ಸಿದ್ದರಾಮಯ್ಯ ವಿರುದ್ದ ಹೂಂಕರಿಸಿದ್ದ ಜಿ ಟಿ ದೇವೇಗೌಡ್ರು ಈಗ ಅತಂತ್ರ
Recommended Video

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇಡೀ ದೇಶದ ಗಮನಸೆಳೆದಿದ್ದ ಕ್ಷೇತ್ರಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವೂ ಒಂದು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಆ ಕ್ಷೇತ್ರದಲ್ಲಿ ಕೊನೆಗೂ ಗೆದ್ದದ್ದು ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ.
ಚುನಾವಣಾ ಪ್ರಚಾರದ ವೇಳೆ ಮನಬಂದಂತೆ ಹೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ ಮತ್ತು ಜಿಟಿಡಿ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಒಂದಾಗಿದ್ದು ಈಗ ಇತಿಹಾಸ. ಆದರೆ, ತಾನೂ ಗೆದ್ದು ಜೊತೆಗೆ ಜೆಡಿಎಸ್ ವರಿಷ್ಠ ದೇವೇಗೌಡ್ರನ್ನೂ ಬೀಗಿಸಿದ್ದ ಜಿ ಟಿ ದೇವೇಗೌಡರ ಸದ್ಯದ ರಾಜಕೀಯ ಪರಿಸ್ಥಿತಿ ಮಾತ್ರ ಅತಂತ್ರ.
ಅದಕ್ಕೆ ಕಾರಣ ಯಾರು? ಸಚಿವ ಸ್ಥಾನ ಸ್ವೀಕರಿಸಿ ಎರಡು ವಾರದ ಮೇಲಾದರೂ ಜಿಟಿಡಿಗೆ ಯಾವುದೇ ಖಾತೆ ಘೋಷಣೆಯಾಗಿಲ್ಲ. ಉನ್ನತ ಶಿಕ್ಷಣ ಖಾತೆ ಒಲ್ಲೆ ಎಂದಿದ್ದ ದೇವೇಗೌಡರಿಗೆ ಸದ್ಯ ಯಾವುದೇ ಖಾತೆಯನ್ನು ಸಿಎಂ ಪ್ರಕಟಿಸಿಲ್ಲ.

ಜೆಡಿಎಸ್ ಮೂಲಗಳ ಪ್ರಕಾರ, ಯಾವುದೇ ಸಚಿವ ಸ್ಥಾನ ಘೋಷಣೆ ಆಗದೇ ಇರುವುದಕ್ಕೆ ಕಾರಣ ಖುದ್ದು ಜಿ ಟಿ ದೇವೇಗೌಡರೇ ಹೊರತು, ಕುಮಾರಸ್ವಾಮಿ ಆಗಲಿ, ದೊಡ್ಡ ಗೌಡರಾಗಲಿ ಅಲ್ಲ. ಯಾವುದೇ ಖಾತೆ ಕೊಟ್ಟರೂ, ಅದಕ್ಕೆ ಇನ್ನೊಂದು ಕಾರಣ ನೀಡಿ ಒಪ್ಪದೇ ಇರುವುದರಿಂದ ಕುಮಾರಸ್ವಾಮಿ ಬೇಸರಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಎಂಟನೇ ಕ್ಲಾಸ್ ಓದಿದದವನಿಗೆ ಉನ್ನತ ಶಿಕ್ಷಣ ಖಾತೆಯ ಸಚಿವನನ್ನಾಗಿ ಮಾಡಿದರೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗುತ್ತದೆ ಎನ್ನುವ ಜಿಟಿಡಿಯವರ ವಾದವನ್ನು ಒಪ್ಪಿಕೊಂಡಿದ್ದ ಕುಮಾರಸ್ವಾಮಿ, ಅವರಿಗೆ ಅಬಕಾರಿ ಖಾತೆ ನೀಡಲು ಮುಂದಾಗಿದ್ದರು.
ಜಿಟಿಡಿ ಅದಕ್ಕೆ ಒಪ್ಪದಿದ್ದಾಗ ಎಪಿಎಂಸಿ ಖಾತೆಯನ್ನು ನೀಡಲು ಸಿಎಂ ಮುಂದಾಗಿದ್ದರು. ಅದಕ್ಕೂ ಅವರು ಕಾರಣ ನೀಡಿ ಆ ಖಾತೆ ವಹಿಸಿಕೊಳ್ಳಲು ಜಿಟಿಡಿ ನಿರಾಕರಿಸುತ್ತಿದ್ದಾರೆ. ಜಿ ಟಿ ದೇವೇಗೌಡರ ಕಣ್ಣು, ಇಂಧನ ಖಾತೆಯ ಮೇಲೆ ಇರುವುದರಿಂದ, ಸದ್ಯ ಕುಮಾರಸ್ವಾಮಿ ಏನೂ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವ ಮಾಹಿತಿಯಿದೆ.
ಒಟ್ಟಿನಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ಸಿದ್ದರಾಮಯ್ಯ ವಿರುದ್ದ ಗೆದ್ದು ದೇಶ ಮಟ್ಟದಲ್ಲಿ ಹೆಸರುಗಳಿಸಿದ್ದ ಜಿ ಟಿ ದೇವೇಗೌಡ್ರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೂ, ಅವರ ಪರಿಸ್ಥಿತಿ ಅತಂತ್ರವಾಗಿದೆ.












Click it and Unblock the Notifications