ಎತ್ತಿನಹೊಳೆ ಯೋಜನೆಗಿದ್ದ ಕಾನೂನು ತೊಡಕು ನಿವಾರಣೆ
ಬೆಂಗಳೂರು, ಮೇ 26 : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ. ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಜಾಗೊಳಿಸಿದೆ.
ಶುಕ್ರವಾರ ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಅದರ್ಶ ಕುಮಾರ್ ಗೋಯೆಲ್ ಅವರನ್ನು ಒಳಗೊಂಡ ಪೀಠ ಯೋಜನೆಗೆ ಇದ್ದ ತೊಡಕನ್ನು ನಿವಾರಿಸಿ, ಅರ್ಜಿಗಳನ್ನು ವಜಾಗೊಳಿಸಿದೆ. ಎನ್ಜಿಟಿ ನೀಡಿರುವ ಆದೇಶದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಮುಂದಾಗಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆ ನೀಡಿರುವ ಒಪ್ಪಿಗೆಯನ್ನು ಪ್ರಶ್ನಿಸಿ ಬೆಂಗಳೂರಿನ ಕೆ.ಎನ್.ಸೋಮಶೇಖರ್ ಮತ್ತು ಹಾಸನದ ಎಚ್.ಎ.ಕಿಶೋರ್ ಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ಎನ್ಜಿಟಿ ವಜಾಗೊಳಿಸಿದೆ.
'ಯೋಜನೆಯಲ್ಲಿ ದೊರೆಯುವ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸುವುದಿಲ್ಲ. ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುತ್ತೇವೆ ಎಂದು ಕರ್ನಾಟಕ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿದೆ. ಈ ಯೋಜನೆ ಪರಿಸರ ಪರಿಣಾಂ ಅಧ್ಯಯನ ಅಧಿಸೂಚನೆ 2006ಕ್ಕೆ ಒಳಪಡುವುದಿಲ್ಲ. ಆದ್ದರಿಂದ, ಪರಿಸರ ಇಲಾಖೆ ಅನುಮೋದನೆ ಅಗತ್ಯವಿಲ್ಲವೆಂದು' ನ್ಯಾಯಪೀಠ ಹೇಳಿದೆ.
ಎನ್ಜಿಟಿ 2017ರ ಅಕ್ಟೋಬರ್ 6ರಂದು ಎತ್ತಿನಹೊಳೆ ಯೋಜನೆಗೆ ಷರತ್ತು ಬದ್ಧ ಅನುಮತಿ ನೀಡಿತ್ತು. ಕೆ.ಎನ್.ಸೋಮಶೇಖರ್, ಕಿಶೋರ್ ಕುಮಾರ್, ಪುರುಷೋತ್ತಮ ಚಿತ್ರಾಪುರ ಎಂಬುವವರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ಇದನ್ನು ಪಶ್ನೆ ಮಾಡಿದ್ದರು.
ಯೋಜನೆ ಕೈಗೊಳ್ಳುವಾಗ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಟನೆ ಮಾಡಲಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇರುವ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರ ಪಡೆದಿರುವ ಪರಿಸರ ಇಲಾಖೆ ಅನುಮತಿಯೇ ಕಾನೂನು ಬಾಹಿರ ಎಂದು ವಾದ ಮಂಡನೆ ಮಾಡಿದ್ದರು.












Click it and Unblock the Notifications