ಯಡಿಯೂರಪ್ಪ ಮುಂದೆ 'ಪವರ್' ತೋರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್
ಬೆಂಗಳೂರು, ಸೆಪ್ಟೆಂಬರ್ 26: ಬಿಜೆಪಿಯ ಹೊಸ ರಾಜ್ಯಾಧ್ಯಕ್ಷರಿಗೆ ಮಾಜಿ ರಾಜ್ಯಾಧ್ಯಕ್ಷರಿಗೂ ಅಧಿಕಾರದ ಸಂಘರ್ಷ ಪ್ರಾರಂಭವಾಗಿದೆ.
ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರ ಇತ್ತೀಚೆಗೆ ನೇಮಕವಾಗಿದ್ದಾರೆ. ಆದರೆ ರಾಜ್ಯ ಬಿಜೆಪಿ ಹಿಡಿತವಿನ್ನೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸಿಎಂ ಯಡಿಯೂರಪ್ಪ ಹಿಡಿತದಲ್ಲಿಯೇ ಇದೆ. ಇದು ನಳೀನ್ ಕಟೀಲ್ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ತಮ್ಮ ರಾಜ್ಯಾಧ್ಯಕ್ಷ 'ಪವರ್' ಅನ್ನು ಬಳಸಲು ಅವರು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ಯಡಿಯೂರಪ್ಪ ಹಾಗೂ ಬೆಂಗಳೂರಿನ ಬಿಜೆಪಿ ಶಾಸಕರು ಸೇರಿ ಬಿಬಿಎಂಪಿ ಮೇಯರ್ ಚುನಾವಣೆಗೆ ಸಂಬಂಧಿಸಿದ ಸಮಿತಿಯೊಂದನ್ನು ರಚಿಸಿದ್ದರು, ಆದರೆ ಈ ಸಮಿತಿಯನ್ನು ಒಪ್ಪಲು ನಳೀನ್ ಕಟೀಲ್ ನಿರಾಕರಿಸಿದ್ದಾರೆ.
'ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವು ಯಾವುದೇ ಸಮಿತಿ ರಚಿಸಿಲ್ಲ' ಎಂದು ನಳೀನ್ ಕಟೀಲ್ ಪ್ರಕಟಣೆ ಹೊರಡಿಸಿದ್ದು, ರಾಜ್ಯ ಬಿಜೆಪಿಯ ಸುಪ್ರೀಮೋ ಯಡಿಯೂರಪ್ಪ ಅವರ ನಿಲವಿಗೆ ಪ್ರತಿನಿಲವು ತಳೆಯುವ ಮೂಲಕ ತಮ್ಮ ಅಧಿಕಾರ ಪ್ರದರ್ಶನ ಮಾಡಿದ್ದಾರೆ.

ಮೇಯರ್ ಚುನಾವಣೆ ಸಮಿತಿ ರಚನೆ ಇಲ್ಲ: ನಳಿನ್ ಕಟೀಲ್
'ಮೇಯರ್ ಚುನಾವಣೆಗೆ ಸಮಿತಿ ರಚನೆ ಆಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು, ಬೆಂಗಳೂರಿನ ಮುಖಂಡರೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ' ಎಂದು ನಳೀನ್ ಕಟೀಲ್ ಹೇಳಿದ್ದಾರೆ.

ಮೇಯರ್ ಅಭ್ಯರ್ಥಿ ನಿರ್ಧರಿಸುವ ಅಧಿಕಾರ ಯಡಿಯೂರಪ್ಪಗೆ
ಈಗಾಗಲೇ ಬೆಂಗಳೂರಿನ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮೇಯರ್ ಆಯ್ಕೆಯ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಯಡಿಯೂರಪ್ಪ ಅವರಿಗೇ ನೀಡಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾದ ಪ್ರಕಟಣೆಯನ್ನು ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ.

ರಘು ನೇತೃತ್ವದಲ್ಲಿ ಸಮಿತಿ ರಚನೆ ಆಗಿತ್ತು
ಬೆಂಗಳೂರಿನ ಹಿರಿಯ ಶಾಸಕ ಎಸ್.ರಘು ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ಸಮಿತಿ ರಚಿಸಲಾಗಿತ್ತು. ಅದರಲ್ಲಿ ಬೆಂಗಳೂರಿನ ಪ್ರಮುಖ ಶಾಸಕರುಗಳು ಸದಸ್ಯರಾಗಿದ್ದರು. ಮಂಗಳವಾರ ಸಭೆ ನಡೆಸಿ ಸಮಿತಿಯು ಮೇಯರ್ ಆಕಾಂಕ್ಷಿಗಳ ಪಟ್ಟಿಯನ್ನು ಮುಖ್ಯಮಂತ್ರಿಯವರಿಗೆ ನೀಡಿತ್ತು. ಆದರೆ ಈಗ ಸಮಿತಯೇ ಆಗಿಲ್ಲವೆಂದು ನಳೀನ್ ಹೇಳಿದ್ದಾರೆ.

ರಾಜ್ಯಾಧ್ಯಕ್ಷರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ ಶಾಸಕರು?
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳೀನ್ ಕಟೀಲ್ ಅವರನ್ನು ನೇಮಕ ಮಾಡಲಾಗಿದೆಯಾದರೂ, ಪಕ್ಷದ ಪೂರ್ಣ ಜವಾಬ್ದಾರಿ ಯಡಿಯೂರಪ್ಪ ಹಾಗೂ ಅವರ ಆಪ್ತರೇ ನಿರ್ವಹಿಸುತ್ತಿದ್ದಾರೆ. ರಾಜ್ಯಾಧ್ಯಕ್ಷರ ಮಾತಿಗೆ ಶಾಸಕರು ಕಿಮ್ಮತ್ತು ನೀಡುತ್ತಿಲ್ಲ, ಇದು ನಳೀನ್ ಕಟೀಲ್ ಮತ್ತು ಅವರ ಬೆನ್ನೆಲುಬಾದ ಬಿ.ಎಲ್.ಸಂತೋಶ್ ಅವರಿಗೆ ಅಪಥ್ಯವಾಗಿದೆ ಎನ್ನಲಾಗಿದೆ.

ಉಪಚುನಾವಣೆ ಜವಾಬ್ದಾರಿ ಯಡಿಯೂರಪ್ಪಗೆ
ಉಪಚುನಾವಣೆಯ ಪೂರ್ಣ ಉಸ್ತುವಾರಿಯನ್ನು ಯಡಿಯೂರಪ್ಪ ಹಾಗೂ ಅವರ ಆಪ್ತರೇ ವಹಿಸಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ನಳೀನ್ ಕಟೀಲ್ ಅವರ ಪಾತ್ರವೇನೂ ಇಲ್ಲ ಎನ್ನುವ ಮಟ್ಟಿಗೆ ಪರಿಸ್ಥಿತಿ ಇದ್ದು ಇದು ಹಿಸಾಸಕ್ತಿ ಸಂಘರ್ಷವನ್ನು ಹುಟ್ಟುಹಾಕಿದೆ.












Click it and Unblock the Notifications