Breaking: ಕರ್ನಾಟಕದಲ್ಲಿ ಹಿಂಗಾರು ಮಳೆ ಚುರುಕು: 9 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ರಾಜ್ಯದಲ್ಲಿ ಈಗಷ್ಟೇ ಆರಂಭವಾಗಿರುವ ಹಿಂಗಾರು ಮಳೆ ಸುರಿಸುವ ಈಶಾನ್ಯ ಮಾರುತಗಳು ಚುರುಕಾಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂದಿನ ಐದು ದಿನ ಪೈಕಿ ಕೊನೆ ದಿನ ನವೆಂಬರ್ 03ರಂದು ದಕ್ಷಿಣ ಒಳನಾಡು ಭಾಗದಲ್ಲಿ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳ ಹಲವೆಡೆ ಅಂದು ಸಾಧಾರಣದಿಂದ ವ್ಯಾಪಕವಾಗಿ ಮಳೆ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಒಂದು ದಿನ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
Breaking: ಭಾರತದಲ್ಲಿ ಮುಂಗಾರು ಅಂತ್ಯ, ಹಿಂಗಾರು ಮಳೆ ಆರಂಭ, ಇಲ್ಲಿದೆ ಪೂರ್ಣ ಮಾಹಿತಿ
ಇದೇ ವೇಳೆ ಉತ್ತರ ಒಳನಾಡಿನ ಭಾಗದಲ್ಲಿ ಮುಂದಿನ ಮೂರು ದಿನ ಶುಷ್ಕ ವಾತಾವರಣ ಕಂಡು ಬರಲಿದ್ದು, ನಂತರ ಒಂದು ಹಗುರದಿಂದ ಸಾಧಾರಣವಾಗಿ ಕೆಲವು ಕಡೆ ಮಳೆ ಆಗಲಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕವಾಗಿ ಹಿಂಗಾರು ಮಳೆ ಅಬ್ಬರಿಸಲಿದೆ.
ರಾಜ್ಯದ ಮೂರು ಭಾಗದ ಜಿಲ್ಲೆಗಳಲ್ಲಿ ನಿತ್ಯ ಬೆಳಗ್ಗೆ ಮಂಜು ಕವಿದ ವಾತಾವರಣ ಕಂಡು ಬಂದಿದೆ. ಬೆಳಗ್ಗೆ ಹಾಗೂ ರಾತ್ರಿ ಚಳಿಯ ಪ್ರಮಾಣ ತುಸು ಏರಿಕೆ ಆಗಲಿದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ 48ಗಂಟೆ ಸಾಮಾನ್ಯ ಎಂಬಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಸಾಕಷ್ಟು ಕಡೆಗಳಲ್ಲಿ ಹಗುರ ಮಳೆ ಆಗುವ ಲಕ್ಷಣಗಳು ಇವೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 17ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಂಭವವಿದೆ.
ರಾಜ್ಯದ ಗರಿಷ್ಠ- ಕನಿಷ್ಠ ತಾಪಮಾನ ಮಾಹಿತಿ
ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ಹೊನ್ನಾವರದಲ್ಲಿ 35ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಕಾರವಾರದಲ್ಲಿ 34.8 ಡಿಗ್ರಿ ಸೆಲ್ಸಿಯಸ್, ಮಂಗಳೂರಿನಲ್ಲಿ 33.6 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32.4ಡಿಗ್ರಿ ಸೆಲ್ಸಿಯಸ್, ರಾಯಚೂರು ಮತ್ತು ವಿಜಯಪುರದಲ್ಲಿ ತಲಾ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಅತೀ ಕನಿಷ್ಠ ತಾಪಮಾನ ಬೀದರ್ನಲ್ಲಿ 11ಡಿ.ಸೆ. ಹಾಗೂ ಬಾದಾಮಿಯಲ್ಲಿ 13.2ಡಿ.ಸೆ. ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.