ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ : ಯಡಿಯೂರಪ್ಪ
ಬೆಂಗಳೂರು, ಜುಲೈ 29 : "ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ವಿಧಾನ ಪರಿಷತ್ನಲ್ಲಿ ಬಿ. ಎಸ್. ಯಡಿಯೂರಪ್ಪ ಧನ ವಿನಿಯೋಗ ವಿಧೇಯಕ ಮಂಡನೆ ಮಾಡಿದರು. ವಿಧೇಯಕದ ಮೇಲೆ ಮಾತನಾಡಿದ ಅವರು, "ರಾಜ್ಯದ ಅಭಿವೃದ್ಧಿಗೆ ಶ್ರಮಿಸುವೆ. ಅದರಲ್ಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ" ಎಂದರು.
"ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ ಲಕ್ಷ ಕೋಟಿ ರೂ. ಹಣ ನಿಗದಿ ಮಾಡಬೇಕಿದೆ. ಇದಕ್ಕಾಗಿ ನಾಲ್ಕೈದು ದಿನಗಳಲ್ಲಿ ಎಲ್ಲಾ ಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯಲಾಗುವುದು" ಎಂದು ತಿಳಿಸಿದರು.

"ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದೆ. ಇದರಿಂದಾಗಿ ಪ್ರಧಾನಿ ಮನವೊಲಿಸಿ ಅಧಿಕ ಅನುದಾನ ತರಲು ಪ್ರಯತ್ನಿಸಲಾಗುವುದು" ಎಂದು ಯಡಿಯೂರಪ್ಪ ಪರಿಷತ್ತಿನಲ್ಲಿ ಭರವಸೆ ನೀಡಿದರು.
"ಕಾವೇರಿ ನದಿಯ ಜಲಾನಯನ ಯೋಜನೆಗಳಿಗೂ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಮೇಕೆದಾಟು ಯೋಜನೆಗೆ ಸರ್ಕಾರದ ಬೆಂಬಲವಿದೆ. ಅದನ್ನು ಮುಂದುವರಿಸಲಾಗುತ್ತದೆ" ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ನಲ್ಲಿ ಸಭಾನಾಯಕರು ನೇಮಕವಾಗದ ಕಾರಣ ಬಿ. ಎಸ್. ಯಡಿಯೂರಪ್ಪ ಅವರೇ ಧನ ವಿನಿಯೋಗ ವಿಧೇಯಕ ಮಂಡನೆ ಮಾಡಿದರು. ವಿಧೇಯಕ ಅಂಗೀಕಾರವಾದ ಬಳಿಕ ಕಲಾಪವನ್ನು ಮುಂದೂಡಲಾಯಿತು.












Click it and Unblock the Notifications