ನರೇಗಾ ಯೋಜನೆ; ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ
ಬೆಂಗಳೂರು, ಸೆಪ್ಟೆಂಬರ್ 12; ಗ್ರಾಮೀಣ ಪ್ರದೇಶದಲ್ಲಿ ಬಡಜನರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ನೀಡುವ ಮಹತ್ತರ ಗುರಿಯೊಂದಿಗೆ ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಯೋಜನೆ ಯಶಸ್ವಿಯೂ ಆಗಿದೆ.
ಕರ್ನಾಟಕ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿ ಕುರಿತು ಹೊಸ ಸೊತ್ತೋಲೆಯೊಂದನ್ನು ಹೊರಡಿಸಿದೆ. ಯೋಜನೆಯ ಕಾಮಗಾರಿಗಳಲ್ಲಿ ಲೋಪಗಳು ಉಂಟಾದರೆ ಇದಕ್ಕೆ ಕಾರಣವಾದ ಅಧಿಕಾರಿ, ಸಿಬ್ಬಂದಿಗೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಗ್ರಾಮೀಣ ಪ್ರದೇಶದ ಜನರಗೆ ಕೆಲಸ ನೀಡಿ, ವಿವಿಧ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದೆ.
ಸುತ್ತೋಲೆಯ ವಿವರಗಳು; ಎಲ್ಲಾ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಸರ್ಕಾರ ಸುತ್ತೋಲೆಯಲ್ಲಿ ಸೂಚನೆಯೊಂದನ್ನು ನೀಡಿದೆ. ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಲೋಪ ಮಾಡಿದ ಜಿಲ್ಲಾ ಪಂಚಾಯಿತಿ, ರಾಜ್ಯಮಟ್ಟದಲ್ಲಿ ಸಾಮಗ್ರಿ ವೆಚ್ಚದ ಎಫ್ಟಿಒಗಳು ತಿರಸ್ಕೃತವಾಗಲು ಕಾರಣದಾದವರ ವಿರುದ್ಧ ಕ್ರಮಕ್ಕೆ ಸೂಚನೆ ಕೊಡಲಾಗಿದೆ.
ಗ್ರಾಮ ಪಂಚಾಯಿತಿ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಗುರುತಿಸಿ ನರೇಗಾ ಅಧಿನಿಯಮ ಸೆಕ್ಷನ್ 25ರಂತೆ ತಲಾ 1000 ರೂ. ದಂಡ ವಿಧಿಸಬೇಕು. ವಿಧಿಸಲಾದ ದಂಡವನ್ನು ವಸೂಲಿ ಮಾಡಬೇಕು. ದಂಡ ಕಟ್ಟಿದ ಅಧಿಕಾರಿ ಸೇವಾ ಪುಸ್ತಕದಲ್ಲಿ ದಂಡನೆಯ ಅಂಶವನ್ನು ಉಲ್ಲೇಖಿಸಬೇಕು ಎಂದು ಸೂಚಿಸಲಾಗಿದೆ.
ನರೇಗಾ ಯೋಜನೆಯ ಹಲವು ಕಾಮಗಾರಿಗಳಲ್ಲಿ ಅಕ್ರಮಗಳ ನಡೆದಿರುವ ಬಗ್ಗೆ ಪದೇ ಪದೇ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಂಡ ಪ್ರಯೋಗಕ್ಕೆ ಮುಂದಾಗಿದೆ. ಕಾಮಗಾರಿಯ ಜಿಯೋ ಟ್ಯಾಗ್ ಇಲ್ಲದಿರುವುದು, ಸಾರ್ವಜನಿಕ ಮಾಹಿತಿ ಫಲಕದಲ್ಲಿ ಕಾಮಗಾರಿ ಮಾಹಿತಿ ಇಲ್ಲದಿರುವುದು, ಒಂದೇ ಫೋಟೋವನ್ನು ಹಲವು ಕಾಮಗಾರಿಗಳಿಗೆ ಅಪ್ಲೋಡ್ ಹೀಗೆ ಹಲವು ಅಕ್ರಮ ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.
ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತ ಪಾವತಿ ಮಾಡಿರುವುದು, ನಕಲಿ ಉದ್ಯೋಗ ಕಾರ್ಡ್ ಹಂಚಿಕೆ ಸೇರಿದಂತೆ ಅನೇಕ ಲೋಪದೋಷಗಳು ಕಂಡಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಸರ್ಕಾರ ಯೋಜನೆಯನ್ನು ಪರಿಣಾಮಗಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿ/ ಸಿಬ್ಬಂದಿ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸಲು ಪ್ರತಿ ಗ್ರಾಮೀಣ ಕುಟುಂಬಕ್ಕೆ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ಕೂಲಿ ಉದ್ಯೋಗವನ್ನು ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಮಾಹಿತಿಯಂತೆ ನರೇಗಾ ಯೋಜನೆಯಡಿ ಒಟ್ಟು 11.37 ಕೋಟಿ ಕುಟುಂಬಗಳು ಉದ್ಯೋಗವನ್ನು ಪಡೆದುಕೊಂಡಿವೆ ಮತ್ತು ಒಟ್ಟು 289.24 ಕೋಟಿ ವ್ಯಕ್ತಿ-ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ (ಡಿಸೆಂಬರ್ 15, 2022 ರವರೆಗೆ ). 2023ರ ಏಪ್ರಿಲ್ 1ರಿಂದ ಜಾರಿಯಾಗುವಂತೆ ನರೇಗಾ ಯೋಜನೆಯಡಿ ನೀಡುವ ಕೂಲಿಯನ್ನು 316 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಮ್ಮಿಕೊಳ್ಳಲಾಗುತ್ತದೆ.












Click it and Unblock the Notifications