ಚಂಡಮಾರುತದ ಅಪಾಯ ತಪ್ಪಿಸಲು ರಾಜ್ಯ ಕರಾವಳಿಗೆ ಹೊಸ ಯೋಜನೆ
ಬೆಂಗಳೂರು, ಅಕ್ಟೋಬರ್ 12: ರಾಜ್ಯದ ಪಶ್ಚಿಮ ಕರಾವಳಿಯ ಸುಮಾರು 321 ಕಿ.ಮೀ ವಿಸ್ತಾರವಿರುವ ಕಡಲ ತೀರದಲ್ಲಿ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯು ಕೇಂದ್ರ ಸರ್ಕಾರ ಹಾಗೂ ವಿಶ್ವಬ್ಯಾಂಕ್ ನೆರವಿನಿಂದ ಅನುಷ್ಠಾನ ಮಾಡಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದ ಉಪ ಕಾರ್ಯದರ್ಶಿ ಟಿ. ನಾರಾಯಣಪ್ಪ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಂದಾಯ ಇಲಾಖೆ ಇಂದು ಏರ್ಪಡಿಸಿದ್ದ 'ಚಂಡಮಾರುತ ಮತ್ತು ಪ್ರವಾಹ ವಿಪತ್ತು ನಿರ್ವಹಣೆ' ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ರಾಜ್ಯ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಈಗಾಗಲೇ ಈ ಯೋಜನೆಯಡಿ ಹಲವು ಕಾರ್ಯಕ್ರಮಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಈ ಯೋಜನೆಯ ಯಶಸ್ವಿ ನಿರ್ವಣೆಗಾಗಿ ತರಬೇತಿ ಏರ್ಪಡಿಸಲಾಗಿದೆ. ರಾಜ್ಯದಲ್ಲಿ ಬರ ಮತ್ತು ನೆರೆಯಿಂದ ಹೆಚ್ಚು ವಿಪತ್ತುಗಳು ಸಂಭವಿಸುತ್ತವೆ ಎಂದು ತಿಳಿಸಿದ ವಿಪತ್ತು ನಿರ್ವಾಹಣಾ ತಜ್ಞರಾದ ಡಾ.ವಿಶ್ವನಾಥ್ ಅವರು ಪ್ರಾಕೃತಿಕದತ್ತವಾಗಿರುವ ರಾಜ್ಯದಲ್ಲಿ ವಿಪತ್ತುಗಳು ಸಂಭವಿಸಿರುವ ಉದಾಹರಣೆಗಳಿವೆ ಎಂದರು.
ರಾಜ್ಯ ಸರ್ಕಾರ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ದಪಡಿಸಿ ಎರಡು ಬಾರಿ ಪುನರ್ ಪರಿಶೀಲನೆ ನಡೆಸಿದೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಪತ್ತು ಪ್ರಾಧಿಕಾರ ರಚನೆಯಾಗಿದ್ದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಾಹಣೆ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ ಎಂದರು.
ವಿಪತ್ತು ನಿರ್ವಹಣ ತಜ್ಞರುಗಳಾದ ಡಾ. ಶ್ರೀನಿವಾಸ ರೆಡ್ಡಿ, ಡಾ. ರಾಜಕುಮಾರ್ ಪೂಜಾರ್, ಗವಾಸ್ಕರ್ ಹಾಗೂ ಇತರರು ವಿಪತ್ತು ನಿರ್ವಹಣೆ ಬಗ್ಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.











Click it and Unblock the Notifications