ಆರ್.ಆರ್ ನಗರ, ಮಸ್ಕಿ ಕ್ಷೇತ್ರದಲ್ಲಿ ಉಪಚುನಾವಣೆ ಇಲ್ಲ: ಕಾರಣವೇನು?
ಬೆಂಗಳೂರು, ಸೆಪ್ಟೆಂಬರ್ 21: ಕೇಂದ್ರ ಚುನಾವಣೆ ಆಯೋಗವು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ನಿಗದಿ ಮಾಡಿ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಒಟ್ಟು ಹದಿನೇಳು ಶಾಸಕರು ಅನರ್ಹರಾಗಿದ್ದರು, ಹದಿನೇಳು ಕ್ಷೇತ್ರಗಳಲ್ಲಿಯೂ ಉಪಚುನಾವಣೆ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಹದಿನೈದು ಕ್ಷೇತ್ರಗಳಿಗೆ ಮಾತ್ರವೇ ಉಪಚುನಾವಣೆ ಘೋಷಣೆ ಆಗಿದ್ದು, ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲಾಗುತ್ತಿಲ್ಲ.
ನ್ಯಾಯಾಲಯ ತಡೆ ಆಜ್ಞೆ ನೀಡಿರುವ ಕಾರಣ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭೆ ಚುನಾವಣೆ ಕ್ಷೇತ್ರಗಳಲ್ಲಿ ಚುನಾವಣೆ ಘೋಶಿಸಲಾಗಿಲ್ಲ.
ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರತಾಪ್ ಗೌಡ ಪಾಟೀಲ್ ಅವರು ಕೇವಲ 213 ಮತಗಳ ಅಂತರದಿಂದ ಅಷ್ಟೆ ಗೆದ್ದಿದ್ದರು. ಬಿಜೆಪಿಯ ಪರಾಜಿತ ಅಭ್ಯರ್ಥಿ ಆರ್.ಬಸವರಾಜು ಅವರು ನ್ಯಾಯಾಲಯದ ಮೆಟ್ಟಿಲೇರಿ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ಮಸ್ಕಿಯಲ್ಲಿ ಚುನಾವಣೆ ಘೋಷಿಸಿಲ್ಲ.

ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿತ್ತು
ಇನ್ನು ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಕಾಂಗ್ರೆಸ್ನ ಮುನಿರತ್ನ ಅವರು ಗೆದ್ದಿದ್ದರು. ಆದರೆ ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿ ನಕಲಿ ಮತದಾರರ ಪಟ್ಟಿ ಸಿಕ್ಕಿತ್ತು, ಈ ಬಗ್ಗೆ ಮುನಿರತ್ನ ವಿರುದ್ಧ ದೂರು ದಾಖಲಾಗಿತ್ತು. ಇತ್ತೀಚೆಗೆ ಮುನಿರತ್ನ ಹೆಸರು ಚಾರ್ಜ್ಶೀಟ್ನಿಂದ ಕೈಬಿಡಲಾಗಿತ್ತು. ಆದರೆ ಬಿಜೆಪಿಯ ತುಳಸಿ ಮುನಿರಾಜು ಗೌಡ ಮನವಿಯಂತೆ ಮುನಿರತ್ನ ವಿರುದ್ಧ ತನಿಖೆ ಜಾರಿಯಲ್ಲಿದೆ. ನಕಲಿ ಮತದಾರರ ಪಟ್ಟಿ ದೊರೆತ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ನ್ಯಾಯಾಲಯ ತಡೆ ನೀಡಿದೆ.

RR ನಗರದಿಂದ ಮುನಿರತ್ನ, ಮಸ್ಕಿಯಿಂದ ಪ್ರತಾಪ್ ಗೌಡ
ಆರ್.ಆರ್. ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಸ್ತುತ ಅನರ್ಹರಾಗಿದ್ದಾರೆ. ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಸಹ ಪ್ರಸ್ತುತ ಅನರ್ಹರಾಗಿದ್ದಾರೆ.

RR.ನಗರ ಮತ್ತು ಮಸ್ಕಿ ಕ್ಷೇತ್ರದ ಚುನಾವಣೆ ಘೋಷಣೆ ಆಗಿಲ್ಲ
ಆರ್.ಆರ್.ನಗರ ಮತ್ತು ಮಸ್ಕಿ ಕ್ಷೇತ್ರದಲ್ಲಿ ಚುನಾವಣೆ ಘೋಷಣೆ ಆಗದ ಹಿನ್ನೆಲೆಯಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿ ಈಗ ಅನರ್ಹವಾಗಿರುವ ಮುನಿರತ್ನ ಮತ್ತು ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಅವರಿಗೆ ನಿರಾಳವಾಗಿದೆ. ಇವರುಗಳ ಅನರ್ಹತೆ ಪ್ರಕರಣ ಸುಪ್ರೀಂ ನಲ್ಲಿದ್ದು, ಈಗ ಚುನಾವಣೆ ಘೋಷಣೆ ಆಗದ ಕಾರಣ ಈ ಇಬ್ಬರಿಗೆ ಇನ್ನಷ್ಟು ಕಾಲಾವಕಾಶ ದೊರೆತಂತಾಗಿದೆ.

ಹದಿನೈದು ಅನರ್ಹ ಶಾಸಕರ ಭವಿಷ್ಯ ಅತಂತ್ರ
ಆದರೆ ಉಳಿದ ಹದಿನೈದು ಕ್ಷೇತ್ರದಲ್ಲಿ ಉಪಚುನಾವಣೆ ಘೊಷಣೆ ಆಗಿದ್ದು, ಆಯಾ ಕ್ಷೇತ್ರದಿಂದ ಆಯ್ಕೆ ಆಗಿ ಅನರ್ಹತೆ ಎದುರಿಸುತ್ತಿರುವ ಶಾಸಕರನ್ನು ಭಾರಿ ಆಘಾತಕ್ಕೆ ಈಡು ಮಾಡಿದೆ. ಪ್ರಕರಣ ವಿಚಾರಣೆಗೆ ಬರುವ ಮುನ್ನವೇ ಚುನಾವಣೆ ಘೋಷಣೆ ಆಗಿರುವುದು ಅವರುಗಳ ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ.












Click it and Unblock the Notifications