ಗುಂಡ್ಲುಪೇಟೆಗೆ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್!
ಚಾಮರಾಜನಗರ, ಮಾರ್ಚ್ 03: ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮತ್ತು ಮಾಜಿ ಸಚಿವ ವಿ.ಸೋಮಣ್ಣ ಅವರ ನಡುವೆ ಶೀತಲ ಸಮರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಇದರ ಲಾಭ ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನಿರಂಜನಕುಮಾರ್ ಅವರಿಗಾಗಿದೆ. ಅವರ ಕ್ಷೇತ್ರದಿಂದ ವಿ.ಸೋಮಣ್ಣ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು.
ಈ ನಡುವೆ ಸಿ.ಎಸ್. ನಿರಂಜನಕುಮಾರ್ ಮತ್ತು ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿದ್ದು, ಅವರು ನೀಡಿದ ಭರವಸೆಯಂತೆ ನಿರಂಜನ್ ಕುಮಾರ್ ಅವರೇ ಗುಂಡ್ಲುಪೇಟೆ ಕ್ಷೇತ್ರದ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಂತಾಗಿದೆ.

ಮೂಲಗಳ ಪ್ರಕಾರ ನಿರಂಜನ್ ಕುಮಾರ್ ಅವರು ತಮ್ಮ ಬೆಂಬಲಿಗರ ಜತೆ ಬೆಂಗಳೂರಿಗೆ ದೌಡಾಯಿಸಿ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಟಿಕೆಟ್ ತಮಗೆ ನೀಡಬೇಕು. ಕಳೆದ ಮೂರು ಸಲ ನೇರಸ್ಪರ್ಧೆ ಹಾಗೂ ಕಳೆದ ಬಾರಿ ಇಡೀ ಸರ್ಕಾರವೇ ನಿಂತು ಕಾಂಗ್ರೆಸ್ ಅಭ್ಯರ್ಥಿಯ ಪರ ಶ್ರಮಿಸಿದ್ದರಿಂದ ಪರಾಜಯವಾಗಿದೆ.
ಈ ಸಲ ಕ್ಷೇತ್ರದಲ್ಲಿ ಬಿಜೆಪಿ ಬಗ್ಗೆ ಒಲವು ಹಾಗೂ ಮೂರು ಬಾರಿ ಸೋಲಿನಿಂದ ಉಂಟಾದ ಅನುಕಂಪದ ಅಲೆಯಿದ್ದು 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ಭರವಸೆ ಇದೆ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದ್ದು, ಇದರಿಂದ ಅವರಿಗೆ ಟಿಕೆಟ್ ನೀಡಲು ಕೂಡ ರಾಜ್ಯ ನಾಯಕರು ಒಪ್ಪಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ನಿರಂಜನ್ ಕುಮಾರ್ ವಿರೋಧಿಯಾಗಿರುವ ಪಕ್ಷದ ಕೆಲವರು ವಿ.ಸೋಮಣ್ಣ ಅವರನ್ನು ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದೇ ಗೊಂದಲಗಳಿಗೆ ಕಾರಣವಾಗಿದೆ. ಈ ನಡುವೆ ಕೊಳ್ಳೇಗಾಲದ ಕೆಲವು ಬಿಜೆಪಿ ಮುಖಂಡರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ಆದರೆ ಸೋಮಣ್ಣ ಅವರು ಮಾತ್ರ ಮತ್ತೆ ಚಾಮರಾಜನಗರದತ್ತ ಮುಖ ಮಾಡುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಸತತ ಸೋಲು ಕಂಡಿರುವ ನಿರಂಜನ್ ಕುಮಾರ್ ಕಾಂಗ್ರೆಸ್ನ ಅಭ್ಯರ್ಥಿ ಸಚಿವೆ ಗೀತಾಮಹದೇವಪ್ರಸಾದ್ ವಿರುದ್ಧ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ತೀವ್ರಗೊಳ್ಳುವುದಂತು ಖಚಿತವಾಗಿದೆ.












Click it and Unblock the Notifications