ರಾಜ್ಯಸಭೆಗೆ ಅಚ್ಚರಿಯ ಬಿಜೆಪಿ ಅಭ್ಯರ್ಥಿಗಳು: ಈ ರಹಸ್ಯ ಮೊದಲೇ ತಿಳಿದಿದ್ದು ಈ ಇಬ್ಬರಿಗೆ ಮಾತ್ರ
ರಾಜ್ಯಸಭಾ ಚುನಾವಣೆಗೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆ ಮೂಲಕ ಪಕ್ಷ ನಿಷ್ಠ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ಮನ್ನಣೆಯನ್ನು ನೀಡಿದೆ.
ಇದು ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಮಣೆ ನೀಡಿದೆ ಎನ್ನುವುದಕ್ಕಿಂತ, ಪಕ್ಷದಲ್ಲಿನ ಆಂತರಿಕ ಅಸಮಾಧಾನಕ್ಕೂ ಹೈಕಮಾಂಡ್ ಎಚ್ಚರಿಕೆ ನೀಡಿದಂತಾಗಿದೆ ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಇದು 2ನೇ ಬಾರಿ: ರಾಜ್ಯ ಘಟಕದ ಶಿಫಾರಸಿಗೆ ಬೆಲೆಯೇ ಕೊಡದ ಬಿಜೆಪಿ ಹೈಕಮಾಂಡ್
ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕ ಬಿಜೆಪಿ ಘಟಕ ಕಳುಹಿಸುವ ಶಿಫಾರಸ್ಸನ್ನು, ವರಿಷ್ಠರು ಮಾನ್ಯ ಮಾಡುವುದು ಅನುಮಾನ ಎನ್ನುವ ವಿಚಾರ, ಯಡಿಯೂರಪ್ಪ ಆದಿಯಾಗಿ ಎಲ್ಲರಿಗೂ ಗೊತ್ತಿದ್ದ ವಿಚಾರ.
ಆದರೂ, ಕೆಲವರನ್ನು ಸಮಾಧಾನ ಪಡಿಸಲು ಶಿಫಾರಸು ಪಟ್ಟಿಯನ್ನು ಕಳುಹಿಸುವುದು ಅನಿವಾರ್ಯವಾಗಿತ್ತು. ಆದರೆ, ಈರಣ್ಣ ಮತ್ತು ಅಶೋಕ್ ಅಭ್ಯರ್ಥಿಗಳಾಗುತ್ತಾರೆ ಎನ್ನುವ ಗುಟ್ಟು ಗೊತ್ತಿದ್ದದ್ದು ರಾಜ್ಯದ ಇಬ್ಬರು ಮುಖಂಡರಿಗೆ ಮಾತ್ರ ಎಂದು ಹೇಳಲಾಗುತ್ತಿದೆ.
ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಾದ ಕಡಾಡಿ, ಗಸ್ತಿ ನಾಮಪತ್ರ ಸಲ್ಲಿಕೆ
ನಳಿನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ
ನಳಿನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿಯ ಸದಸ್ಯರಿಗೆ, ಬಿಜೆಪಿಯ ಕೇಂದ್ರ ನಾಯಕರು ಬೇರೇನೇ ಹೆಸರನ್ನು ಫೈನಲ್ ಮಾಡಿಯಾಗಿದೆ ಎನ್ನುವ ವಿಚಾರ ಗೊತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಆ ಇಬ್ಬರು ಯಾರು ಎನ್ನುವುದು ಗೊತ್ತಿದ್ದದ್ದು ಇಬ್ಬರು ನಾಯಕರಿಗೆ ಮಾತ್ರ.
ಪ್ರಭಾಕರ ಕೋರೆ, ರಮೇಶ್ ಕತ್ತಿ ಮತ್ತು ಪ್ರಕಾಶ್ ಶೆಟ್ಟಿ
ಒಂದು ಮೂಲಗಳ ಪ್ರಕಾರ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಪ್ರಭಾಕರ ಕೋರೆ, ರಮೇಶ್ ಕತ್ತಿ ಮತ್ತು ಪ್ರಕಾಶ್ ಶೆಟ್ಟಿಯವರನ್ನು ಸಮಾಧಾನ ಪಡಿಸಲು, ಪಟ್ಟಿ ಶಿಫಾರಸು ಮಾಡಿ ಕಳುಹಿಸಬೇಕಾಗಿತ್ತು. ಇಲ್ಲದಿದ್ದರೆ, ಇದು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಭಿನ್ನಮತಕ್ಕೆ ಕಾರಣವಾಗುತ್ತಿತ್ತು.
ಬಿ.ಎಲ್.ಸಂತೋಷ್ ಅವರಿಗೆ ನೀಡಲಾಗಿತ್ತು
ಇಬ್ಬರು ಪಕ್ಷದ ಸಾಮಾನ್ಯ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವುದನ್ನು ಬಿಜೆಪಿಯ ವರಿಷ್ಠರು ಮೊದಲೇ ನಿರ್ಧರಿಸಿದ್ದರು. ಆ ಕೆಲಸವನ್ನು ತಳಮಟ್ಟದಲ್ಲಿ ಹುಡುಕಿ ಅಂತಿಮಗೊಳಿಸುವ ಜವಾಬ್ದಾರಿಯನ್ನು ಬಿ.ಎಲ್.ಸಂತೋಷ್ ಅವರಿಗೆ ನೀಡಲಾಗಿತ್ತು.
ರಹಸ್ಯ ಕಾಪಾಡಿಕೊಂಡು ಬರುವಲ್ಲಿ ಈ ಇಬ್ಬರು ನಾಯಕರು ಯಶಸ್ವಿ
ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಹೆಸರು ಅಂತಿಮವಾಗುವ ವಿಚಾರ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿ.ಎಲ್.ಸಂತೋಷ್ ಅವರಿಗೆ ಬಿಟ್ಟರೆ ಇನ್ಯಾರಿಗೂ ತಿಳಿದಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ರಹಸ್ಯವನ್ನು ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಘೋಷಣೆಯಾಗುವವರೆಗೂ ರಹಸ್ಯ ಕಾಪಾಡಿಕೊಂಡು ಬರುವಲ್ಲಿ ಈ ಇಬ್ಬರು ನಾಯಕರು ಯಶಸ್ವಿಯಾಗಿದ್ದಾರೆ.