ಸಾರಿಗೆ ಇಲಾಖೆಗೆ ಕೊಡುಗೆ ನೀಡಿದ ಮಂಡ್ಯದ ಹಳ್ಳಿಹೈದ
ಓದಿರುವುದು ಎಂಟನೇ ತರಗತಿ. ಸದಾ ಏನಾದರೊಂದು ಸಾಧಿಸಬೇಕೆಂದು ಹಂಬಲದೊಂದಿಗೆ ನಡೆಯುವ ಈ ವ್ಯಕ್ತಿ ಕೈಗೊಳ್ಳುವುದು ವಿಜ್ಞಾನಿಗಳ ರೀತಿಯ ಸಂಶೋಧನೆ, ಒಮ್ಮೆ ಇವರ ಸಂಶೋಧನೆ ಕಂಡರೆ ಹುಬ್ಬೇರಿಸುವುದಂತೂ ಖಂಡಿತ.
ಈ ಮೇಲೆ ಹೇಳಿದ ಎಲ್ಲಾ ಗುಣಗಳು ನೀವು ನೋಡುವುದು ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕೋಮನಹಳ್ಳಿ ಗ್ರಾಮದ ರೈತ ಮಂಜೇಗೌಡರಲ್ಲಿ. ಹೊಸತನ್ನು ಸಂಶೋಧಿಸುತ್ತಲೇ ಇರಬೇಕು ಎನ್ನುವ ಇವರಿಗೆ ಹಲವು ಹೊಗಳಿಕೆ ಮಾತುಗಳು ಬಂದಿವೆ.[ಉಡುಪಿಯ ನೇಹಾ ಶೆಟ್ಟಿ ಇದೀಗ ಬ್ಯಾಡ್ಮಿಂಟನ್ ಮಿನುಗುತಾರೆ]

ಮೊದಲ ಸಂಶೋಧನೆ ರೋಬೋ:
ಕೊಳವೆ ಬಾವಿಗೆ ಮಕ್ಕಳು ಬಿದ್ದು, ಕಾರ್ಯಾಚರಣೆ ಯಶಸ್ವಿಯಾಗದೆ ಸಾವನ್ನಪ್ಪುತ್ತಿರುವುದನ್ನು ಮನಗಂಡ ಅವರು ಈ ಹಿಂದೆ 2014ರಲ್ಲಿ ರೋಬೊವನ್ನು ಕಂಡು ಹಿಡಿದಿದ್ದರು. ಮಕ್ಕಳಿಗೆ ತಮ್ಮ ಸಂಶೋಧನೆಯಿಂದ ಜೀವದಾನ ಮಾಡಲು ಇಚ್ಛಿಸಿದ್ದರು.
ಅದೇ ಸಮಯದಲ್ಲಿ ಬಾಗಲಕೋಟೆ ಜಿಲ್ಲೆಯ ಸೂಳಿಕೆರೆ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ತಿಮ್ಮಣ್ಣ ಎಂಬ ಬಾಲಕನನ್ನು ಸುರಕ್ಷಿತವಾಗಿ ಮೇಲೆತ್ತಲು ಬಾಗಲಕೋಟೆ ಜಿಲ್ಲಾಡಳಿತದ ಕರೆಯ ಮೇರೆಗೆ ತಮ್ಮ ರೋಬೋದೊಂದಿಗೆ ಹೋಗಿದ್ದ ಮಂಜೇಗೌಡ ಸತತ ಮೂರ್ನಾಲ್ಕು ದಿನಗಳ ಕಾಲ ತಾವು ಆವಿಷ್ಕರಿಸಿದ್ದ ರೋಬೋದೊಂದಿಗೆ ಕೊಳವೆ ಬಾವಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಸ್ವಲ್ಪದರಲ್ಲೇ ಕಾರ್ಯಾಚರಣೆ ವಿಫಲಗೊಂಡಿತ್ತು.
ಎರಡನೇ ಸಂಶೋಧನೆ ಆಟೋಮ್ಯಾಟಿಕ್ ಹೈಡ್ರೋಲಿಕ್ ರೈಲ್ವೇ ಗೇಟ್:
ಆಟೋಮ್ಯಾಟಿಕ್ ಹೈಡ್ರೋಲಿಕ್ ರೈಲ್ವೇ ಗೇಟ್ ಸಂಶೋಧನೆ ನಡೆಸಿ ರೈಲ್ವೆ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದರು. ಇದಲ್ಲದೆ ಹೊಗೆ ರಹಿತ ವಾಹನ ಸೈಲೆನ್ಸರ್ ಸಂಶೋಧನೆ ಮಾಡಿದ್ದಾರೆ. ಇನ್ನು ನೀರಿನಲ್ಲಿ ಮುಳುಗಿದ ಶವವನ್ನು ಪತ್ತೆ ಮಾಡುವ ಯಂತ್ರವನ್ನು ಸಂಶೋಧಿಸಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಗಮನಸೆಳೆದಿದ್ದಾರೆ.[ಮೇ.1ರಿಂದ ಆನ್ ಲೈನ್ ಮಾರುಕಟ್ಟೆಯಲ್ಲಿ ಮಂಡ್ಯದ ಸಿಹಿ ಬೆಲ್ಲ]

