ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಯೋಗ ವಿರೋಧಿಸುವುದೇಕೆ?
ಬೆಂಗಳೂರು, ಏಪ್ರಿಲ್ 12 : ಒಬ್ಬ ಅಭ್ಯರ್ಥಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಚುನಾವಣಾ ಆಯೋಗ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸುಪ್ರೀಂಕೋರ್ಟ್ಗೆ ಆಯೋಗ ಹೇಳಿಕೆ ನೀಡಿದೆ.
ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ಜಯಗಳಿಸಿದರೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಿದೆ. ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಮತ್ತೆ ಉಪ ಚುನಾವಣೆ ನಡಸಬೇಕು ಇದರಿಂದ ಅನಾವಶ್ಯಕ ಖರ್ಚು ಆಗಲಿದೆ ಎಂಬುದು ಆಯೋಗದ ವಾದ.
ಡಿಬೇಟ್ : ಒಬ್ಬರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸರಿಯೇ?
ಕರ್ನಾಟಕದಲ್ಲಿ ಕೆಲವು ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದ ಬಗ್ಗೆ ಪುನಃ ಚರ್ಚೆಗಳು ಆರಂಭವಾಗಿದೆ. ಆಯೋಗದ ಶಿಫಾರಸಿಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು.
ಕರ್ನಾಟಕದಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಕಣಕ್ಕಿಳಿಯುವುದು ಖಾತ್ರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಹ ಕೊರಟಗೆರೆ, ಬೆಂಗಳೂರಿನ ಪುಲಿಕೇಶಿ ನಗರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಇನ್ನೂ ಖಚಿತವಾಗಿಲ್ಲ.
ಚಾಮುಂಡೇಶ್ವರಿ ಸುರಕ್ಷಿತ ಕ್ಷೇತ್ರವಲ್ಲ ಎಂಬ ವರದಿ ಬಂದ ಬಳಿಕ ಸಿದ್ದರಾಮಯ್ಯ ಅವರು ಬಾದಾಮಿ ಯತ್ತ ಮುಖ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರು ಸಹ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಿದ್ದರಾಮಯ್ಯಗೆ ಒಪ್ಪಿಗೆ ನೀಡಿದ್ದಾರೆ. ಕುರುಬ ಸಮುದಾಯದ ಮತಗಳು ಬಾದಾಮಿಯಲ್ಲಿ ಹೆಚ್ಚಿದ್ದು, ಆದ್ದರಿಂದ, ಅಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ.
ಯಾವಾಗ ಆರಂಭವಾಯಿತು? : ಒಬ್ಬರು ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಪರಿಪಾಠ ಕರ್ನಾಟಕದಲ್ಲಿ ಯಾವಾಗ ಆರಂಭವಾಯಿತು?. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇದನ್ನು ಆರಂಭಿಸಿದರು.
* 1985ರಲ್ಲಿ ಎಚ್.ಡಿ.ದೇವೇಗೌಡರು ಹೊಳೆನರಸೀಪುರ ಮತ್ತು ಸಾತನೂರಿನಿಂದ ಕಣಕ್ಕೆ ಇಳಿದರು. ಎರಡೂ ಕ್ಷೇತ್ರದಲ್ಲಿಯೂ ಅವರು ಜಯಗಳಿಸಿದರು.
* 1989ರಲ್ಲಿ ದೇವೇಗೌಡರು ಪುನಃ ಹೊಳೆನರಸೀಪುರ ಮತ್ತು ಸಾತನೂರಿನಿಂದ ಕಣಕ್ಕೆ ಇಳಿದರು. ಹೊಳೆನರಸೀಪುರದಲ್ಲಿ ಪುಟ್ಟಸ್ವಾಮಿ ಗೌಡ ವಿರುದ್ಧ, ಸಾತನೂರಿನಲ್ಲಿ ಪಿ.ಜಿ.ಆರ್.ಸಿಂಧ್ಯಾ ವಿರುದ್ಧ ಸೋತರು.
* 2004ರಲ್ಲಿ ದೇವೇಗೌಡರು ಕನಕಪುರ ಮತ್ತು ಹಾಸನದಿಂದ ಚುನಾವಣೆಗೆ ಸ್ಪರ್ಧಿಸಿದರು. ಹಾಸನದಲ್ಲಿ ಜಯಗಳಿಸಿದರು. ಆದರೆ, ಕನಕಪುರದಲ್ಲಿ ತೇಜಸ್ವಿನಿ ಗೌಡ ವಿರುದ್ಧ ಸೋತರು.
* 1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರ, ಉತ್ತರ ಪ್ರದೇಶದ ರಾಯ್ ಭರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಎರಡೂ ಕಡೆ ಗೆದ್ದು ಕೊನೆಗೆ ರಾಯ್ ಭರೇಲಿಯನ್ನು ಉಳಿಸಿಕೊಂಡರು.