ಪ್ರಮುಖ ಖಾತೆಗೆ ಬೇಡಿಕೆ ಇಟ್ಟ ಸತೀಶ್ ಜಾರಕಿಹೊಳಿ?
ಬೆಂಗಳೂರು, ಜ.29 : ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸತೀಶ್ ಜಾರಕಿಹೊಳಿ ಅವರು ಪ್ರಮುಖ ಖಾತೆಯೊಂದನ್ನು ನೀಡುವಂತೆ ಷರತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರನ್ನು ಜಾರಕಿಹೊಳಿ ಭೇಟಿಯಾಗುವ ಸಾಧ್ಯತೆ ಇದೆ.
ಸತೀಶ್ ಜಾರಕಿಹೊಳಿ ಅವರ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ. ಗುರುವಾರ ಸಂಜೆ ವೇಳೆಗೆ ಈ ಬಿಕ್ಕಟ್ಟು ಸುಖಾಂತ್ಯವಾಗುವ ನಿರೀಕ್ಷೆ ಇದೆ. [ರಾಜೀನಾಮೆ : ಬುಧವಾರದ ಬೆಳವಣಿಗೆಗಳು]

ಪ್ರಮುಖ ಖಾತೆ : ಸದ್ಯದ ಮಾಹಿತಿಯಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸತೀಶ್ ಜಾರಕಿಹೊಳಿ ಎರಡು ಷರತ್ತುಗಳನ್ನು ಹಾಕಿದ್ದಾರೆ. ತಕ್ಷಣ ಅಬಕಾರಿ ಖಾತೆಯನ್ನು ಬದಲಾವಣೆ ಮಾಡಿ ಬೇರೆ ಖಾತೆ ನೀಡಬೇಕು. ಸಂಪುಟ ವಿಸ್ತರಣೆ ವೇಳೆ ಪ್ರಬಲ ಖಾತೆಯನ್ನು ತಮಗೆ ನೀಡಬೇಕು ಎಂಬುದು ಅವರ ಷರತ್ತು. [ಜಾರಕಿಹೊಳಿ ರಾಜೀನಾಮೆ : ಯಾರು, ಏನು ಹೇಳಿದರು?]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಷರತ್ತಿಗೆ ಒಪ್ಪಿಗೆ ನೀಡಿದರೆ ಅವರನ್ನು ಗುರುವಾರ ಸಂಜೆ ಸತೀಶ್ ಜಾರಕಿಹೊಳಿ ಭೇಟಿಯಾಗಲಿದ್ದಾರೆ. ಇಲ್ಲವಾದಲ್ಲಿ ಬೆಂಬಲಿಗರನ್ನು ಬೆಂಗಳೂರಿಗೆ ಕಳುಹಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಸಂಜೆಯ ವೇಳೆಗೆ ರಾಜೀನಾಮೆ ಪ್ರಕರಣ ಅಂತ್ಯಗೊಳ್ಳುವ ಸಾಧ್ಯತೆ ಇದೆ.
'ರಾಜೀನಾಮೆ ವಾಪಸ್ ಪಡೆಯಲು ಎಲ್ಲೆಡೆಯಿಂದ ಒತ್ತಡ ಬರುತ್ತಿದೆ. ಆದರೆ, ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಪಿಸಿಸಿ ಅಧ್ಯಕ್ಷಗಿರಿಗಾಗಿ ನಾನು ಬೇಡಿಕೆ ಇಟ್ಟಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಸತೀಶ್ ಜಾರಕಿಹೊಳಿ ಅವರು ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದರು. ಆದರೆ, ಇಲ್ಲಿಯವರೆಗೂ ರಾಜೀನಾಮೆ ಅಂಗೀಕಾರಗೊಂಡಿಲ್ಲ. ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications