ಓಮಿಕ್ರಾನ್ ರೂಪಾಂತರಿ ಭೀತಿ: ಶಾಲಾ ಕಾಲೇಜುಗಳಿಗಷ್ಟೇ ನಿರ್ಬಂಧ ಸರಿಯೇ ?
ಬೆಂಗಳೂರು, ನ. 30: ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಆತಂಕ ಮೂಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಶಾಲಾ ಕಾಲಾಜುಗಳಿಗೆ ಸೀಮಿತಗೊಳಿಸಿ ನಿರ್ಬಂಧ ವಿಧಿಸಿರುವ ಸರ್ಕಾರದ ನಿಲುವು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೇವಲ ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸಿ ನಿರ್ಬಂಧ ವಿಧಿಸಿರುವುದು ಅವೈಜ್ಞಾನಿಕ. ಸಾಮಾಜಿಕ ಅಂತರ ಉಲ್ಲಂಘನೆಯಾಗುವ ಸಾರ್ವಜನಿಕ ಎಲ್ಲಾ ಪ್ರದೇಶಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಶಾಲಾ ಶಿಕ್ಷಣ ಸಂಸ್ಥೆಗಳು ಮನವಿ ಮಾಡಿವೆ.
ಈಗಷ್ಟೇ ಶಾಲೆಗಳು ಆರಂಭವಾಗಿವೆ. ಕಳೆದ ಒಂದೂವರೆ ತಿಂಗಳಿನಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಅರಂಭವಾಗಿವೆ. ಮಕ್ಕಳ ಆರೋಗ್ಯ ಕಾಪಾಡುವುದು ಅತಿ ಮುಖ್ಯ ಎಂಬುದು ವಾಸ್ತವ. ಆದರೆ, ಮಕ್ಕಳು ಜೀವನ ಕೇವಲ ಶಾಲೆ- ಕಾಲೇಜುಗಳಿಗೆ ಸೀಮಿತವಾಗಿಲ್ಲ. ಮನೆ ತಲುಪಲು ಬಸ್ ನಿಲ್ದಾಣಗಳಿಗೆ ಹೋಗುತ್ತಾರೆ. ಬಸ್ಗಳಲ್ಲಿ ಸಂಚರಿಸುತ್ತಾರೆ. ಮಾಲ್ , ರೆಸ್ಟೋರೆಂಟ್ ಗಳಿಗೆ ಹೋಗುತ್ತಾರೆ. ಅಲ್ಲಿ ಯಾಕೆ ನಿರ್ಬಂಧ ವಿಧಿಸಿಲ್ಲ. ಮಕ್ಕಳಿಗೆ ಕೊರೊನಾ ಬಂದರೆ ಶಾಲೆಗಳು ಮಾತ್ರ ಹೊಣೆಯೇ? ಮಕ್ಕಳ ಆರೋಗ್ಯ ಕಾಪಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪಾಲಕರ ಜವಾಬ್ಧಾರಿ ಏನು ಎಂಬುದರ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಕಲ್ಪನೆ ಇಲ್ಲ. ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ.
ಕೋವಿಡ್ ಮೂರನೇ ಅಲೆಯ ಅಪಾಯದ ಬಗ್ಗೆ ಸರ್ಕಾರ ವಾಸ್ತವ ನೆಲೆಗಟ್ಟಿನಲ್ಲಿ ಅವಲೋಕನ ಮಾಡಬೇಕಿದೆ. ಶಾಲಾ ಕಾಲೇಜು ಮುಚ್ಚುವುದರಿಂದ ಕೊರೊನಾ ನಿಯಂತ್ರಣ ಸಾಧ್ಯವೇ? ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಕ್ರಮ ಪಾಲಿಸಲು ಕ್ರಮ ಜರುಗಿಸುತ್ತೇವೆ. ಶಾಲೆ ಬಿಟ್ಟ ನಂತರ ಟುಟೋರಿಯಲ್ ಗೆ ಹೋಗುತ್ತಾರೆ. ಒಂದು ಕೋಣೆಯಲ್ಲಿ ನೂರಾರು ಮಂದಿಯನ್ನು ಕೂರಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಇನ್ನು ಮಕ್ಕಳು ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಅಲ್ಲಿ ಯಾವ ಸಾಮಾಜಿಕ ಅಂತರವೂ ಪಾಲನೆಯಾಗುತ್ತಿಲ್ಲ. ಮಾಲ್, ಹೋಟೆಲ್ ಗಳ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಎಲ್ಲಾ ಆಯಾಮಗಳನ್ನು ಇಟ್ಟುಕೊಂಡು ಸರ್ಕಾರ ನಿರ್ಬಂಧಗಳನ್ನು ವಿಧಿಸಬೇಕು. ಆದರೆ, ಶಾಲಾ ಕಾಲೇಜುಗಳನ್ನು ಗುರಿಯಾಗಿಸಿಕೊಂಡು ನಿಯಮ ರೂಪಿಸುವುದರಿಂದ ಕೊರೋನಾ ಅಲೆ ತಡೆಯಲು ಸಾಧ್ಯವೇ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪ್ರಶ್ನೆ ಮಾಡಿದ್ದಾರೆ.

