ಆಪರೇಷನ್ ಕಮಲ ಆಡಿಯೋ; 17 ಶಾಸಕರ ತೀರ್ಪು ವಿಳಂಬ
ಬೆಂಗಳೂರು, ನವೆಂಬರ್ 05 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಡಿಯೋ ಪ್ರಕರಣ ಅನರ್ಹ ಶಾಸಕರಿಗೆ ಸಂಕಷ್ಟ ತಂದಿದೆ. ಆಡಿಯೋ ಟೇಪ್ ವಿಚಾರಣೆಗೆ ಜೆಡಿಎಸ್, ಕಾಂಗ್ರೆಸ್ ಮನವಿ ಮಾಡಿದ್ದು, ಅನರ್ಹ ಶಾಸಕರ ತೀರ್ಪು ವಿಳಂಬವಾಗಲಿದೆ.
ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿ ಎಸ್. ವಿ. ರಮಣ ನೇತೃತ್ವದ ಪೀಠದದಲ್ಲಿ ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಚಾರಣೆ ನಡೆಯಿತು. 17 ಅನರ್ಹ ಶಾಸಕರ ಅರ್ಜಿಯನ್ನು ಸಹ ಇದೇ ಪೀಠ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ನಾವು ವಿಚಾರಣೆಗೆ ಪರಿಗಣಿಸುತ್ತೇವೆ. ಆದರೆ, ಅನರ್ಹ ಶಾಸಕರ ಅರ್ಜಿಯ ತೀರ್ಪು ಪ್ರಕಟಿಸಲು ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯ ವಕೀಲರಿಗೆ ಸೂಚನೆ ನೀಡಿತು.
ಡಿಸೆಂಬರ್ 5ರಂದು 15 ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಆದ್ದರಿಂದ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ರಾಜ್ಯದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ವಾರದಲ್ಲಿ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.

ಆಡಿಯೋ ಸಿಡಿ ಪರಿಶೀಲನೆ ಮಾಡಿ
ಮಂಗಳವಾರ ಜೆಡಿಎಸ್ ಪರ ವಕೀಲ ರಾಜೀವ್ ಧವನ್ ನ್ಯಾಯಪೀಠದ ಮುಂದೆ ವಾದ ಮಂಡನೆ ಮಾಡಿದರು. ಶಾಸಕರ ರಾಜೀನಾಮೆಗೆ ಕಾರಣ ಯಾರೆಂದು ಆಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಆಡಿಯೋ ಸಿಡಿಯನ್ನು ಪರಿಶೀಲನೆ ಮಾಡುವಂತೆ ಮನವಿ ಮಾಡಿದರು.

ಕಪಿಲ್ ಸಿಬಲ್ ವಾದ ಮಂಡನೆ
ಕಾಂಗ್ರೆಸ್ ಪರವಾಗಿ ವಾದ ಮಂಡನೆ ಮಾಡಿದ ಕಪಿಲ್ ಸಿಬಲ್, "ಕೇಂದ್ರ ಗೃಹ ಸಚಿವರು ಶಾಸಕರ ರಾಜೀನಾಮೆ ಹಿಂದಿದ್ದಾರೆ. ಶಾಸಕರ ರಾಜೀನಾಮೆಗೆ ಕಾರಣ ಯಾರೆಂದು ಬಿಜೆಪಿ ಸಭೆಯಲ್ಲಿಯೂ ಚರ್ಚೆ ನಡೆದಿದೆ. ಆಡಿಯೋವನ್ನು ವಿಚಾರಣೆಗೆ ಪರಿಗಣಿಸಬೇಕು" ಎಂದು ವಾದ ಮಂಡನೆ ಮಾಡಿದರು.

ಯಡಿಯೂರಪ್ಪ ಪರ ವಕೀಲರ ವಾದ
ಯಡಿಯೂರಪ್ಪ ಪರವಾಗಿ ವಾದ ಮಂಡನೆ ಮಾಡಿದ ಸುಂದರಂ ಕಾಂಗ್ರೆಸ್ ಮತ್ತು ಜೆಡಿಎಸ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಆಡಿಯೋವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿರಾಕರಿಸಿದ್ದಾರೆ ಎಂದು ವಾದ ಮಂಡನೆ ಮಾಡಿದರು.

ಸುಪ್ರೀಂಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿ ಎಸ್. ವಿ. ರಮಣ ಅಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು. ನ್ಯಾಯಮೂರ್ತಿ ಖನ್ನಾ ಆಡಿಯೋವನ್ನು ಗಂಭೀರವಾಗಿ ಪರಿಗಣಿಸಿದರೆ ನೋಟಿಸ್ ನೀಡಬೇಕಾಗುತ್ತದೆ. ಆಗ ತೀರ್ಪು ವಿಳಂಬವಾಗಬಹುದು ಎಂದರು. ಅಡಿಯೋ ಬಗ್ಗೆ ವಿಚಾರಣೆ ನಡೆಸೋಣ ಆದರೆ, ಶಾಸಕರ ಅರ್ಜಿಯ ತೀರ್ಪು ಪ್ರಕಟಿಸಲು ಅವಕಾಶ ನೀಡಿ ಎಂದು ನ್ಯಾಯಾಲಯ ವಕೀಲರಿಗೆ ಸೂಚಿಸಿತು.












Click it and Unblock the Notifications