ಮೋದಿ ಕರ್ನಾಟಕ ಭೇಟಿ; ರಣದೀಪ್ ಸುರ್ಜೆವಾಲಾ 6 ಪ್ರಶ್ನೆಗಳು
ಸೋಮವಾರ ಕರ್ನಾಟಕ ಭೇಟಿ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ 6 ಪ್ರಶ್ನೆ ಕೇಳಿದ್ದಾರೆ.
ಶಿವಮೊಗ್ಗ, ಫೆಬ್ರವರಿ 27; ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಮತ್ತು ಬೆಳಗಾವಿ ಕಾರ್ಯಕ್ರಮ ಮುಗಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಸೋಮವಾರ ಎರಡು ಜಿಲ್ಲೆಗಳಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಪ್ರಧಾನಿ ಮೋದಿಗೆ 6 ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಪ್ರಶ್ನೆಗಳಿಗೆ ಪ್ರಧಾನ ಮಂತ್ರಿಯವರು ಉತ್ತರಿಸಲೇಬೇಕು ಎಂದು ಕಾಂಗ್ರೆಸ್ ಪಕ್ಷ ಈ ಮೂಲಕ ಒತ್ತಾಯಿಸುತ್ತದೆ ಎಂದು ಅವರು ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದಾರೆ. ಚುನಾವಣೆ ಶುರುವಾಗುತ್ತಿದ್ದಂತೆ ಕರ್ನಾಟಕ ನೆನಪಾಗಿ ಪ್ರಚಾರಕ್ಕಾಗಿ ಓಡೋಡಿ ರಾಜ್ಯಕ್ಕೆ ಬರುತ್ತಿರುವ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿಯಾದ ರಣದೀಪ್ ಸುರ್ಜೆವಾಲಾ ಆರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಪಕ್ಷ ಟ್ವೀಟ್ ಮಾಡಿದೆ.

1) ಭಾರತೀಯ ಜನತಾ ಪಕ್ಷ ಕರ್ನಾಟಕದ ಉದ್ದಗಲಕ್ಕೂ "ಬಿಜೆಪಿಯೇ ಭರವಸೆ" ಅನ್ನೋ ಅಭಿಯಾನ ನಡೆಸುತ್ತಿದ್ದು 40% ಸರ್ಕಾರ ತನ್ನ ಅಕ್ರಮ ಗಳಿಕೆಯ ಹಣದಲ್ಲಿ ಎಲ್ಲಾ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಚುನಾವಣೆಗೆ ಮುಂದಾಗಿದೆ. ಆದರೆ ಕಳೆದ ಬಾರಿ ನಿಮ್ಮ ನೇತೃತ್ವದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ 10% ಭರವಸೆಗಳನ್ನೂ ನಿಮ್ಮ ಪಕ್ಷದ ಸರಕಾರದಿಂದ ಪೂರೈಸಲಾಗಿಲ್ಲ ಯಾಕೆ? ಈ ಬಗ್ಗೆ ಸರ್ಕಾರದ ಹಣದಲ್ಲಿ ನೀವು ನಡೆಸುತ್ತಿರುವ ಪ್ರಚಾರ ಸಭೆಯಲ್ಲಿಯಾದರೂ ಜನರಿಗೆ ಉತ್ತರದಾಯಿ ಆಗಬಲ್ಲಿರಾ?.
