ಹಲ್ಲೆ ಆರೋಪಿ ಶಾಸಕ ಗಣೇಶ್ ತಲೆಮರೆಸಿಕೊಂಡು ಒಂದು ತಿಂಗಳು
ಬೆಂಗಳೂರು, ಫೆಬ್ರವರಿ 18: ಕಾಂಗ್ರೆಸ್ ಶಾಸಕ ಅಜೆಯ್ ಸಿಂಗ್ ಮೇಲೆ ಹಲ್ಲೆ ಮಾಡಿ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಶಾಸಕ ಗಣೇಶ್ ಅವರ ಬಂಧನ ಇನ್ನೂ ಆಗಿಲ್ಲ. ನಾಳೆಗೆ (ಫೆಬ್ರವರಿ 18) ಅವರು ಹಲ್ಲೆ ನಡೆಸಿ ಒಂದು ತಿಂಗಳಾಗುತ್ತದೆ.
ಜನವರಿ 19ರಂದು ರಾತ್ರಿ ಕಂಪ್ಲಿ ಶಾಸಕ ಗಣೇಶ್ ಮತ್ತು ಶಾಸಕ ಆನಂದ್ ಸಿಂಗ್ ನಡುವೆ ಈಗಲ್ಟನ್ ರೆಸಾರ್ಟ್ನಲ್ಲಿ ಗಲಾಟೆ ಆಗಿ, ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದರು.
ಗಣೇಶ್ ವಿರುದ್ಧ ಮಾರನೇ ದಿನ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಅಂದಿನಿಂದಲೂ ಗಣೇಶ್ ಅವರು ನಾಪತ್ತೆ ಆಗಿದ್ದಾರೆ. ಜನವರಿ 22 ರಂದು ಗಣೇಶ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದರು.
ಆದರೆ ಇಂದು ಸರ್ಕಾರವು ನಿರೀಕ್ಷಣಾ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮನವಿ ಮಾಡಿದ್ದು ಅದರ ವಿಚಾರಣೆಯನ್ನು ಫೆಬ್ರವರಿ 25 ಕ್ಕೆ ಮುಂದೂಡಲಾಗಿದೆ.

ಗೋವಾದಲ್ಲಿದ್ದಾರೆ ಶಾಸಕ ಗಣೇಶ್?
ಹಲ್ಲೆ ನಡೆದು ಒಂದು ತಿಂಗಳಾಗಿದ್ದರೂ ಸಹ ಶಾಸಕರೊಬ್ಬರನ್ನು ಪೊಲೀಸರು ಪತ್ತೆ ಮಾಡಲಾಗದಿರುವುದು ಪೊಲೀಸರ ವೈಫಲ್ಯವನ್ನು ತೋರುತ್ತಿದೆ. ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಗೃಹ ಸಚಿವರು, ಗಣೇಶ್ ಗೋವಾದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಆದಷ್ಟು ಬೇಗ ಅವರನ್ನು ಬಂಧಿಸುತ್ತೇವೆ ಎಂದಿದ್ದರು. ಆದರೆ ಅದಿನ್ನೂ ಸಾಧ್ಯವಾಗಿಲ್ಲ.

ಗಣೇಶ್ ಸದಸ್ಯತ್ವ ರದ್ದು ಮಾಡಿದ ಕೆಪಿಸಿಸಿ
ಮೊದಲಿಗೆ ಆ ರೀತಿಯ ಘಟನೆಯೇ ಆಗಿಲ್ಲವೆಂದಿದ್ದ ಕಾಂಗ್ರೆಸ್ ಮುಖಂಡರು ಆ ನಂತರ ಗಣೇಶ್ ಅವರ ಕೃತ್ಯವನ್ನು ಖಂಡಿಸಿದರು. ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷವು ಸದಸ್ಯತ್ವ ಸ್ಥಾನದಿಂದ ಉಚ್ಛಾಟಿಸಿ, ಪಕ್ಷದ ವತಿಯಿಂದ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಅಜ್ಞಾತ ಸ್ಥಳದಿಂದ ಫೇಸ್ಬುಕ್ನಲ್ಲಿ ಪತ್ರ
ಈ ಎಲ್ಲಾ ಘಟನೆಗಳ ನಡುವೆ ಅಜ್ಞಾತ ಸ್ಥಳದಿಂದ ಗಣೇಶ್ ಅವರು ಫೇಸ್ಬುಕ್ನಲ್ಲಿ ಪತ್ರವೊಂದನ್ನು ಬರೆದು ಪ್ರಕಟಿಸಿದರು. ಅದರಲ್ಲಿ ಎಲ್ಲದಕ್ಕೂ ಆನಂದ್ ಸಿಂಗ್ ಕಾರಣ ಎಂದು ಬರೆದಿದ್ದರು. ತಮಗೆ ಜಾತಿ ನಿಂದನೆ ಮಾಡಿದರು ಎಂದು ಸಹ ಅವರು ಆರೋಪ ಮಾಡಿದ್ದರು.

ಗಣೇಶ್ ವಿರುದ್ಧ ಮಾಡಿರುವ ಆರೋಪ
ಶಾಸಕ ಗಣೇಶ್ ವಿರುದ್ಧ 323 (ಹಲ್ಲೆ), 324 (ದೊಣ್ಣೆಯಿಂದ ಹಲ್ಲೆ), 307 (ಕೊಲೆಯತ್ನ), 504 (ಉದ್ದೇಶ ಪೂರ್ವಕ ಶಾಂತಿ ಕದಡುವುದು), 506 (ಜೀವ ಬೆದರಿಕೆ) ಪ್ರಕರಣಗಳನ್ನು ದಾಖಲಿಸಲಾಗಿದೆ. ಗಣೇಶ್ಗೆ ನಿರೀಕ್ಷಣಾ ಜಾಮೀನು ದೊರಕುವುದು ಸುಲಭವಲ್ಲ ಎನ್ನಲಾಗಿದೆ.












Click it and Unblock the Notifications