ನಿಖಿಲ್ ವಿವಾಹಕ್ಕೆ ಬಂದ ವಾಹನಗಳ ಲೆಕ್ಕ ಏಕೆ ಕೊಡುತ್ತಿಲ್ಲ?
ಬೆಂಗಳೂರು, ಮೇ 13 : ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ಆಗಮಿಸಲು ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು? ಎಂಬ ಮಾಹಿತಿಯನ್ನು ಸರ್ಕಾರ ಏಕೆ ಕೊಡುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಮುಖ್ಯ ನ್ಯಾಯೂರ್ತಿ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಎಷ್ಟು ವಾಹನಗಳಿಗೆ ಪಾಸು ನೀಡಲಾಗಿತ್ತು? ಎಂಬ ಮಾಹಿತಿ ಇಲ್ಲವಾದಲ್ಲಿ ಈ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ ಎಂದು ಮೌಖಿಕವಾಗಿ ಸೂಚಿಸಿತು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹದ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ವಿವರಗಳನ್ನು ಒದಗಿಸಿತು. ರಾಮನಗರ ಜಿಲ್ಲಾಧಿಕಾರಿಗಳು ವಾಹನಗಳಿಗೆ ಪಾಸುಗಳನ್ನು ನೀಡಿದ್ದರು. ಕೇಂದ್ರ ಗೃಹ ಸಚಿವಾಲಯ ನೀಡಿದ ಮಾರ್ಗಸೂಚಿ ಪಾಲಿಸಲಾಗಿದೆ ಎಂದು ಹೇಳಿತು.

ವಿವಾಹದ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗಿದೆ. ರಾಮನಗರ ಜಿಲ್ಲಾಧಿಕಾರಿಗಳು ಮಾರ್ಗಸೂಚಿಗಳ ಅನ್ವಯ ಪಾಸುಗಳನ್ನು ವಿತರಣೆ ಮಾಡಿದ್ದಾರೆ ಎಂದು ಸರ್ಕಾರ ನ್ಯಾಯಾಲಯಕ್ಕೆ ವಿವರಣೆ ನೀಡಿತು.
ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹ ಏಪ್ರಿಲ್ 17ರಂದು ರಾಮನಗರ ಜಿಲ್ಲೆಯ ಕೇತನಾಗಹಳ್ಳಿಯಲ್ಲಿರುವ ಫಾರ್ಮ್ ಹೌಸ್ನಲ್ಲಿ ನಡೆದಿತ್ತು.
ವಿವಾಹ ಸಮಾರಂಭಕ್ಕೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಲವಾರು ಜನರು ಬಂದಿದ್ದರು. ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ವಿವಾಹ ನಡೆದಿದ್ದು, ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ ಎಂಬ ಆರೋಪವಿದೆ.












Click it and Unblock the Notifications