2) ನಿಮ್ಮ "ರೋಡ್ ಷೋ(ಕಿ)" ಗಾಗಿ ಇಂದು ನಡೆಯಬೇಕಿದ್ದ ಪ್ರಥಮ PUC ಪರೀಕ್ಷೆಯನ್ನು ಬೆಳಗಾವಿಯಲ್ಲಿ ರದ್ದು ಮಾಡಲಾಗಿದೆ. ಈ ಬಗ್ಗೆ ನೀವು ಉತ್ತರಿಸುವಿರಾ? ಅಲ್ಲದೇ ಕರ್ನಾಟಕದ 13,000 ಅನುದಾನ ರಹಿತ ಶಾಲೆಗಳ ಒಕ್ಕೂಟವಾದ 'RUPSA', ರಾಜ್ಯದ ಬಿಜೆಪಿ ಸರ್ಕಾರದಲ್ಲಿ 40% ಲಂಚ ನೀಡದೆ ಯಾವುದೇ ಸೇವೆ ಪಡೆಯಲು ಸಾಧ್ಯವಿಲ್ಲ ಎಂದು ತಮಗೆ ಪತ್ರ ಬರೆದು ಆರೋಪ ಮಾಡಿದ್ದರು. ಇದಕ್ಕೆ ತಾವು ಉತ್ತರವೇ ಕೊಟ್ಟಿಲ್ಲ ಯಾಕೆ? "ಪರೀಕ್ಷೆ ಪೇ ಚರ್ಚೆ" ನಡೆಸುವ ತಾವು "ಶಿಕ್ಷಣದ ಬಗ್ಗೆ ಚರ್ಚೆಗೆ" ಯಾವಾಗ ಬರ್ತೀರಾ?.
3) ಇಡೀ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು ಎರಡುವರೆ ಲಕ್ಷ ಸರ್ಕಾರಿ ಉದ್ಯೋಗ ಮತ್ತು ಸುಮಾರು ಏಳುವರೆ ಲಕ್ಷ ಖಾಸಗಿ ಉದ್ಯೋಗಕ್ಕೆ ಅವಕಾಶವಿದ್ದು, ರಾಜ್ಯದ ಬಿಜೆಪಿ ಸರ್ಕಾರ ಯುವಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿರುತ್ತದೆ. ನೇಮಕಾತಿ ನಡೆಸುತ್ತಿರುವ ಹುದ್ದೆಗಳ ಹಂಚಿಕೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನಿಮ್ಮ ಬಿಜೆಪಿ ಶಾಸಕರು & ಮಂತ್ರಿಗಳು ಸರ್ಕಾರದ ಹುದ್ದೆಗಳನ್ನು ಲಕ್ಷ-ಕೋಟಿಗಟ್ಟಲೆ ಹಣಕ್ಕೆ ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ! ನಿಮ್ಮದೇ ಪಕ್ಷದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಶಾಸಕರೊಬ್ಬರು ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಪುತ್ರ PSI ನೇಮಕಾತಿ ಹಗರಣದ ನೇರ ರೂವಾರಿ ಎಂದು ಆರೋಪಿಸಿದ್ದರು. ಅದರ ಬಗ್ಗೆನೂ ನಿಮ್ಮ ಭಾಷಣಕಾರರಿಗೆ ಹೇಳಿ ಒಂದು ಉತ್ತರ ಬರೆಸಿ, ಅದನ್ನು ಓದಿ ಹೇಳಿ ನೋಡೋಣ!

4) ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಲಕ್ಷಾಂತರ ಜನರ ಪಾಲಿಗೆ ಉದ್ಯೋಗ ಒದಗಿಸಿದ್ದ ದೇಶದ ಮಹತ್ತರ ಕಾರ್ಖಾನೆಯಾಗಿತ್ತು. ಈ ಕಾರ್ಖಾನೆಗೆ UPA ಸರಕಾರ 2013ರಲ್ಲಿಯೇ ಬಳ್ಳಾರಿಯಲ್ಲಿ 380 ಎಕರೆ ಗಣಿ ಪ್ರದೇಶವನ್ನು ಒದಗಿಸಿತ್ತು. ಆದರೆ ನಿಮ್ಮ ಸರ್ಕಾರ ಆ ಗಣಿ ಪ್ರದೇಶದ ಉಪಯೋಗವನ್ನೇ ಮಾಡದೇ, ಈಗ ಈ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಹಾಕಿದ್ದು ಯಾಕೆ ಅಂತ ಶಿವಮೊಗ್ಗದ ಜನರಿಗೆ ಉತ್ತರಿಸಿಲ್ಲ ಏಕೆ?
