Channapatna By-Election Results: ಚನ್ನಪಟ್ಟಣದಲ್ಲಿ ಹೀನಾಯ ಸೋಲು: ನಿಖಿಲ್ ಹೇಳಿದ್ದೇನು..?
ಬಿಡದಿ, ನವೆಂಬರ್ 23: 2024ರ ಕರ್ನಾಟಕ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಈಗಾಗಲೇ ಫಲಿತಾಂಶ ಬಹಿರಂಗಗೊಂಡಿದ್ದು, ನಿಖಿಲ್ ಕುಮಾರಸ್ವಾಮಿ ತಮ್ಮ ಪರವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.
ಬಿಡದಿ ತೋಟದ ಮನೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೂರು ಉಪ ಚುನಾವಣೆಗಳು ಅತ್ಯಂತ ಮಹತ್ವ ಪಡೆದುಕೊಂಡಿದ್ದವು. ಅದರಲ್ಲೂ ಬಹುನಿರೀಕ್ಷಿತ ಚುನಾವಣೆ ಚನ್ನಪಟ್ಟಣದಲ್ಲಿ ನಡೆದಿತ್ತು. ಈ ಒಂದು ಉಪ ಚುನಾವಣೆಯಲ್ಲಿ ಕೊನೆ ಹಂತದ ತೀರ್ಮಾನಕ್ಕೆ ತಲೆ ಬಾಗಿ ನಿಲ್ಲಬೇಕಾಯಿತು. ಯುವಕನಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು. ಇವತ್ತಿನ ಫಲಿತಾಂಶ ನಮ್ಮ ಹಾಗೂ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಎಲ್ಲರಿಗೂ ಒಂದು ಆಘಾತ ತಂದಿದೆ ಎಂದು ಹೇಳಿದರು.

ಕೊನೆಯ ಹಂತದ ಬೆಳವಣಿಗೆಯಲ್ಲಿ ಹದಿನೆಂಟು ದಿನಗಳ ನಮ್ಮ ಚುನಾವಣಾ ಪ್ರಚಾರದಲ್ಲಿ ಪ್ರತಿ ಹಳ್ಳಿಗಳಲ್ಲೂ ಜನರು ಬಹಳ ಪ್ರೀತಿ ವಾತ್ಸಲ್ಯ ತೋರಿಸಿದ್ದಾರೆ. 86 ಸಾವಿರಕ್ಕಿಂತಲೂ ಹೆಚ್ಚು ಮತಗಳು ನನಗೆ ಕೊಟ್ಟಿದ್ದಾರೆ. ಚುನಾವಣೆಗಳಲ್ಲಿ ತೀರ್ಪು ತೆಗೆದುಕೊಳ್ಳುವ ಶಕ್ತಿ ಜನರಿಗೆ ಮಾತ್ರ ಇರುವುದು. ಅಂತಿಮವಾಗಿ ಜನರು ತೀರ್ಮಾನ ಮಾಡಿದ್ದಾರೆ. ಅದಕ್ಕೆ ನಾನು ತಲೆ ಬಾಗುತ್ತೇನೆ. ಹಾಗೂ ನನ್ನ ಪರವಾಗಿ ಪ್ರಚಾರ ನಡೆಸಿದ ಕಾರ್ಯಕರ್ತರಿಗೂ ಹಾಗೂ ಬೆಂಬಲ ನೀಡಿದ ಮಾಧ್ಯಮಗಳಿಗೂ ಧನ್ಯವಾದ ತಿಳಿಸುತ್ತೇನೆ ಎಂದು ನಿಖಿಲ್ ಹೇಳಿದ್ದಾರೆ.
ಈ ಚುನಾವಣೆ ಬಯಸದೇ ಬಂದಂತಹ ಅವಕಾಶ. ಕೊನೆಯ ಹಂತದ ತೀರ್ಮಾನಕ್ಕೆ ನಾನು ತಲೆ ಬಾಗಿದೆ. ಇಡೀ ರಾಮನಗರದಲ್ಲೇ ದೇವೇಗೌಡರು ಮತ್ತೆ ಕುಮಾರಸ್ವಾಮಿಯನ್ನು ಅತಿ ದೊಡ್ಡದಾಗಿ ಬೆಳೆಸಿದ್ದಾರೆ. ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ದೊರಕಿರುವುದು ರಾಜ್ಯದ ಜನರಿಂದ. ಈ ಚುನಾವಣೆ ಬಳಿಕ ನಾನು ಕೊಟ್ಟ ಮಾತನ್ನು ಹಿಂದೆ ತಗೊಳ್ಳುವುದಿಲ್ಲ. ಯುವಕರಿಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತೇನೆ. ನಾವು ಇಲ್ಲಿ ಜನಿಸದೇ ಇರಬಹುದು, ಆದರೆ ಜಿಲ್ಲೆ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಕುಮಾರಸ್ವಾಮಿ ಜೊತೆಗೂಡಿ ನಾನು ಮುಂದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನಿಖಿಲ್ಗೆ ಹ್ಯಾಟ್ರಿಕ್ ಸೋಲು
ಇನ್ನು ಈ ಹಿಂದೆ ಸತತ ಎರಡು ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದ ನಿಖಿಲ್ ಈ ಬಾರಿಯೂ ಸೋಲುಕಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಬಳಿಕ ಮತ್ತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎ ಇಕ್ಬಾಲ್ ಹುಸೇನ್ ವಿರುದ್ಧ ಕೂಡ ಸೋತಿದ್ದರು. ಇದೀಗ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ನಿಖಿಲ್ ಸತತ ಮೂರನೇ ಬಾರಿ ಸೋಲು ಅನುಭವಿಸಿದ್ದಾರೆ.












Click it and Unblock the Notifications