ಪೋಷಕರ ಜವಾಬ್ದಾರಿ ಎಲ್ಲಿ:
ಮಕ್ಕಳ ಸುರಕ್ಷತೆ ವಿಚಾರ ಹೊಣೆ ಕೇವಲ ಶಾಲಾ ಕಾಲೇಜುಗಳಿಗೆ ಹಾಕಿದರೆ ಸಾಲದು. ಮಕ್ಕಳು ಓಡಾಡುವ ಪ್ರದೇಶದಲ್ಲಿ, ಬಸ್ ನಿಲ್ದಾಣಗಳಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೋಷಕರು ಜವಾಬ್ದಾರಿ ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕು. ಬಸ್ಗಳಲ್ಲಿ ಅದಾಗಲೇ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಅಲ್ಲಿ ಕೂಡ ಯಾವ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ನಿಜವಾಗಿಯೂ ವಿದ್ಯಾರ್ಥಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ, ಮಕ್ಕಳ ದಿನಚರಿ ಆಧರಿಸಿ ಸಮುದಾಯದ ಮೇಲು ಕೂಡ ನಿರ್ಬಂಧ ವಿಧಿಸಬೇಕು. ಅದನ್ನು ಬಿಟ್ಟು ಶಾಲಾ ಕಾಲೇಜುಗಳಿಗೆ ಮಾತ್ರ ನಿರ್ಬಂಧ ವಿಧಿಸುವುದರಿಂದ ಕೊರೊನಾ ತಡೆಯಲು ಸಾಧ್ಯವೇ? ಎಲ್ಲಿಯೋ ಕೊರೊನಾ ಸೋಂಕು ತಗಲಿದರೆ ಅದಕ್ಕೂ ಶಾಲೆಗಳನ್ನು ಹೊಣೆ ಮಾಡುವುದು ಎಷ್ಟು ಸರಿ. ಈ ಆಯಾಮದಲ್ಲಿ ಸರ್ಕಾರ ಆಲೋಚನೆ ಮಾಡಬೇಕಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮಂಜುನಾಥ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶಾಲೆಗಳಿಗೆ ನಿರ್ಬಂಧ ಸೀಮಿತ ಸರಿಯೇ?
ವಿಶ್ವದ ಹದಿನೆಂಟು ರಾಷ್ಟ್ರಗಳಲ್ಲಿ ಓಮಿಕ್ರಾನ್ ಕೊರೊನಾ ರೂಪಾಂತರಿ ವೈರಸ್ ಭೀತಿ ಶುರುವಾಗಿದೆ. ಇದರ ಬೆನ್ನಲ್ಲೇ ಹೊರ ದೇಶಗಳಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಕೊರೊನಾ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ತರಲು ಸಮಾಜದ ಮೇಲೆ ನಿರ್ಬಂಧ ವಿಧಿಸಬೇಕಾಗುತ್ತದೆ. ಕೇವಲ ಶಾಲೆಗಳಿಗೆ ನಿರ್ಬಂಧಗಳನ್ನು ಸೀಮಿತಗೊಳಿಸುವ ಸರ್ಕಾರದ ನಿರ್ಧಾರದಿಂದ ನಿಜವಾಗಿಯೂ ಕೊರೊನಾ ನಿಯಂತ್ರಣ ತರಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಶಾಲೆಗಳ ಮೇಲೆ ವಿಧಿಸಿರುವ ನಿರ್ಬಂಧಗಳಂತೆ ಮನೆ, ಮನೆಪಾಠ, ರೆಸ್ಟೋರೆಂಟ್, ಮಾಲ್ ಗಳ ಮೇಲೂ ನಿರ್ಬಂಧ ವಿಧಿಸಬೇಕು. ಆಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕಿದೆ ಎಂಬ ಅಭಿಪ್ರಾಯ ಶಾಲಾ ವಲಯದಿಂದ ಕೇಳಿ ಬರುತ್ತಿದೆ.












Click it and Unblock the Notifications