ಕಾಂಗ್ರೆಸ್ನಿಂದ 20 ಜನ ಬಿಜೆಪಿಗೆ ಬರ್ತಾರೆ: ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದ ಜಾರಕಿಹೊಳಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು (ಶನಿವಾರ, ಮೇ 13) ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ಯಾವ ಪಕ್ಷಕ್ಕೆ ಪೂರ್ಣ ಬಹುಮತ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಮೇ 10ರಂದು ನಡೆದ ಮತದಾನದ ಬಳಿಕ ಹೊರಬಿದ್ದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗೆಲ್ಲಲಿವೆ ಎಂದು ಹೇಳಿದ್ದು, ಬಿಜೆಪಿ ಎರಡನೇ ಸ್ಥಾನ ಪಡೆಯುವ ಮುನ್ಸೂಚನೆ ನೀಡಿವೆ. ಆದರೂ, 2600ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದ ಬಳಿಕವೇ ಸೋಲು-ಗೆಲುವಿನ ನೈಜ ಚಿತ್ರಣ ಹೊರಬರಲಿದೆ.

ರಾಜ್ಯ ಮತ್ತು ದೇಶದ ಗಮನ ಕರ್ನಾಟಕ ಚುನಾವಣಾ ಫಲಿತಾಂಶದ ಕಡೆ ನೆಟ್ಟಿದ್ದರೆ, ಫಲಿತಾಂಶಕ್ಕೂ ಮುನ್ನ ಮತ್ತೆ ಆಪರೇಷನ್ ಕಮಲದ ಸುದ್ದಿ ಹರಿದಾಡುತ್ತಿದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಬೇರೆ ಪಕ್ಷದಿಂದ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಲು 17 ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಮತ್ತೆ ಅದೇ ರೀತಿಯ ಯೋಜನೆ ಸಿದ್ಧವಾಗಿದೆ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, "ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ಬರದಿದ್ದರೆ, ಮತ್ತೊಮ್ಮೆ ಆಪರೇಷನ್ ಕಮಲ ನಡೆಸುವ ಸಾಧ್ಯತೆ ಇದೆ. ಆದರೆ, ಹಾಗೆ ಆಗಲ್ಲ. ಬಿಜೆಪಿಗೆ 120 ಸ್ಥಾನ ಬರಲಿದೆ. ಕಾಂಗ್ರೆಸ್ 85 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ," ಎಂದು ಹೇಳಿದ್ದಾರೆ.
"ಆದರೂ, ಕಾಂಗ್ರೆಸ್ನ 20 ಶಾಸಕರು ರಾಜೀನಾಮೆ ನೀಡಲಿದ್ದಾರೆ. ಅವರ ಪಕ್ಷಕ್ಕೆ ಅಧಿಕಾರ ಸಿಗದಿದ್ದರೆ, ಅವರು ತಾನೇ ಏನು ಮಾಡಲು ಸಾಧ್ಯ. ಆ ಪಕ್ಷಕ್ಕೆ ರಾಜೀನಾಮೆ ನೀಡಿ ಅಧಿಕಾರ ಸಿಗುವ ಕಡೆ ಬರುತ್ತಾರೆ," ಎಂದು ವರದಿಯಾಗಿದೆ.
ರಾಜ್ಯದಲ್ಲಿ ಗೋವಾ ಚುನಾವಣೆ ಮರುಕಳಿಸಲಿದೆ
ಕಳೆದ ವರ್ಷ ಗೋವಾದಲ್ಲಿ ಚುನಾವಣೆ ನಡೆದ ರೀತಿಯೇ ಕರ್ನಾಟಕದಲ್ಲೂ ಮರುಕಳಿಸಲಿದೆ. ಆದರೆ, ಯಾರ ನೇತೃತ್ವದಲ್ಲಿ ಇದೆಲ್ಲ ನಡೆಯಲಿದೆ ಎಂದು ಗೊತ್ತಿಲ್ಲ. ಆದರೆ 20 ಶಾಸಕರು ಬಿಜೆಪಿಗೆ ಬರಲಿದ್ದಾರೆ. ನಾನು ಪಕ್ಷೇತರನಾಗಿಯೇ ಉಳಿಯುತ್ತೇನೆ ಎಂದು ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಲಖನ್ ಜಾರಕಿಹೊಳಿ ಮಾತಿಗೆ ಸತೀಶ್ ಜಾರಕಿಹೊಳಿ ವ್ಯಂಗ್ಯ
ಇನ್ನು ಎಂಎಲ್ಸಿ ಲಖನ್ ಜಾರಕಿಹೊಳಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, "20 ಜನ ಶಾಸಕರು ಬಿಜೆಪಿಗೆ ಹೋದರೂ ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಅವರು ಸರ್ಕಾರ ರಚನೆ ಮಾಡುವುದಕ್ಕೆ ಶೇ.35ರಷ್ಟು ಶಾಸಕರು ರಾಜೀನಾಮೆ ಕೂಡಬೇಕಾಗಬೇಕಾಗುತ್ತದೆ. ಆದರೆ ಅಷ್ಟು ಶಾಸಕರನ್ನು ಸೇರಿಸಲು ಅವರಿಂದ ಸಾಧ್ಯವಾಗುವುದಿಲ್ಲ," ಎಂದು ವ್ಯಂಗ್ಯವಾಡಿದ್ದಾರೆ.
"ಬಿಜೆಪಿ ಸದ್ಯಕ್ಕೆ ಆಪರೇಷನ್ ಕಮಲ ಮಾಡುವುದಿಲ್ಲ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯವರೆಗೆ ಶಾಂತವಾಗಿರುತ್ತಾರೆ. ಈ ಅವಧಿಯಲ್ಲಿ ನಾವು ಗಟ್ಟಿಯಾಗಬೇಕು. ಈ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಒಂದು ಮಹತ್ವದ ಸಂದೇಶ ಮತ್ತು ತಿರುವು ನೀಡಲಿದೆ," ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಪಕ್ಷೇತರರ ಮೇಲೂ ಕಣ್ಣಿಟ್ಟ ಬಿಜೆಪಿ
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಈ ಬಾರಿ ಸಂಪೂರ್ಣ ಬಹುಮತ ಒಂದೇ ಪಕ್ಷಕ್ಕೆ ಸಿಗುವುದು ಅನುಮಾನವೆನಿಸಿದೆ. ಹೀಗಾಗಿ ಆಪರೇಷನ್ ಕಮಲ ಮಾಡುವ ಯೋಚನೆಯಲ್ಲಿ ಬಿಜೆಪಿ ಇದೆ. ಒಂದು ವೇಳೆ ಆಪರೇಷನ್ ಕಮಲ ಮಾಡಲೇಬೇಕಾದ ಅನಿವಾರ್ಯತೆ ಉಂಟಾದರೆ, ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವುದಕ್ಕೂ ಮುನ್ನ ಪಕ್ಷೇತರ ಶಾಸಕರಿಗೆ ಗಾಳ ಹಾಕಲಿದೆ.
ಪುಲಕೇಶಿನಗರದ ಅಖಂಡ ಶ್ರೀನಿವಾಸ್ ಮೂರ್ತಿ, ಚನ್ನಗಿರಿಯ ಮಾಡಾಳು ಮಲ್ಲಿಕಾರ್ಜುನ, ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಹಾಗೂ ಗಂಗಾವತಿಯ ಜನಾರ್ದನ ರೆಡ್ಡಿ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಇವರು ಗೆಲ್ಲುವ ಸಾಧ್ಯತೆಯೂ ಹೆಚ್ಚಿದೆ. ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷವೂ ಇವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.












Click it and Unblock the Notifications