ಅಭ್ಯರ್ಥಿಗಳಿಗೆ ಚಂದಾ ಎತ್ತಿ ಕೊಡಬೇಕಿದೆ, ಎಲ್ಲಿ ಹೋಗಿ ಸಾಯಲಿ: ಕುಮಾರಸ್ವಾಮಿ
ಬೆಂಗಳೂರು, ಮೇ 10: ಬಹಿರಂಗ ಪ್ರಚಾರ ಮುಕ್ತಾಯಕ್ಕೆ ಕೆಲವೇ ಗಂಟೆ ಬಾಕಿಯಿರುವ ಈ ಹೊತ್ತಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿರುವ ಹೇಳಿಕೆ, "ವೋಟಿಗಾಗಿ ನೋಟು ಹೊಡೆಯಬೇಕು" ಎನ್ನುವ ಮಾತನ್ನು ಎಚ್ಡಿಕೆ ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆಯೇ ಎಂದು ಪ್ರಶ್ನಿಸುವಂತಾಗಿದೆ.
ಗುರುವಾರ (ಮೇ 10) ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಗ್ಗೆರೆ ಸರ್ಕಲ್ ನಲ್ಲಿ ರೋಡ್ ಶೋ ನಡೆಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಾನಿನ್ನು ಹೊರಡುತ್ತೇನೆ. ಅಭ್ಯರ್ಥಿಗಳಿಗೆ ಚಂದಾ ಎತ್ತಿಕೊಡಬೇಕಿದೆ. ದುಡ್ಡು ಬೇಕೆಂದು ಅಭ್ಯರ್ಥಿಗಳು ಹಿಂದೆ ಬಿದ್ದಿದ್ದಾರೆ, ನಾನೆಲ್ಲಿ ಹೋಗಿ ಸಾಯಲಿ ಎಂದು ಎಚ್ಡಿಕೆ ಹೇಳಿದ್ದಾರೆ.
ವೋಟರ್ ಐಡಿ ಪತ್ತೆ: ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಎಫ್ಐಆರ್
ನಾನು ಇನ್ನೂ ಹೆಚ್ಚು ದಿನ ಬದುಕಬೇಕಿದ್ದರೆ, ನೀವು ನನಗೆ ವೋಟ್ ಹಾಕಬೇಕು, ಇಲ್ಲದಿದ್ದರೆ ಹೆಚ್ಚುದಿನ ಬದುಕುವುದಿಲ್ಲ, ನನ್ನ ಜೀವನ ನಿಮ್ಮ ಕೈಯಲ್ಲಿದೆ ಎಂದು ಹೇಳಿರುವ ಕುಮಾರಸ್ವಾಮಿ, ಭಾವನಾತ್ಮಕವಾಗಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಕ್ಷೇತ್ರದ ಮತದಾರರಲ್ಲಿ ವೋಟರ್ ಐಡಿ ಇಲ್ಲದಿದ್ದರೆ, ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬೇಡಿ. ಹತ್ತಾರು ದಾಖಲೆಗಳನ್ನು ತೋರಿಸಿ ನಿಮ್ಮ ಮತ ಚಲಾಯಿಸಲು ಅವಕಾಶವಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯ ಪರ ಮತಚಲಾಯಿಸಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ತೀವ್ರ ಜ್ವರದ ನಡುವೆಯೂ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಕುಮಾರಸ್ವಾಮಿ, ಒಂದು ಬಾರಿ ಜೆಡಿಎಸ್ ಪಕ್ಷಕ್ಕೆ ಸರಕಾರ ರಚಿಸಲು ಅವಕಾಶ ನೀಡಿ, ಜನ ಮೆಚ್ಚುವಂತೆ ಆಡಳಿತ ನಡೆಸಿ ತೋರಿಸುತ್ತೇನೆಂದು ಕುಮಾರಸ್ವಾಮಿ, ರೋಡ್ ಶೋ ವೇಳೆ ಹೇಳಿದ್ದಾರೆ.
ಎಚ್ಡಿಕೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ರಹಸ್ಯ, ಇದೀಗ ಬಯಲು!
ಗುರುವಾರ, ಕುಮಾರಸ್ವಾಮಿಯವರ ಮಾಧ್ಯಮ ಸಂವಾದ ನಡೆಯಬೇಕಿತ್ತು. ಆದರೆ, ಅನಾರೋಗ್ಯದ ಹಿನ್ನಲೆಯಲ್ಲಿ ಕಾರ್ಯಕ್ರಮ ರದ್ದು ಪಡಿಸಲಾಗಿದೆ. ಬುಧವಾರ, ಶಾಂತಿನಗರ ವಿಧಾನಸಭಾಕ್ಷೇತ್ರದಲ್ಲಿ ಪಟಾಕಿ ಹೊಗೆಯಿಂದ ಕುಮಾರಸ್ವಾಮಿಯವರಿಗೆ ಅಲರ್ಜಿಯಾಗಿದ್ದು, ಅತಿಯಾದ ಓಡಾಟದಿಂದ ಸುಸ್ತಾದ ಪರಿಣಾಮ ಈಗ ಜ್ವರದಿಂದ ಬಳಲುತ್ತಿದ್ದಾರೆಂದು ಜೆಡಿಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
'ಅಭ್ಯರ್ಥಿಗಳಿಗೆ ಚಂದಾ ಎತ್ತಿಕೊಡಬೇಕಿದೆ' ಎನ್ನುವ ಕುಮಾರಸ್ವಾಮಿಯವರ ಹೇಳಿಕೆ, ಮತದಾನಕ್ಕೆ ಮುನ್ನಾದಿನ ಹಣಹೆಂಡ ಹರಿಯುತ್ತದೆ ಎನ್ನುವ ಜನಸಾಮಾನ್ಯರಲ್ಲಿನ ಭಾವನೆಗೆ ಇಂಬು ಕೊಡುವಂತಿದೆ.