ಕೊರೊನಾ ನಿರ್ಮೂಲನೆ: ಜಗತ್ತಿಗೆ ಮೈಸೂರು ಮಾದರಿಯಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ!
ಬೆಂಗಳೂರು, ಮೇ 15:ಕೊರೊನಾ ವೈರಸ್ ಸೋಕು ತಗುಲಿದ್ರೆ ಸತ್ತೆ ಹೋಗ್ತಾರೆ ಎಂಬಂತಹ ಆತಂಕವಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಕೊರೊನಾ ವೈರಸ್ಗೆ ಜಗತ್ತಿನಾದ್ಯಂತ ಈವರೆಗೆ 3 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಭಾರತವೂ ಸೇರಿದಂತೆ ಜಗತ್ತಿನ 215 ದೇಶಗಳಲ್ಲಿ ಕೋವಿಡ್ 19 ಸೋಂಕು ಹರಡಿದೆ. ಹೀಗಾಗಿ ಇದೊಂದು 'ಅಂತಾರಾಷ್ಟ್ರೀಯ ಆತಂಕದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ' ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.
ಪರಿಸ್ಥೀತಿ ಹೀಗಿರುವಾಗ ಮೈಸೂರು ಮಾತ್ರ ಇಡೀ ಜಗತ್ತಿಗೆ ಮಾದರಿಯಾಗುವಂತೆ ಕೊರೊನಾ ವೈರಸ್ನ್ನು ನಿಯಂತ್ರಿಸಿದೆ. ಆರಂಭದಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿದ್ದ ಮೈಸೂರಿನಲ್ಲೀಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಶೂನ್ಯ!. ಹೌದು ಮೇ 15ರಂದು ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುವುದರೊಂದಿಗೆ ಮೈಸೂರು ಜಿಲ್ಲೆಯಲ್ಲಿನ ಸೋಂಕಿತರೆಲ್ಲ ಗುಣಮುಖರಾಗಿದ್ದಾರೆ.
ಸೋಂಕು ಹರಡದಂತೆ ತಡೆಯುವಲ್ಲಿ ಮಾದರಿ
ಮೈಸೂರು ಜಿಲ್ಲೆಗೆ ನಕ್ಷತ್ರಿಕನಂತೆ ಕಾಡಿದ್ದು ಜ್ಯುಬಿಲಿಯಂಟ್ ಕಾರ್ಖಾನೆ. ಕೊರೊನಾ ಸೋಂಕು ಅಲ್ಲಿ ಹೇಗೆ ಹರಡಿತು ಎಂಬುದು ಈವರೆಗೂ ಗೊತ್ತಾಗಿಲ್ಲ. ಆದರೆ ಕಾರ್ಖಾನೆ ನೌಕರನೊಬ್ಬನಿಗೆ ಸೋಂಕು ದೃಢವಾಗುವ ಮೂಲಕ ಇಡೀ ಜಿಲ್ಲೆಯಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು. ಜೊತೆಗೆ ನಂಜನಗೂಡು ಸೇರಿದಂತೆ ಇಡೀ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹರಡುವ ಆತಂಕವಿತ್ತು.
ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾಗೆ ಲಸಿಕೆ ತಯಾರಿಕೆ
ಒಂದು ಸಾವಿರ ನೌಕರರನ್ನು ಹೊಂದಿರುವ ಜ್ಯುಬಿಲಿಯಂಟ್ ಕಾರ್ಖಾನೆ ನೌಕರನಲ್ಲಿ ಕೊರೊನಾ ವೈರಸ್ ಸೋಂಕು ದೃಢಪಡುತ್ತಿದ್ದಂತೆಯೆ ಮೈಸೂರು ಜಿಲ್ಲಾಡಳಿತ ಸೋಂಕು ನಿಯಂತ್ರಣ ಮಾಡುವ ಬದಲು ಸೋಂಕನ್ನು ಸಂಪೂರ್ಣವಾಗಿ ನಿವಾರಿಸಲು ನೀಲಿ ನಕ್ಷೆ ಸಿದ್ಧ ಪಡಿಸಿತ್ತು. ಮೊದಲಿಗೆ ಮಾಡಿದ್ದು ಜ್ಯುಬಿಲಿಯಂಟ್ ಕಾರ್ಖಾನೆಯ ಸೋಂಕಿತನೊಂದಿಗೆ ನೇರ ಸಂಪರ್ಕ ಹೊಂದಿದ್ದ ಇತರ ನೌಕರರನ್ನು ಐಸೋಲೇಶನ್ ವಾರ್ಡ್ಗೆ ಸ್ಥಳಾಂತರ. ಉಳಿದ ನೌಕರರನ್ನು ಹೋಮ್ ಕ್ವಾರಂಟೈನ್ ಮಾಡಲಾಯ್ತು. ಇದರಿಂದ ಸೋಂಕು ಬೇರೆಡೆ ಹರಡುವುದು ತಡೆಯುವುದು ಸುಲಭವಾಯಿತು.
ಎಲ್ಲ 90 ಜನರು ಸೋಂಕಿನಿಂದ ಗುಣಮುಖ
ಮೈಸೂರು ಜಿಲ್ಲೆಯಲ್ಲಿ ಒಟ್ಟು 90 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಜ್ಯುಬಿಲಿಯಂಟ್ ಕಂಪನಿಯ 74 ನೌನಕಕರು, ದೆಹಲಿ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದ್ದ 8 ಜನರಲ್ಲಿ, ವಿದೇಶದಿಂದ ಮರಳಿದ್ದ ಮೂವರಲ್ಲಿ ಹಾಗೂ ಉಳಿದ 5 ಜನರಲ್ಲಿ ತೀವ್ರ ಉಸಿರಾಟ ತೊಂದರೆ (SARI) ಯಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಸೋಂಕಿರುವುದು ಪತ್ತೆಯಾಗಿತ್ತು.
ಈ ಎಲ್ಲ 90 ಜನರೂ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ ಯಾವುದೇ ಸಾವಿಗೂ ಅವಕಾಶ ಕೊಡದಂತೆ ಮೊದಲೇ ಕ್ವಾರಂಟೈನ್ ಮಾಡಿ ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಸೋಂಕು ದೃಢಪಟ್ಟ ಬಳಿಕ ಅಗತ್ಯ ಚಿಕಿತ್ಸೆ ಕೊಡುವ ಮೂಲಕ ಸೋಂಕಿತರು ಯಾರೊಬ್ಬರು ಕೂಡ ಸಾವಿಗೀಡಾಗದಂತೆ ಸೋಂಕಿತರನ್ನು ಕಾಪಾಡಿದ್ದು ಮೈಸೂರು ಜಿಲ್ಲಾಡಳಿತದ ಸಾಧನೆ.
ದೇಶಕ್ಕೂ ಮೊದಲೇ ಮೈಸೂರಲ್ಲಿ ಲಾಕ್ಡೌನ್
ಇಡೀ ದೇಶಾದ್ಯಂತ ಮಾರ್ಚ್ 21ರಂದು ಜನತಾ ಕರ್ಫ್ಯೂ ಮೂಲಕ ಲಾಕ್ಡೌನ್ಗೆ ಮುನ್ನುಡಿ ಹಾಕಲಾಯ್ತು. ಆದರೆ ಮೈಸೂರಿನಲ್ಲಿ ಮಾತ್ರ ಕೊರೊನಾ ವೈರಸ್ ಸೋಂಕು ಪತ್ತೆಯಾಗುತ್ತಿದ್ದಂತೆಯೆ ಮಾರ್ಚ್ 15ರಿಂದಲೇ ಸೋಂಕು ಹರಡದಂತೆ ಎಲ್ಲ ರೀತಿಯ ನಿರ್ಬಂಧ ಹಾಕಲಾಯ್ತು. ಮೈಸೂರು ದೇಶದಲ್ಲಿಯೆ ಪ್ರಮುಖ ಪ್ರವಾಸಿ ತಾಣವಾಗಿರುವುದರಿಂದ ಮಾರ್ಚ್ 15 ರಿಂದ ಅರಮನೆ, ಮೈಸೂರು ಝೂ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಯಿತು. ಕಟ್ಟುನಿಟ್ಟಿನ ಲಾಕ್ಡೌನ್ ಇಡೀ ದೇಶಕ್ಕಿಂತ ಒಂದು ವಾರ ಮೊದಲೇ ಮೈಸೂರಿನಲ್ಲಿ ಜಾರಿಗೆ ತಂದಿದ್ದು ಅಲ್ಲಿನ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹಾಗೂ ಅವರ ತಂಡ.