5) ಕಳೆದ ಚುನಾವಣೆಯ ವೇಳೆ ದೇಶದ ಗೃಹ ಮಂತ್ರಿ "ಅಮಿತ್ ಶಾ" ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶಿವಮೊಗ್ಗ ಜಿಲ್ಲೆಯಲ್ಲಿ 500 ಕೋಟಿ ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಅದಕ್ಕೆ 5 ಪೈಸೆ ಸಹ ನೀಡಿಲ್ಲ ಏಕೆ? ಆತ್ಮನಿರ್ಭರ್ ಭಾರತದ ಹೆಸರಲ್ಲಿ ಪ್ರಚಾರ ಪಡೆಯುವ ತಾವು ನಮ್ಮ ದೇಶದಲ್ಲಿ ಬೆಳೆಸುವ ಉತ್ಕೃಷ್ಟ ದರ್ಜೆಯ ಅಡಿಕೆಗೆ ಪ್ರೋತ್ಸಾಹ ನೀಡದೇ, ಹೊರ ದೇಶದಿಂದ ಅಮದಾಗುವ ಅಡಿಕೆ ಮೇಲಿದ್ದ ಆಮದು ಸುಂಕವನ್ನು 110% ನಿಂದ ಕೇವಲ 10% ಇಳಿಸಿ ದೇಶೀ ಅಡಿಕೆಯ ಮಾರುಕಟ್ಟೆಯನ್ನು ಭಸ್ಮ ಮಾಡಿದ್ದು ಏಕೆ? ಇಡೀ ಮಲೆನಾಡು ಪ್ರದೇಶದಲ್ಲಿ ಎಲೆ ಚುಕ್ಕೆ ರೋಗದಿಂದ ಮುಂದಿನ ಮಳೆಗಾಲದ ಒಳಗೆ ಇಡೀ ಅಡಿಕೆ ಬೆಳೆ ಸರ್ವನಾಶಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ, ಆದರೂ ಈ ಎಲೆ ಚುಕ್ಕೆ ರೋಗಕ್ಕೆ ನಿಮ್ಮ ಡಬಲ್ ಇಂಜಿನ್ ಸರ್ಕಾರ ಔಷದ ಕಂಡು ಹಿಡಿಯಲು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಏಕೆ?
6) ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಪದೇ ಪದೇ ರಾಜ್ಯಗಳ ಮಧ್ಯೆ ಮಹಾರಾಷ್ಟ್ರದ ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು ಕಂದಕ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದು, ನಮ್ಮ ನಾಡಿನಲ್ಲಿ ಶಾಂತಿ ಭಂಗಪಡಿಸಲು ಯತ್ನಿಸುತ್ತಿರುವವವರಿಗೆ, "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ - ಇಲ್ಲಿ ಯಾರೂ ಅನಾವಶ್ಯಕವಾಗಿ ಹಾಗೂ ಉದ್ದೇಶಪೂರ್ವಕವಾಗಿ ಗಡಿ ವಿಚಾರದಲ್ಲಿ ರಾಜಕೀಯ ಮಾಡಬಾರದು' ಎಂದು ನೀವು ಇಂದು ಘೋಷಿಸಿ, ಮಹಾರಾಷ್ಟ್ರದ ಬಿಜೆಪಿ ಶಾಸಕರಿಗೆ ಪಾಠ ಹೇಳಬಲ್ಲಿರಾ?. ಚುನಾವಣಾ ಸಮಯದಲ್ಲಿ ಕರ್ನಾಟಕದ ಸ್ಥಳೀಯ ನಾಯಕತ್ವದ ಕೊರತೆ ಮತ್ತು ವೈಫಲ್ಯವನ್ನು ಮನಗಂಡಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿರವರು, ಪದೇ ಪದೇ ಕರ್ನಾಟಕಕ್ಕೆ ಭೇಟಿ ನೀಡಿ ಸುಳ್ಳು ಮಾಹಿತಿಗಳ ಮುಖಾಂತರ ಜನಸಾಮಾನ್ಯರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಇಲ್ಲಿಯವರೆಗೆ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳಿಗೆ, ಭ್ರಷ್ಟಾಚಾರಗಳಿಗೆ, ಆಡಳಿತ ಯಂತ್ರದ ಕುಸಿತಕ್ಕೆ, ಉದ್ಯೋಗದ ಸಮಸ್ಯೆಗೆ, ಬೆಲೆ ಏರಿಕೆಗೆ ಮತ್ತು ಹಗರಣಗಳಿಗೆ ಉತ್ತರ ಕೊಡದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿರವರು, ಜನರ ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications