ನಂದಿನಿ ಅಮುಲ್ ವಿಲೀನಗೊಳಿಸಲ್ಲ, ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ: ಸಚಿವ ಕೆ ವೆಂಕಟೇಶ್
ಬೆಂಗಳೂರು, ಜುಲೈ 12: ಹಾಲಿನ ದರ ಹೆಚ್ಚಿಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಕೆಎಂಎಫ್ನ ನಂದಿನಿಯನ್ನು ಅಮುಲ್ನೊಂದಿಗೆ ವಿಲೀನಗೊಳಿಸುವ ಯಾವುದೇ ಯೋಜನೆ ಇಲ್ಲ. ರೈತರು ಮತ್ತು ಹಾಲು ಒಕ್ಕೂಟಗಳೆರಡೂ ಸಂಕಷ್ಟದಲ್ಲಿದ್ದು ಹಾಲಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ರೈತರು, ಹಾಲು ಒಕ್ಕೂಟಗಳು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಹೆಚ್ಚಿಸಲಾಗುವುದು. ಹೆಚ್ಚಳದ ನಂತರ ಶೇ. 70ರಷ್ಟು ರೈತರಿಗೆ ಹಾಗೂ ಉಳಿದ ಹಣವನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುವುದು. ಹಲವು ಖಾಸಗಿ ಕಂಪನಿಗಳು ರೈತರಿಂದ ಖರೀದಿಸುವ ಒಂದು ಲೀಟರ್ ಹಾಲಿಗೆ 2-3 ರೂಪಾಯಿ ನೀಡುತ್ತಿವೆ. ಇದು ಹಾಲು ಒಕ್ಕೂಟಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಚಿವರು ಹೇಳಿದರು.
ಆ ಕಂಪನಿಗಳನ್ನು ನಿಯಂತ್ರಿಸುವ ಮಾರ್ಗೋಪಾಯಗಳ ಕುರಿತು ಚಿಂತನೆ ನಡೆಸುತ್ತಿದ್ದೇವೆ. ಎಸ್ಸಿ ಮತ್ತು ಎಸ್ಟಿ ಸಮುದಾಯದ ರೈತರಿಗೆ ಏಪ್ರಿಲ್ವರೆಗೆ ಮತ್ತು ಇತರರಿಗೆ ಫೆಬ್ರವರಿವರೆಗೆ ಸಬ್ಸಿಡಿ ಬಾಕಿ ಪಾವತಿಸಲಾಗಿದೆ=. ಅವರ ಬಾಕಿಯನ್ನು ಶೀಘ್ರದಲ್ಲಿಯೇ ತೀರಿಸಲು ಕ್ರಮಕೈಗೊಳ್ಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
ನಂದಿನಿಯನ್ನು ಅಮೂಲ್ನೊಂದಿಗೆ ವಿಲೀನಗೊಳಿಸುವ ಕ್ರಮ ಕುರಿತು ಜೆಡಿಎಸ್ನ ಎಂಎಲ್ಸಿಗಳಾದ ಎಸ್ಎಲ್ ಭೋಜೇಗೌಡ ಮತ್ತು ಕೆಎ ತಿಪ್ಪೇಸ್ವಾಮಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಲೀನದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಮುಲ್ ಆನ್ಲೈನ್ನಲ್ಲಿ ಕೇವಲ 1,000 ಲೀಟರ್ಗಳನ್ನು ಮಾತ್ರ ಮಾರಾಟ ಮಾಡುತ್ತಿದೆ ಎಂದು ವೆಂಕಟೇಶ್ ಹೇಳಿದರು.
ಕಳೆದ ನವೆಂಬರ್ನಲ್ಲಿ ಕೆಎಂಎಫ್ ಹಾಲಿನ ದರವನ್ನು 2 ರೂಪಾಯಿ ಹೆಚ್ಚಿಸಿತ್ತು. ಆದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು ಸ್ಥಗಿತಗೊಳಿಸಿತ್ತು. ಇತ್ತೀಚೆಗಷ್ಟೇ ಸಹಕಾರ ಖಾತೆ ಸಚಿವ ಕೆಎನ್ ರಾಜಣ್ಣ ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲು ಚಿಂತನೆ ಮಾಡುತ್ತಿದೆ ಎಂದು ಹೇಳಿದ್ದರು.
ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ. ದರ ಹೆಚ್ಚಳ ಎಂದರೆ ಎರಡು ರೀತಿ ಇರುತ್ತದೆ. ಉತ್ಪಾದಕರಿಗೆ ಹೆಚ್ಚಿನ ದರವನ್ನು ನೀಡುವುದು, ಖರೀದಿ ಮಾಡುವವರಿಗೆ ದರ ಹೆಚ್ಚು ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ಈ ಎರಡೂ ಕಡಿಮೆ ಇದೆ, ಹಾಲು ಉತ್ಪಾದಕರಿಗೆ ನಾವು ನೆರವು ನೀಡಬೇಕಿದೆ. ಯಾರಿಗೂ ಹೊರೆಯಾಗದಂತೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದರು.
ಹಲವು ತಿಂಗಳಿನಿಂದ ರಾಜ್ಯದಲ್ಲಿ ನಂದಿನಿ ದರ ಹೆಚ್ಚಳದ ಬಗ್ಗೆ ಸುದ್ದಿಗಳು ಬರುತ್ತಲೇ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಹೆಚ್ಚಳ ಮಾಡಬೇಕಿತ್ತಾದರೂ, ಮಾಡಿರಲಿಲ್ಲ. ಕೆಎಂಎಫ್ ಮಾತ್ರ ನಂದಿನ ಹಾಲಿನ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಕರ್ನಾಟಕ ಹಾಲು ಮಾರಾಟ ಮಹಾಮಂಡಳದ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಕೂಡ ದರ ಹೆಚ್ಚಳದ ಬಗ್ಗೆ ಸುಳಿವು ನೀಡಿದ್ದರು. ನಂದಿನ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದ್ದರು.












Click it and Unblock the Notifications