ವಲಸೆ ಕಾರ್ಮಿಕರಿಗೆ ಸೌಲಭ್ಯ
ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹಾಗೂ ಅವರ ತಂಡಕ್ಕೆ ಹೆಗಲು ಕೊಟ್ಟು ಕೆಲಸ ಮಾಡಿದ್ದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರು ತಂಡ. ಆರಂಭದಲ್ಲಿಯೆ ಮೈಸೂರು ನಗರಪಾಲಿಕೆ ಆಶ್ರಯದಲ್ಲಿ ವಲಸೆ ಕಾರ್ಮಿಕರಿಗೆ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ನಗರಪಾಲಿಕೆ ಮಾಡಿತು. ಜೊತೆಗೆ ಸ್ಥಳೀಯ ನಿವಾಸಿಗಳಿಗೆ ದಿನಸಿ ಸಾಮಾನುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಮಾಡಿತ್ತು. ಹೀಗಾಗಿ ಜನರು ಮನೆಯಿಂದ ಅನಗತ್ಯವಾಗಿ ಹೊರಗೆ ಬರದಂತೆ ತಡೆಯುವುದು ಸುಲಭವಾಯ್ತು.
ಅಂತಾರಾಜ್ಯ ಗಡಿ ಬಂದ್ ಮಾಡಿದ್ದು
ಸೋಂಕು ಹೆಚ್ಚಾಗುತ್ತಿದ್ದಂತೆಯೆ ಮೈಸೂರು ಹೊಂದುಕೊಂಡಂತಿರುವ ಕೇರಳ ಸೇರಿದಂತೆ ಅಂತಾರಾಜ್ಯ ಗಡಿಗಳನ್ನು ಬಂದ್ ಮಾಡಲಾಯ್ತು. ಪ್ರಮುಖವಾಗಿ ಕೇರಳದಿಂದ ಬರುವ ವಾನಗಳನ್ನು ಎಚ್ಡಿ ಕೇಟೆ ತಾಲೂಕಿನ ಬಾವಲಿ ಎಂಬಲ್ಲಿ ಬಂದ್ ಮಾಡಲಾಗಿತ್ತು. ಅದರಿಂದಾಗಿ ಸೋಂಕು ಬೇರೆ ರಾಜ್ಯಗಳಿಂದ ಬರುವುದು ಹಾಗೂ ಇಲ್ಲಿಂದ ಬೇರೆ ರಾಜ್ಯಗಳಿಗೆ ಹರಡುವುದನ್ನು ತಡೆಯಲಾಯ್ತು. ಆಘ ಜಿಲ್ಲಾಡಳಿತದ ಸಹಾಯಕ್ಕೆ ಬಂದಿದ್ದು ಪೊಲೀಸ್ ಇಲಾಖೆ.
