ಪೆಟ್ರೋಲ್ ಬಂಕ್ ನಲ್ಲಿ ಹಫ್ತಾ ವಸೂಲಿ ಮಾಡಿದ ಸೀಮಾ ಕೆ. ಅಮಾನತು!
ಬೆಂಗಳೂರು, ಸೆ. 15: ರಾಜಧಾನಿಯ ಪೆಟ್ರೋಲ್ ಬಂಕ್ನಿಂದ ಮಾಮೂಲಿ ವಸೂಲಿ ಕುರಿತು ಒನ್ಇಂಡಿಯಾ ಕನ್ನಡ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಕಾನೂನು ಮಾಪನ ಶಾಸ್ತ್ರ ಮತ್ತು ಇಲಾಖೆ ಅಧಿಕಾರಿ ಸೀಮಾ ಕೆ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಏಜೆಂಟ್ ಶಿವಕುಮಾರ್ ಕಾನೂನು ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಸೀಮಾ ಕೆ. ಅವರು ಜು. 27 ರಂದೇ ಬೆಂಗಳೂರು ಉತ್ತರ ವಿಭಾಗದ ಸಹಾಯಕ ನಿಯಂತ್ರಕಿ ಹುದ್ದೆಯಿಂದ ಬೇರಡೆ ವರ್ಗಾವಣೆಯಾಗಿದ್ದರು. ಹೊಸಕೋಟೆ ವಿಭಾಗಕ್ಕೆ ಹೋಗಲು ಅವಕಾಶವೇ ಇಲ್ಲದಿದ್ದರು ಎರಡು ದಿನದ ಬಳಿಕ ಏಜೆಂಟ್ ಶಿವಕುಮಾರ್ ಜತೆ ತೆರಳಿ, ಬೂದಿಗೆರೆ ಸಮೀಪದ ಮೇಘಲಮ್ಮ ಸರ್ವೀಸ್ ಪೆಟ್ರೋಲ್ ಬಂಕ್ ನಿಂದ ಮಾಮೂಲಿ ವಸೂಲಿ ಮಾಡಿದ್ದರು. ಪೆಟ್ರೋಲ್ ಬಂಕ್ ನಲ್ಲಿ ಸಾರ್ವಜನಿಕರಿಗೆ ಮೋಸ ಮಾಡಲು ಅವಕಾಶ ಕೊಟ್ಟು ಅದಕ್ಕೆ ಪ್ರತಿಯಾಗಿ ಮಾಮೂಲಿ ಪಡೆಯುವ ವಿಡಿಯೋ ಆಧರಿಸಿ ಒನ್ ಇಂಡಿಯಾ ಕನ್ನಡ ಜು. 30 ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೇ ಸೀಮಾ ಕೆ. ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಬಳಿಕ ಸೀಮಾ ಕೆ. ಮಾಗಿ ಮತ್ತು ಏಜೆಂಟ್ ಶಿವಕುಮಾರ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪಿಳ್ಳಯ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಪ್ರಭಾವಕ್ಕೆ ಸಿಕ್ಕಿದ್ದ ಪ್ರಕರಣ:
ಸೀಮಾ ಕೆ. ತನ್ನ ಪ್ರಭಾವ ಬಳಿಸಿ ಅಮಾನತು ಆಗದಂತೆ ನೋಡಿಕೊಂಡಿದ್ದರು. ಘಟನೆ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿಗೆ ದೂರು ನೀಡಿದ ಬೆನ್ನಲ್ಲೇ ಆರೋಪಿತ ಅಧಿಕಾರಿ ಸೀಮಾ ಕೆ. ಅವರನ್ನು ಅಮಾನತು ಮಾಡಲಾಗಿದೆ. ಸೀಮಾ ಕೆ. ಅವರನ್ನು ಸೆ. 4 ರಂದು ಅಮಾನತು ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧೀನ ಕಾರ್ಯದರ್ಶಿ ದೇವಯ್ಯ ಅವರು ಆದೇಶ ಮಾಡಿದ್ದಾರೆ. ಏಜೆಂಟ್ ಶಿವಕುಮಾರ್ ಜತೆಯಲ್ಲಿ ಸೀಮಾ ಅವರು ಪೆಟ್ರೋಲ್ ಬಂಕ್ ಗೆ ಹೋಗಿ ಅಲ್ಲಿ ಮಾತುಕತೆ ನಡೆಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿರುವುದು ದೃಢಪಟ್ಟಿದೆ. ಲಂಚ ಆರೋಪ ಕುರಿತು ಇಲಾಖಾ ವಿಚಾರಣೆಗೆ ಅದೇಶಿಸಿದ್ದು ಅಲ್ಲಿಯ ವರೆಗೂ ಅಮಾನತಿನಲ್ಲಿರುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಏಜೆಂಟ್ ವಿರುದ್ಧ ಎಫ್ಐಆರ್: