ಉಡುಪಿ ಜನರು ಕುಡಿಯುವ ನೀರಿನ ಚಿಂತೆ ಬಿಡಿ
ಉಡುಪಿ, ಮೇ 12 : 'ಮೇ ತಿಂಗಳ ಅಂತ್ಯದ ತನಕ ಉಡುಪಿಗೆ ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ. ನೀರಿನ ಸಮಸ್ಯೆ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ' ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.
ಗುರುವಾರ ಉಡುಪಿಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು, 'ಉಡುಪಿಗೆ ನೀರು ಪೂರೈಕೆ ಮಾಡುತ್ತಿರುವ ಬಜೆ ಅಣೆಕಟ್ಟೆಯಲ್ಲಿ 2.25 ಮೀಟರ್ ನೀರಿದ್ದು, ವಾಟರ್ ಬೋಟ್ ಮೂಲಕ ಪಂಪಿಂಗ್ ನಡೆಸಿದರೆ ಮೇ 26 ವರೆಗೆ ಉಡುಪಿಗೆ ಕುಡಿಯುವ ನೀರು' ಪೂರೈಕೆ ಮಾಡಬಹುದು ಎಂದರು. [ಉಡುಪಿಯಲ್ಲೂ ನೀರಿಗೆ ಬರ, ಶ್ರೀ ಕೃಷ್ಣನಿಗೆ ಕೇಳುವುದೇ ಮೊರೆ?]

'ಕಳೆದ ವರ್ಷ ಇದೇ ವೇಳೆ 2-3 ಬಾರಿ ಮಳೆ ಬಂದಿದ್ದ ಕಾರಣ ಅಣೆಕಟ್ಟೆಯಲ್ಲಿ 4.17 ಮೀಟರ್ ನೀರಿತ್ತು. ಆದರೆ, ಈ ಬಾರಿ ಮಳೆ ಕೊರತೆಯ ಕಾರಣ ಪ್ರಸ್ತುತ 2.17 ಮೀಟರ್ ನೀರಿದೆ. ಉಡುಪಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಇದು ಸಾಕಾಗುತ್ತದೆ. ಈ ಸಂದರ್ಭ ಮಳೆಯಾಗದಿದ್ದರೆ ವಾಟರ್ ಬೋಟ್ ಮೂಲಕ ಪಂಪಿಂಗ್ ನಡೆಸಿದರೆ ಮತ್ತೆ ಒಂದು ವಾರಕ್ಕೆ ಬೇಕಾಗುವ ನೀರನ್ನು ಸಂಗ್ರಹಿಸಬಹುದು' ಎಂದು ಹೇಳಿದರು. [ಬೇಸಿಗೆಯಲ್ಲಿ ಕೋಸಳ್ಳಿ ಜಲಪಾತಕ್ಕೆ ಹೋಗಿಬನ್ನಿ]
'ನೀರಿನ ಪೂರೈಕೆ ಬಗ್ಗೆ ಗಮನ ಹರಿಸಲು ನಗರಸಭೆಯ ಸಹಾಯಕ ಇಂಜಿನಿಯರ್ ಗಣೇಶ್ ನೇತೃತ್ವದಲ್ಲಿ 29 ಸಿಬ್ಬಂದಿಗಳ ಕಾರ್ಯಪಡೆ ರಚನೆ ಮಾಡಲಾಗಿದೆ. ನೀರಿನ ಸಮಸ್ಯೆ ಕಂಡು ಬಂದರೆ ಸಾರ್ವಜನಿಕರು ಯಾರನ್ನೂ ಸಂಪರ್ಕಿಸಬೇಕು ಎಂಬುದರ ಬಗ್ಗೆ ನಗರ ಸಭೆಯಿಂದ ಮಾಹಿತಿ ನೀಡಲಾಗುವುದು. ನೀರು ಪೂರೈಕೆಯಲ್ಲಿ ಯಾವುದೇ ಲೋಪಗಳು ಕಂಡುಬಂದಲ್ಲಿ ಪೌರಾಯುಕ್ತರನ್ನು ಜವಾಬ್ದಾರಿಯನ್ನಾಗಿ ಮಾಡಲಾಗುತ್ತದೆ' ಎಂದರು. [ಉಡುಪಿಯಲ್ಲೂ ನೀರಿಗೆ ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ]
'ಮೇ 26 ರವರೆಗೆ ಮಳೆ ಬಾರದಿದ್ದರೆ ನೀರು ಪೂರೈಸಲು ಬೋರ್ವೆಲ್ ಮತ್ತು ಬಾವಿಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿರುವ ನೀರಿನ ಮಟ್ಟ ಅರಿಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದರು.












Click it and Unblock the Notifications