ಕಳಚಿ ಬಿತ್ತು 'ಸೂಪರ್ ಸಿಎಂ' ಟ್ಯಾಗ್; ವಿಜಯೇಂದ್ರ ಸಂತಸ!
ಬೆಂಗಳೂರು, ಜುಲೈ 28; ಕರ್ನಾಟಕದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರಿ ಸ್ವೀಕಾರ ಮಾಡಿದರು. ಬಿ. ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಾಗಿದ್ದು, ಪಕ್ಷಕ್ಕೆ ಅವರ ಕೊಡುಗೆಯನ್ನು ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘಿಸಿದ್ದಾರೆ.
Recommended Video
ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ಕರ್ನಾಟಕದಲ್ಲಿ ಕೇಳಿ ಬರುತ್ತಿದ್ದ ಪದ 'ಸೂಪರ್ ಸಿಎಂ'. ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುವಾಗ ಪದೇ ಪದೇ ಈ ಪದ ಕೇಳಿ ಬರುತ್ತಿತ್ತು.
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಬಿ. ವೈ. ವಿಜಯೇಂದ್ರ, "ಇನ್ನು ಮುಂದೆ ನಾನು ಸೂಪರ್ ಸಿಎಂ ಅಲ್ಲ. ಸಿಎಂ ಬದಲಾಗಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ನಿಂದ ಹೊರಗೆ ಬಂದಿರುವುದಕ್ಕೆ ಸಂತಸವಾಗುತ್ತಿದೆ" ಎಂದರು.
ಪ್ರತಿಪಕ್ಷಗಳ ನಾಯಕರು ಮಾತ್ರವಲ್ಲ ಬಿಜೆಪಿಯ ಕೆಲವು ಶಾಸಕರೇ ಬಿ. ವೈ. ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇಲಾಖೆಗಳಲ್ಲಿ ಅವರು ಹಸ್ತಕ್ಷೇಪ ಮಾಡುತ್ತಾರೆ. ಯಡಿಯೂರಪ್ಪ ಸಿಎಂ ಆದರೆ ವಿಜಯೇಂದ್ರ 'ಸೂಪರ್ ಸಿಎಂ' ಎಂದು ಆರೋಪಿಸುತ್ತಿದ್ದರು.

ಹೈಕಮಾಂಡ್ ತೀರ್ಮಾನ ಮಾಡಲಿದೆ
"ಇನ್ನು ಮುಂದೆ ನಾನು ಪಕ್ಷದಲ್ಲಿ ಅಥವ ಸರ್ಕಾರದಲ್ಲಿ ಕೆಲಸ ಮಾಡಬೇಕೆ? ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೂಪರ್ ಸಿಎಂ ಟ್ಯಾಗ್ನಿಂದ ಹೊರ ಬಂದಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಹೇಳಿದರು.

ಒಳ್ಳೆ ರೀತಿಯಲ್ಲಿ ನಡೆಸಿಕೊಳ್ಳುತ್ತದೆ
ಯಡಿಯೂರಪ್ಪ ರಾಜೀನಾಮೆ ಬಳಿಕ ಸಂಪುಟ ಸಂಪುಟ ವಿಸರ್ಜನೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಂದ 17 ಜನರ ಕಥೆ ಏನು ಎಂಬುದು ಸದ್ಯದ ಪ್ರಶ್ನೆ. "17 ಜನರು ಪಕ್ಷ ಮತ್ತು ಯಡಿಯೂರಪ್ಪ ನಂಬಿಕೊಂಡು ಬಂದವರು. ಎಲ್ಲರನ್ನೂ ಪಕ್ಷ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ" ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಆಯ್ಕೆ ಮಾಡಿದ್ದು ಕೇಂದ್ರದ ನಾಯಕತ್ವ
"ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದು ಕೇಂದ್ರದ ನಾಯಕತ್ವ. ಹಾಗಾಗಿ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಸರ್ವಾನುಮತದಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ" ಎಂದು ವಿಜಯೇಂದ್ರ ಹೇಳಿದರು.

ವಿಜಯೇಂದ್ರ ವಿರುದ್ಧ ಆರೋಪ
ಯಡಿಯೂರಪ್ಪ ಸಂಪುಟದ ಕೆಲವು ಸಚಿವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಪ್ರತಿಪಕ್ಷಗಳ ನಾಯಕರು ವಿಜಯೇಂದ್ರ ಸೂಪರ್ ಸಿಎಂ ಎಂದು ಆರೋಪಿಸುತ್ತಿದ್ದವು. ಹೊಸ ಸಿಎಂ ಆಯ್ಕೆಯ ಬಳಿಕ ಈ ಟ್ಯಾಗ್ ಕಳಚಿ ಬಿದ್ದಿದೆ.












Click it and Unblock the Notifications