ಬಿಜೆಪಿ ಸವಾಲು ಸ್ವೀಕರಿಸಿದ ಕಾಂಗ್ರೆಸ್ಸಿಗೆ ಯಡಿಯೂರಪ್ಪ ತಿರುಗೇಟು
ಭ್ರಷ್ಟಾಚಾರದ ವಿರುದ್ದ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿದ ಕಾಂಗ್ರೆಸ್ಸಿಗೆ ಬಿಜೆಪಿ ಪ್ರತಿ ಸವಾಲು. ಬಹಿರಂಗ ಚರ್ಚೆಗೆ ಬರಲು ನಾಲ್ಕು ದಿನಗಳ ಕಾಲ ಕಾಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ.
ಬೆಂಗಳೂರು, ಸೆ 16: ಭ್ರಷ್ಟಾಚಾರದ ವಿರುದ್ದ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿದ ಕಾಂಗ್ರೆಸ್ಸಿಗೆ ಬಿಜೆಪಿ ಪ್ರತಿ ಸವಾಲು ಹಾಕಿದೆ. ಬಹಿರಂಗ ಚರ್ಚೆಗೆ ಬರಲು ನಾಲ್ಕು ದಿನಗಳ ಕಾಲ ಕಾಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಹನ್ನೊಂದು ಪ್ರಮುಖ ದಾಖಲೆಗಳನ್ನು ಇನ್ನು ನಾಲ್ಕು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಆಮೇಲೆ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ ಬಹಿರಂಗ ಚರ್ಚೆಗೆ ಬರಲಿ ನೋಡೋಣ ಎಂದು ಯಡಿಯೂರಪ್ಪ ಪ್ರತಿ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್ ಕೂಡಾ ಚಾರ್ಜ್ ಶೀಟ್ ರಿಲೀಸ್ ಮಾಡಿ ಅಂತ ಹೇಳಿದ್ದಾರೆ. ಸಾಂಕೇತಿಕವಾಗಿ ಹನ್ನೊಂದು ಜನರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಿದ್ದೇವೆ, ಆ ಮೇಲೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್, ಬಿಜೆಪಿಗೆ ಪ್ರತಿಸ್ಪರ್ಧಿಯೇ ಅಲ್ಲ, ನಾವು ಸ್ವಚ್ಚ ಆಡಳಿತವನ್ನು ನೀಡಿದ್ದೇವೆ. ಯಡಿಯೂರಪ್ಪ ಎಲ್ಲಾ ಹಗರಣಗಳಿಂದ ಮುಕ್ತರಾಗಿದ್ದಾರೆ, ಐದು ವರ್ಷಗಳ ಕಾಲ ಇಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು, ಇವರಿಗೆ ಏನು ಮಾಡಲು ಸಾಧ್ಯವಾಯಿತು.
ನಮ್ಮ ಪಕ್ಷದ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ಸಿಗೆ ಬಹಿರಂಗ ಸವಾಲು ಹಾಕುತ್ತಿದ್ದೇವೆ. ಸಮಯ, ಸ್ಥಳ ಅವರೇ ನಿಗದಿ ಪಡಿಸಲಿ, ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸವಾಲು ಹಾಕಿದ್ದರು.
ಬಿಜೆಪಿ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಕೇಂದ್ರದಲ್ಲಿ ಮೋದಿ ಸರಕಾರ, ರಾಜ್ಯದಲ್ಲಿ ನಮ್ಮ ಸರಕಾರ ಏನು ಮಾಡಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಯಲಿ. ಬಿಜೆಪಿ ಸವಾಲನ್ನು ಸ್ವೀಕರಿಸುತ್ತೇವೆಂದು ವೇಣುಗೋಪಾಲ್ ತಿರುಗೇಟು ನೀಡಿದ್ದರು.
ಈ ಎಲ್ಲಾ ವೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ವೈ, ನಾಲ್ಕು ದಿನ ವೇಣುಗೋಪಾಲ್ ಕಾಯಲಿ. ಆಮೇಲೆ ಚರ್ಚೆಗೆ ಬರುತ್ತಾರೋ ಏನೋ ನೋಡೋಣ ಎಂದು ಪ್ರತಿಸವಾಲು ಹಾಕಿದ್ದಾರೆ.