವಾಗಿ ದೂರವಾಗಿರುವ ಜಿ.ಟಿ.ದೇವೇಗೌಡ್ರು ಮತ್ತು ಸಿದ್ದರಾಮಯ್ಯನವರ ಜೊತೆಗೆ ಮಾತುಕತೆ ನಡೆದಿತ್ತು. ಅದರ ಪ್ರಕಾರ, ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಮತ್ತು ಹುಣಸೂರಿನಿಂದ ಜಿಟಿಡಿ ಪುತ್ರ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೊಡಿಸುವ ಜಬಾಬ್ದಾರಿ ಸಿದ್ದರಾಮಯ್ಯನವರದ್ದು ಎನ್ನುವ ಒಪ್ಪಂದ ನಡೆದಿತ್ತು ಎನ್ನುವ ಮಾತು ಕೂಡಾ ಕೇಳಿ ಬರುತ್ತಿತ್ತು.












Click it and Unblock the Notifications