ಇನ್ನು ಸೀಮಾ ಕೆ. ಅವರು ಏಜೆಂಟ್ ಶಿವಕುಮಾರ್ ಮೂಲಕ ಹಫ್ತಾ ವಸೂಲಿ ಮಾಡುವ ವೇಳೆ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಆನಂದ್ ಕುಮಾರ್ ಸಹ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಏಜೆಂಟ್ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಆನಂದ್ ಕುಮಾರ್ ಅವರ ದೂರು ಆಧರಿಸಿ ವಿಧಾನಸೌಧ ಪೊಲೀಸರು ಏಜೆಂಟ್ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೀಟರ್ ದುರಸ್ತಿಮಾಡುವ ಪರವಾನಗಿ ಪಡೆದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಮಾಮೂಲಿ ಫಿಕ್ಸ್ ಮಾಡಿಸುತ್ತಿದ್ದ ಏಜೆಂಟ್ ಶಿವಕುಮಾರ್ ನಾನೇ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದ. ಇನ್ಸ್ಪೆಕ್ಟರ್ ಆನಂದ್ ಕುಮಾರ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಲಾಖೆಯ ಅನುಮತಿ ಪಡೆದು ಏಜೆಂಟ್ ವಿರುದ್ಧ ದೂರು ನೀಡಿದ್ದಾರೆ. ಬಂಧನದ ಬೀತಿಯಿಂದ ಏಜೆಂಟ್ ಶಿವಕುಮಾರ್ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಅಕ್ರಮ ಕುರಿತು ವಿಶೇಷ ವರದಿ ಪ್ರಕಟಿಸಿದ್ದ ಒನ್ಇಂಡಿಯಾ ಕನ್ನಡ: ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಕದಿಯುವ ದಂಧೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದರು. ಹಫ್ತಾ ವಸೂಲಿ ಮಾಡಿ ಲೀಟರ್ ಇಂಧನಕ್ಕೆ ಕನಿಷ್ಠ 5 ರಿಂದ 10 ಲೀಟರ್ ಕದಿಯುವ ದಂಧೆಯ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಅಳತೆ ಮತ್ತು ಮಾಪನ ಇಲಾಖೆಯ ಮಹಿಳಾ ಅಧಿಕಾರಿ ನಡೆಸಿರುವ ರಹಸ್ಯ ಮಾತುಕತೆ ನಡೆಸುತ್ತಿರುವ ವಿಡಿಯೋ ಒನ್ ಇಂಡಿಯಾ ಕನ್ನಡ ಪ್ರಸಾರ ಮಾಡಿತ್ತು. ವಿಶೇಷ ವರದಿ ಕೂಡ ಪ್ರಕಟಿಸಿತ್ತು.
2019 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ನಡೆಸಿದ್ದ "ಆಪರೇಷನ್ ಅಳತೆ ಮತ್ತು ತೂಕ ಏಜೆಂಟ್" ಕಾರ್ಯಾಚರಣೆಯಲ್ಲಿ 20 ಏಜೆಂಟರು ಬಂಧನಕ್ಕೆ ಒಳಗಾಗಿದ್ದರು. ಆ ಬಂಧಿತ ಗ್ಯಾಂಗ್ನ ಸದಸ್ಯನೇ ಶಿವಕುಮಾರ್. ಇನ್ನೂ ಪ್ರಕರಣದ ತನಿಖೆಯೇ ಮುಗಿದಿಲ್ಲ. ಅದಾಗಲೇ ಅಳತೆ ಮತ್ತು ತೂಕ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಡೀಲ್ ಮಾಡಿ ಸಿಕ್ಕಿಬಿದ್ದಿದ್ದಾನೆ. ತಾನು ಅಳತೆ ಮತ್ತು ತೂಕ ಇಲಾಖೆಯ ಇನ್ಸ್ ಪೆಕ್ಟರ್ ಎಂದು ಫೋಸ್ ಕೊಡುವ ಈತ ಪೆಟ್ರೋಲ್ ಬಂಕ್ ಗಳಲ್ಲಿ ಮಾತುಕತೆ, ಹಫ್ತಾ ವಸೂಲಿ ಮಾಡಿ ಸಿಕ್ಕಿಬಿದ್ದು ಸಂಕಷ್ಟಕ್ಕೆ ಒಳಗಾಗಿದ್ದಾನೆ.
Recommended Video