ಸಾರಿಗೆ ಇಲಾಖೆಯಲ್ಲಿ ಸಂಶೋಧನೆ:
ಇದೀಗ ಸತತ 6 ತಿಂಗಳ ಕಾಲ ಸಂಶೋಧನೆ ಮಾಡಿ ಸಾರಿಗೆ ಇಲಾಖೆಗೆ ಅನುಕೂಲವಾಗುವಂತೆ ವಾಹನ ಸುರಕ್ಷತಾ ಯಂತ್ರ ವಿಎಸ್ ಬಿ ಎಂಬ ವಾಹನ ಸುರಕ್ಷತಾ ಪೆಟ್ಟಿಗೆಯನ್ನು ಸಂಶೋಧನೆ ಮಾಡಿದ್ದಾರೆ. ಇದನ್ನು ಸಾರಿಗೆ ಇಲಾಖೆಯು ಅಳವಡಿಸಿಕೊಂಡಲ್ಲಿ ಶೇ.90ರಷ್ಟು ಸಾರಿಗೆ ನಿಯಮಗಳ ಪಾಲನೆಗೆ ಸಹಕಾರಿಯಾಗುತ್ತದೆ ಎಂಬುದು ಮಂಜೇಗೌಡರ ಅಭಿಪ್ರಾಯವಾಗಿದೆ.
ವಿಎಸ್ ಬಿ ರೂಪುರೇಷೆ ಹೇಗಿದೆ?
ವಿಎಸ್ ಬಿ ಪೆಟ್ಟಿಗೆಯಲ್ಲಿ ಸ್ಕ್ಯಾನರ್ ಅಳವಡಿಸಿದ್ದು, ಇದರಲ್ಲಿ ಸಿಗ್ನಲ್ ಕಂಟ್ರೋಲರ್, ಆಟೋಮ್ಯಾಟಿಕ್ ಆನ್ ಅಂಡ್ ಆಫ್ ಸ್ವಿಚ್, 12 ವೋಲ್ಟ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಈ ಬಾಕ್ಸೊಳಗೆ ವಾಹನದ ಸ್ಮಾಟ್ ಕಾರ್ಡ್ ಡಿಎಲ್ ವಾಹನದ ದಾಖಲೆಗಳ ಸ್ಮಾಟ್ ಕಾರ್ಡ್, ಜೊತೆಗೆ ವಾಹನದ ವಿಮೆಯ ಸ್ಮಾಟ್ ಕಾರ್ಡ್ ಅಳವಡಿಸಿದ್ದಾರೆ.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೇ ಕ್ಲಿಕ್ಕಿನಲ್ಲಿ ಎಲ್ಲ ಮಾಹಿತಿ]
ಈ ವಿಎಸ್ ಬಿ ಬಾಕ್ಸನ್ನು ವಾಹನದ ಇಂಜಿನ್ ನೊಂದಿಗೆ ಪರಸ್ಪರ ಹೊಂದಾಣಿಕೆ ಮಾಡಿದ್ದಾರೆ. ವಿಎಸ್ ಬಿ ಬಾಕ್ಸ್ ಚಾಲಕ ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ, ಡಿಎಲ್ ವಾಹನದ ದಾಖಲೆಗಳು ಇಲ್ಲದಿದ್ದರೆ, ವಾಹನಕ್ಕೆ ವಿಮೆ ಇಲ್ಲದಿದ್ದರೆ ಚಾಲನೆಗೊಳ್ಳುವುದಿಲ್ಲ. ಈ ಎಲ್ಲಾ ದಾಖಲೆಗಳು ಸರಿ ಇದ್ದರೆ ಮಾತ್ರ ವಾಹನದ ಕೀ ಬಳಸಿದರೆ ಚಾಲನೆಯಾಗುತ್ತದೆ.
ಈ ವಿಎಸ್ ಬಿ ಉಪಕರಣದ ಬಗ್ಗೆ ಈಗಾಗಲೇ ಮಂಜೇಗೌಡರು ಪ್ರಾತ್ಯಕ್ಷಿಕೆಯನ್ನು ನಡೆಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.[ಡಿಎಲ್ ಪಡೆಯಲು ಇನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ]












Click it and Unblock the Notifications