ಚೀನಾದಿಂದ ರಾಜ್ಯಕ್ಕೆ ಬಂದವರಲ್ಲಿ ಕೊರೊನಾ ವೈರಸ್ ಇಲ್ಲ
ಬೆಂಗಳೂರು, ಫೆಬ್ರವರಿ 3: ಚೀನಾದಿಂದ ಕರ್ನಾಟಕಕ್ಕೆ ಬಂದವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಚೀನಾ ಪ್ರವಾಸ ಮುಗಿಸಿ ರಾಜ್ಯಕ್ಕೆ ಬಂದಿರುವ ಎಂಟು ಮಂದಿಯ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಯಾರಿಗೂ ಕೊರೊನಾ ವೈರಸ್ ಸೋಂಕು ಇಲ್ಲವೆಂದು ದೃಢಪಟ್ಟಿದೆ.
ಕೊರೊನಾ ವೈರಸ್: ಚೀನಾದಲ್ಲಿ 361ಕ್ಕೆ ಏರಿದ ಸಾವಿನ ಸಂಖ್ಯೆ
ಇದುವರೆಗೆ 13 ಮಂದಿಗೆ ಸೋಂಕು ಇದೆ ಎಂಬ ಅನುಮಾನವಿತ್ತು. ಕೆಲ ದಿನಗಳ ಹಿಂದೆ ನಾಲ್ವರ ರಕ್ತ ಪರೀಕ್ಷೆಯ ಮಾದರಿ ಬಂದಿದ್ದು, ಯಾರಿಗೂ ಸೋಂಕು ಇಲ್ಲವೆಂದು ದೃಢಪಟ್ಟಿತ್ತು. ಶುಕ್ರವಾರ 8 ಮಂದಿಯ ವರದಿ ಬಂದಿದ್ದು, ನೆಗೆಟೀವ್ ಎಂದು ತಿಳಿಸಲಾಗಿದೆ.
ಇದೂ ಸೇರಿದಂತೆ ಒಟ್ಟು 20 ಮಂದಿಗೆ ಸೋಂಕು ಇಲ್ಲವೆಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಬೆಂಗಳೂರಿನ ರಾಜೀವ್ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಐಸೋಲೇಷನ್ ವಿಭಾಗ ತೆರೆದು ಸೋಂಕು ಶಂಕಿತರನ್ನು ದಾಖಲಿಸಿ ನಿಗಾ ಇರಿಸಲಾಗುತ್ತಿದೆ.
ಶನಿವಾರ ಇನ್ನೂ 8 ಮಂದಿಯ ವರದಿ ಬಂದಿದ್ದು, ನೆಗೆಟಿವ್ ಎಂದು ತಿಳಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ರಕ್ತದ ಮಾದರಿಯನ್ನು ಪುಣೆಯ ಎನ್ಐವಿ ಸಂಸ್ಥೆಗೆ ಕಳುಹಿಸಿ ವರದಿ ಪಡೆಯಲಾಗುತ್ತಿದೆ.
ಇದುವರೆಗೆ ರಾಜ್ಯದಲ್ಲಿ 29 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರ ದೇಹದಲ್ಲಿ ಕೊರೊನಾ ವೈರಸ್ ಇಲ್ಲ ಎನ್ನುವುದು ದೃಢಪಟ್ಟಿದೆ. ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ 4,733 ಮಂದಿಯನ್ನು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದೆ. ಚೀನಾ ಪ್ರವಾಸದಿಂದ ಹಿಂದಿರುಗಿದ 37 ಮಂದಿ ನಾನಾ ಭಾಗಗಳಲ್ಲಿ ನೆಲೆಸಿದ್ದಾರೆ.