ಟಿಪ್ಪುನ ನೆನೆದು, ದೇವೇಗೌಡರನ್ನು ಮರೆತ ರಾಷ್ಟ್ರಪತಿಗಳು ಇತರ ಸುದ್ದಿ..
ಒಂದಿಡೀ ದಿನ ಹೇಗೆ ಕಳೆದುಹೋಗುತ್ತದೆ. ದಿಂಬಿಗೆ ತಲೆ ಕೊಟ್ಟ ಮೇಲೆ ಈ ದಿನ ಏನೇನಾಯಿತು ಎಂದು ಸುದ್ದಿ ಮೇಲೆ ಕಣ್ಣಾಡಿಸುವ ತವಕ ತಲೆಯೊಳಗೆ ಸಣ್ಣದೊಂದು ಹುಳ ಬಿಡುತ್ತದೆ. ಹಾಗಂತ ಇಡೀ ಜಗತ್ತಿನ ಸುದ್ದಿ ತಿಳಿದುಕೊಳ್ಳಬೇಕು ಅನ್ನೋ ಅಗಾಧ ಹಸಿವು ಆಗಿರಬೇಕೆಂದೇನಿಲ್ಲ. ಈ ದಿನ ಅಂದರೆ ಬುಧವಾರ (ಅಕ್ಟೋಬರ್ 25) ಏನಾಯಿತು ಅಂತ ಗೊತ್ತಾದರೆ ಆಯಿತು.
ಒಂದೆರಡು ಸಾಲಿನಲ್ಲಿ, ಸುದ್ದಿ ವಿವರವನ್ನು ವೇಗವಾದ ಚಿತ್ರಕಥೆ ಇರುವ ಸಿನಿಮಾದ ಥರ ಎಲ್ಲ ಹೇಳಿ ಮುಗಿಸಬೇಕು ಅನ್ನೋದಾದರೆ ನಮ್ಮ ಆಯ್ಕೆ ಇಲ್ಲಿದೆ. ಓದುಗರೇ ಈ ದಿನ ಹೀಗಾಯಿತು ಎಂದು ವರದಿ ಒಪ್ಪಿಸುವ ಯತ್ನವಿದು.
* ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬಂದಿದ್ದರು. ಅವರ ಭಾಷಣದಲ್ಲಿ ಟಿಪ್ಪುವಿನ ಪ್ರಸ್ತಾವ ಮಾಡಿದರು. ದೇವೇಗೌಡರ ಹೆಸರನ್ನು ಕಣ್ತಪ್ಪಿನಿಂದ ಮರೆತರು. ಆ ನಂತರ ದೇವೇಗೌಡರಿಗೇನೋ ಕರೆ ಮಾಡಿ, ಹೀಗಾಯಿತು ಅಂದರಂತೆ. ಆದರೆ ಟಿಪ್ಪುವಿನ ಪ್ರಸ್ತಾವ ಮಾಡಿದ್ದಕ್ಕೆ ಬಿಜೆಪಿಯವರು ರಾಜ್ಯ ಸರಕಾರದ್ದೇ ಕುಮ್ಮಕ್ಕು ಅಂತ ಆರೋಪಿಸಿದ್ದಾರೆ.
* ಅಂತೂ ಇಂತೂ ಚುನಾವಣೆ ಆಯೋಗ ಗುಜರಾತ್ ನ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 9, 14ರಂದು ಎರಡು ಹಂತದಲ್ಲಿ 182 ಸ್ಥಾನಗಳಿಗೆ ಮತದಾನ ನಡೆಯುತ್ತದೆ.
2ನೇ ಏಕದಿನ ಪಂದ್ಯ: ಕಿವೀಸ್ ವಿರುದ್ಧ ಭಾರತಕ್ಕೆ ಗೆಲುವು
* ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿದ್ದ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದಿದೆ.
* ಮೊಬೈಲ್ ಫೋನ್ ನ ಸಿಮ್ ಹಾಗೂ ಆಧಾರ್ ಗೆ ಜೋಡಣೆ ಮಾಡಬೇಕು ಎಂಬ ನಿಯಮ ಇತ್ತಲ್ಲ, ಇನ್ನು ಮುಂದೆ ಅದು ಆನ್ ಲೈನ್ ನಲ್ಲಿ ಮಾಡುವ ವ್ಯವಸ್ಥೆ ಬರುತ್ತದಂತೆ.
ಆನ್ಲೈನ್ ಮೂಲಕ ಮೊಬೈಲ್ SIM- ಆಧಾರ್ ಜೋಡಿಸಿ
* ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಎರಡು ಲಕ್ಷ ಕೋಟಿ ಬಂಡವಾಳ ಪೂರೈಸುವುದಾಗಿ ಮಂಗಳವಾರ ಅರುಣ್ ಜೇಟ್ಲಿ ಘೋಷಿಸಿದರೂ ಇವತ್ತು ಸರಕಾರಿ ಬ್ಯಾಂಕ್ ಗಳು ಹಾಗೂ ಷೇರು ಮಾರುಕಟ್ಟೆ ಸೂಚ್ಯಂಕ ಭರ್ಜರಿಯಾಗಿ ಮೇಲೇರಿವೆ. ನೀವೇನಾದರೂ ಬ್ಯಾಂಕ್ ಷೇರುಗಳ ಮೇಲೆ ಹಣ ಹೂಡಿದ್ದರೆ ಷೇರಿನ ಬೆಲೆ ಎಷ್ಟಾಯಿತು ಅಂತ ನೋಡಿಕೊಂಡು ಬಿಡಿ.
* ನವೆಂಬರ್ ಎಂಟನೇ ತಾರೀಕಿಗೆ ಅಪನಗದೀಕರಣಕ್ಕೆ ಒಂದು ವರ್ಷ ತುಂಬತ್ತಲ್ಲಾ, ಅಂದು ಕರಾಳ ದಿನ ಆಚರಿಸುತ್ತೇವೆ ಎಂದು ವಿರೋಧ ಪಕ್ಷಗಳು ಗುಟುರು ಹಾಕಿವೆ. ಇದಕ್ಕೆ ತಿರುಗೇಟು ಅನ್ನೋ ಹಾಗೆ ಬಿಜೆಪಿಯಿಂದ ಅಂದು ಕಪ್ಪು ಹಣ ವಿರೋಧಿ ದಿನ ಆಚರಿಸುತ್ತೀವಿ ಎಂದಿದ್ದಾರೆ ಅರುಣ್ ಜೇಟ್ಲಿ.
* ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರ ಅಭಿಷೇಕಕ್ಕೆ ಇನ್ನು ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲು ಬಳಕೆಯಾಗಲಿದೆ. ಇದಕ್ಕಾಗಿ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ಎರಡು ಹಸು ಮತ್ತು ಎರಡು ಕರುಗಳನ್ನು ರಾಘವೇಶ್ವರ ಶ್ರೀಗಳು ಬುಧವಾರ ಟಿಟಿಡಿ ಟ್ರಸ್ಟಿಗೆ ಹಸ್ತಾಂತರಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲು
* ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಇಪ್ಪತ್ತೊಂಬತ್ತನೇ ತಾರೀಕಿನಂದು ದೇವಾಲಯದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಲಿದೆ. ಭದ್ರತೆ ಕಾರಣಕ್ಕೆ ಇದು ಅನಿವಾರ್ಯವೂ ಹೌದು. ಅಂದು ಧರ್ಮಸ್ಥಳಕ್ಕೆ ದರ್ಶನಕ್ಕೆ ತೆರಳುವ ಆಲೋಚನೆ ಇದ್ದರೆ ಸಮಯವನ್ನು ಒಮ್ಮೆ ನೋಡಿಕೊಂಡು ಬಿಡಿ.
* ಇನ್ನು ಇದು ಸುದ್ದಿ ಅಲ್ಲ, ಮಾಹಿತಿ. ಶನಿ ಗ್ರಹ ಅಕ್ಟೋಬರ್ ಇಪ್ಪತ್ತಾರು ಅಂದರೆ ಗುರುವಾರ ಧನು ರಾಶಿಗೆ ಪ್ರವೇಶ ಮಾಡಲಿದೆ. ನಂಬಿಕೆ ಇದ್ದಲ್ಲಿ ಶನೈಶ್ಚರ ದೇಗುಲಕ್ಕೆ ಹೋಗಿ ನಮಸ್ಕರಿಸಿ. ಒಳಿತೋ ಕೆಡುಕೋ ಕತ್ತಿನ ಮೇಲೆ ತಲೆ ನಿಲ್ಲುವಂತೆ ಇರಲಿ ಅಂತ ಪ್ರಾರ್ಥಿಸಬಹುದಲ್ಲಾ, ಅದಕ್ಕೆ. ಆದರೆ ಇದು ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ.
ಅಕ್ಟೋಬರ್ 26ಕ್ಕೆ 12 ರಾಶಿಯವರಿಗೆ ಶನಿ ಶಾಂತಿ, ಪರಿಹಾರ ಮಾರ್ಗ
* ಅಯ್ಯೋ ಇನ್ನೊಂದು ಸುದ್ದಿ ಇದೆ. ಆರೆಸ್ಸೆಸ್, ಬಿಜೆಪಿಯವರು ಹೀಗೆ ನಡೆದುಕೊಳ್ಳುತ್ತಿದ್ದರೆ ನಾನು ಬೌದ್ಧ ಧರ್ಮಕ್ಕೆ ಸೇರಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಬಹುಜನ ಸಮಾಜ ಪಕ್ಷದ ಮುಖಂಡರಾದ ಮಾಯಾವತಿ.