ಚುನಾವಣೆಯಲ್ಲಿ ಬಿಜೆಪಿಗೆ ಸೋಲು; ಅಡ್ಡಂಡ ಸಿ. ಕಾರ್ಯಪ್ಪ ರಾಜೀನಾಮೆ
ಬೆಂಗಳೂರು, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ ಆಡಳಿತ ಪಕ್ಷವಾಗಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಪಕ್ಷ ಕೇವಲ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 10ಕ್ಕೂ ಹೆಚ್ಚು ಸಚಿವರು ಸೋಲು ಕಂಡಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ತೇಲಿ ಬಂದಿದ್ದು 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೈಸೂರು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ. ಕಾರ್ಯಪ್ಪ ಭಾನುವಾರ ರಾಜೀನಾಮೆ ನೀಡಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಹೊಸ ಸರ್ಕಾರ ಬಂದ ಬಳಿಕ ರಂಗಾಯಣದ ನಿರ್ದೇಶಕರ ಬದಲಾವಣೆ ಆಗುತ್ತಿತ್ತು. ಅದಕ್ಕೂ ಮೊದಲು ಅಡ್ಡಂಡ ಸಿ. ಕಾರ್ಯಪ್ಪ ರಾಜೀನಾಮೆ ನೀಡಿದ್ದಾರೆ.

'ನನ್ನನ್ನು ನಿರ್ದೇಶಕನನ್ನಾಗಿ ನೇಮಕ ಮಾಡಿದ್ದು ಬಿಜೆಪಿ ಸರ್ಕಾರ. ಬಿಜೆಪಿ ನೇತೃತ್ವದ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಜನಾದೇಶವನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ಮೈಸೂರು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಪರವಾದ ನಿಲುವುಗಳಿಂದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹಲವು ಬಾರಿ ಸುದ್ದಿಯಾಗಿದ್ದರು. ಚುನಾವಣಾ ಪ್ರಚಾರದ ವೇಳೆ ಕೋಮು ದ್ವೇಷ ಸೃಷ್ಟಿಸುವ ರೀತಿಯಲ್ಲಿ ಭಾಷಣ ಮಾಡಿರುವ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153ಎ, 171ಜಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಕಲಂ 125 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಅಡ್ಡಂಡ ಸಿ. ಕಾರ್ಯಪ್ಪ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ರಂಗಾಯಣದ ಆರ್ಥಿಕ ಸ್ಥಿತಿ ಉತ್ತಮ; ಮೈಸೂರು ರಂಗಾಯಣದ ನಿರ್ದೇಶಕರಾದ ಮೇಲೆ ರಂಗಾಯಣದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಅಡ್ಡಂಡ ಸಿ. ಕಾರ್ಯಪ್ಪ ಹೇಳಿದ್ದಾರೆ. 2019ರ ಡಿಸೆಂಬರ್ 31ರಂದು ಅಧಿಕಾರವಹಿಸಿಕೊಂಡಾಗ ರಂಗಾಯಣದ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ಈಗ 2.09 ಕೋಟಿ ರೂ ಠೇವಣಿ ಇದೆ. ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ 1.57 ಕೋಟಿ ಉಳಿತಾಯದ ಹಣವಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಂಸ್ಥೆಯ ನಾಟಕಗಳ ಪ್ರದರ್ಶನ, ದಾನಿಗಳ ನೆರವು, ಅನುದಾನ ಇತ್ಯಾದಿಗಳನ್ನು ಮಿತವ್ಯಯ ಮಾಡಿ ಉಳಿಕೆ ಮಾಡಲಾಗಿದೆ. ಸರ್ಕಾರದ ಇಡುಗಂಟು ಮೊತ್ತ 4 ಕೋಟಿ ಇದ್ದು, ಬಡ್ಡಿ ಮೊತ್ತ 50 ಲಕ್ಷ ಸಂಸ್ಥೆಗೆ ಸಿಗಲಿದೆ. ಒಟ್ಟು 4.16 ಕೋಟಿ ಮೊತ್ತ ಸಂಸ್ಥೆಯ ಖಾತೆಯಲ್ಲಿದೆ. ರಾಜ್ಯದ ಬೇರೆ ರಂಗಾಯಣ ಸಂಸ್ಥೆಗಳ ಖಾತೆಯಲ್ಲಿ 15 ಲಕ್ಷ ಕೂಡ ಉಳಿತಾಯವಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ ಪುಸ್ತಕ; ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಅಡ್ಡಂಡ ಸಿ. ಕಾರ್ಯಪ್ಪ ಬರೆದ 'ಟಿಪ್ಪು ನಿಜ ಕನಸುಗಳು' ಕೃತಿ, ಇದೇ ಹೆಸರಿನ ನಾಟಕ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪುಸ್ತಕ ಮಾರಾಟಕ್ಕೆ, ನಾಟಕ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಕೋರ್ಟ್ಗೆ ಸಹ ಅರ್ಜಿ ಸಲ್ಲಿಕೆಯಾಗಿತ್ತು.
ಟಿಪ್ಪು ನಿಜ ಕನಸುಗಳು ನಾಟಕದಲ್ಲಿ ಟಿಪ್ಪು ಸುಲ್ತಾನ್ ಅವಮಾನಿಸಲಾಗಿದೆ. ಪವಿತ್ರ ಆಜಾನ್ ಅನ್ನು ನಾಟಕದಲ್ಲಿ ಬಳಸಲಾಗಿದೆ ಮತ್ತು ಮುಸ್ಲಿಮರನ್ನು ತುರುಕರು ಎಂದು ಸಂಬೋಧಿಸುವ ಮೂಲಕ ಮುಸ್ಲಿಮರಿಗೆ ನೋವುಂಟು ಮಾಡಲಾಗಿದೆ. ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ದೂರಲಾಗಿತ್ತು.












Click it and Unblock the Notifications