ಶೇಕಡಾ 15 ರಷ್ಟಿದೆ ಸಾವಿನ ಪ್ರಮಾಣ
ಜಾಗತಿಕವಾಗಿ ಕೊರೊನಾ ವೈರಸ್ ಸೋಂಕಿಗೆ ಇವತ್ತಿನವರೆಗೆ 45,43,323 ಜನರು ತುತ್ತಾಗಿದ್ದಾರೆ. 17,13,302 ಗುಣಮುಖರಾಗಿದ್ದು 3,03,709 ವಿಶ್ವಾದ್ಯಂತ ಮೃತಪಟ್ಟಿದ್ದಾರೆ. ಅಂದರೆ ಸೋಂಕಿಗೆ ತುತ್ತಾಗುವವರ ಮರಣದ ಪ್ರಮಾಣ ಸರಾಸರಿ ಶೇಕಡಾ 15 ರಷ್ಟಿದೆ. ನಮ್ಮ ದೇಶದಲ್ಲಿಯೂ ಸೊಂಕಿಗೆ ಈ ವರೆಗೆ ತುತ್ತಾದವರು 82,264 ಜನರಿಗೆ ಸೋಂಕು ತಗುಲಿದೆ, ಅದರಲ್ಲಿ 2,649 ಜನರು ಮೃತಪಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಈವರೆಗೆ 1056 ಜನರು ಸೋಂಕಿಗೆ ತುತ್ತಾಗಿದ್ದು, 36 ಸೋಂಕಿತರು ಮೃತಪಟ್ಟಿದ್ದಾರೆ.
ಆದರೆ 90 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೂ ಒಬ್ಬೆ ಒಬ್ಬ ಸೋಂಕಿತನ ಜೀವಕ್ಕೆ ಅಪಾಯವಾಗದಂತೆ ಆರೈಕೆ ಮಾಡಿದ್ದು ಮೈಸೂರು ಆರೋಗ್ಯ ಇಲಾಖೆ. ಹೀಗಾಗಿ ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಕೂಡ ಅಭಿನಂದಾರ್ಹ.
ಸಹಾಯಕ್ಕೆ ಬಂದಿದ್ದು ಕೊಡಗು ಭೂಕುಸಿತ
ಹಿಂದೆ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಉಂಟಾದಾಗ ಸಂತ್ರಸ್ತರಿಗೆ ಸಹಾಯ ಮಾಡಿದ್ದ ಅನುಭವ ಮೈಸೂರು ಜಿಲ್ಲಾಡಳಿತಕ್ಕೆ ಇತ್ತು. ಹೀಗಾಗಿ ದಾನಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಹಾಯದಿಂದ ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಆಶ್ರಯ ಕಲ್ಪಿಸಿ ಊಟ, ದಿನಸಿ ಹಂಚಿದ್ದರಿಂದ ಜನರು ಸಂಕಷ್ಟಕ್ಕೆ ಈಡಾಗಲಿಲ್ಲ. ಹೀಗಾಗಿ ಜಿಲ್ಲಾಡಳಿತದ ಮನವಿಯನ್ನು ಎಲ್ಲರೂ ಪಾಲಿಸಿದ್ದರು.
ಅಧಿಕಾರಿಗಳ ತಂಡದ ಶ್ರಮ!
ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಸಹಕಾರದಿಂದ ಕೆಲಸ ಮಾಡಿದ್ದರಿಂದ ಕೊರೊನಾ ವೈರಸ್ ಕಟ್ಟಿಹಾಕುವುದು ಸಾಧ್ಯವಾಗಿದೆ. ಜೊತೆಗೆ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ವೈದ್ಯರು, ದಾದಿಯರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದು ಕೂಡ ಸೋಂಕು ಹರಡದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.
ಇಡೀ ಜಗತ್ತಿಗೆ ಈಗ ಮೈಸೂರು ಕೊರೊನಾ ವೈರಸ್ ತಡೆಯುವಲ್ಲಿ, ಸೋಂಕಿಗೆ ತುತ್ತಾದವರ ಜೀವ ರಕ್ಷಣೆಯಲ್ಲಿ ಮಾದರಿಯಾಗಿದೆ. ಅಮೆರಿಕದಂತಹ ಬಲಾಢ್ಯ ದೇಶದಿಂದ ಸಾಧ್ಯವಾಗದ್ದನ್ನು ಮೈಸೂರು ಜಿಲ್ಲೆಯ ಅಧಿಕಾರಿಗಳು, ಜನರು ಮಾಡಿ ತೋರಿಸಿದ್ದಾರೆ. ಮುಂದೆ ಸವಾಲಿದೆ. ಆದರೆ ಈವರೆಗೆ ಮಾಡಿರುವ ಕೆಲಸ ಕಡಿಮೆ ಏನಲ್ಲ!